Sep 5, 2014

ಅಮೆರಿಕಾನುಭವ 2014 - ಭಾಗ 2

ಪ್ರಸಂಗ 2 :

ಇದೇ ಪ್ರವಾಸದ ಕೊನೆಯ ದಿನ ನಾನು ಹೊರಡುವಾಗ ಏರ್ಪೋರ್ಟ್ ಗೆ ಹೋಗಲು ವ್ಯಾನ್ (shared van) ಬುಕ್ ಮಾಡಿದ್ದರು ನನ್ನ ಸ್ನೇಹಿತರು. ಹೊರಡುವಾಗ 'ನಿನ್ನನ್ನು ತಲುಪಿಸುವ ದರವನ್ನು ಆಗಲೇ ನೀಡಿದ್ದೇನೆ. ಏರ್ಪೋರ್ಟ್ ತಲುಪಿಸಿದ ಮೇಲೆ 4-5 ಡಾಲರ್ ಟಿಪ್ಸ್ ಕೊಡು ಸಾಕು ಅವನಿಗೆ' ಎಂದು ಹೇಳಿದರು. ಈ ಅಮೇರಿಕಾದಲ್ಲಿ ಸಾಕಷ್ಟು ಬೇಸರಿಸುವ ವಿಷಯ, ನನಗೆ ಅಷ್ಟು ಸುಲಭವಾಗಿ ಕೊಡಲಾಗದ್ದು, ಈ 'ಟಿಪ್ಸ್'. ಒಂದು ಮಾದರಿಯ ಅಘೋಷಿತ ನಿಯಮ ಈ ಟಿಪ್ಸ್ ಕೊಡುವುದು. ಬೆಳಿಗ್ಗೆ 4.30ರ ಸುಮಾರಿಗೆ ಬಂದ ಅವನು ಅಲ್ಲಿಂದ 70 ಮೈಲುಗಳಷ್ಟು ದೂರವಿದ್ದ ಲಾಸ್ ಏಂಜಲಿಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 5.30 - 6 ರ ಸುಮಾರಿಗೆ ನನ್ನನ್ನು  ತಲುಪಿಸಿದ. ನಾನೂ ಇಳಿದು 4 ಡಾಲರ್ ಗಳನ್ನು ನೀಡಲು ಹೋದರೆ '70 ಮೈಲುಗಳಷ್ಟು ದೂರಕ್ಕೆ 4 ಡಾಲರ್  ಟಿಪ್ಸಾ ಎಂದು ಕೋಪಿಸಿಕೊಂಡು, 'ನನಗೆ ಬೇಡ' ಎಂದು ಹೊರಡಲು ರೆಡಿ ಆದ. ನಾನು ಇನ್ನೊಂದು ಡಾಲರನ್ನೂ ಸೇರಿಸಿ 5 ಡಾಲರ್ ಕೊಡಲು 'ಏತಕ್ಕಾಗಿ ಹೀಗೆ, ಕಡಿಮೆ ಆಯ್ತಾ ಅಥವಾ ಎಷ್ಟು ನಿನ್ನ ಅಪೇಕ್ಷೆ' ಎಂದೆ. ಅದಕ್ಕವನು ಅದೇ ಕೊಪದಲ್ಲೇ 'ಏನೂ ಇಲ್ಲ ಬಿಡಿ, ನೀವೇ ಇಟ್ಟುಕೊಳ್ಳಿ ಇದನ್ನೂ' ಎಂದು ಮತ್ತೊಮ್ಮೆ ಹೊರಡಲು ಸಜ್ಜಾದ. ನನಗೂ ಕೋಪ ಬಂತು, 'ಯುವರ್ ವಿಶ್' ಎಂದು ಉತ್ತರಿಸಿ ಎಸ್ಕೇಪ್ ಆದೆ.... :)


ಪ್ರಸಂಗ 3:

ಇದು ಇತ್ತೀಚೆಗಿನ ಪ್ರಸಂಗ. ಕೃಷ್ಣ ಜನ್ಮಾಷ್ಟಮಿಯ ದಿನ ದೇವಸ್ಥಾನಕ್ಕೆ ಹೋಗುವ ಎಂದು ಯೋಚಿಸಿದ್ದೆ. ಆದರೆ ಅಂದೇ ನನ್ನ ಕ್ರಿಕೆಟ್ ಆಟವಿದ್ದುದರಿಂದ ಹಾಗು ದೇವಸ್ಥಾನ ಅಲ್ಲಿಂದ ಸಾಕಷ್ಟು ದೂರ ಇದ್ದುದರಿಂದ ಹೋಗಲಾಗಲಿಲ್ಲ. ಅದೇ ಯೋಚನೆಯಲ್ಲಿದ್ದಾಗ ನನ್ನ ಮೊಬೈಲಿನ ವಾಟ್ಸ್ ಆಪ್ ನಲ್ಲಿ ಒಂದು ಮೆಸೇಜ್ ಬಂತು. ಮುಂದಿನ ವಾರ ಗ್ರಾಂಡ್ ರಾಪಿಡ್ ನ ಒಂದು ಸ್ಥಳದಲ್ಲಿ ಇಸ್ಕಾನ್ ನವರಿಂದ ಕೃಷ್ಣ ಜನ್ಮಾಷ್ಟಮಿ ಪೂಜೆ ಹಾಗು ಪ್ರಸಾದ ವಿನಿಯೋಗವಿರುತ್ತದೆ ಎಂದು. ನನಗೆ ಇಸ್ಕಾನ್ ದೇವಸ್ಥಾನ ಗ್ರಾಂಡ್ ರಾಪಿಡ್ ನಲ್ಲಿದೆ ಎಂದು ತಿಳಿದಿರಲಿಲ್ಲ, ಇರಬಹುದೇನೋ ಎಂದು ನಾನು ಜಿಪಿಎಸ್ ಹಾಕಿ ಹೊರಟೆ. ಅಲ್ಲಿಗೆ ಹೋದರೆ, ಆ ವಿಳಾಸಕ್ಕೆ ನನ್ನ ಜಿಪಿಎಸ್ ಒಂದು ಸಣ್ಣ ಗುಡಿಸಿಲು ತರಹದ ಜಾಗ ತೋರಿಸುತ್ತಿತ್ತು. ಅದೇ ಸ್ಥಳಕ್ಕೆ ಬೇಕಾದ ಪಾರ್ಕಿಂಗ್ ಸ್ಥಳವೂ ಇರಲಿಲ್ಲ. ಅವಾಗ ಅನುಮಾನ ಬಂತು, ಅದು ದೇವಸ್ಥಾನವಾಗಿರಲು ಸಾಧ್ಯವೇ ಇಲ್ಲ ಎಂದು. 

ಹತ್ತಿರದಲ್ಲಿ ಬೇರೆ ಯಾವ ಪಬ್ಲಿಕ್ ಪಾರ್ಕಿಂಗ್ ಜಾಗವೂ ಕಾಣಲಿಲ್ಲವಾದ್ದರಿಂದ  ಸ್ವಲ್ಪ ಭಯದಿಂದಲೇ ಪಕ್ಕದಲ್ಲಿದ್ದ ಫೈರ್ ಸ್ಟೇಶನ್ ನ ಪಾರ್ಕಿಂಗ್ ನಲ್ಲಿ ಗಾಡಿ ನಿಲ್ಲಿಸಿ ಹೋಗಿ ಮತ್ತೊಮ್ಮೆ ಅದು ದೇವಸ್ಥಾನವಲ್ಲ ಎಂದು ಖಚಿತ ಪಡಿಸಿಕೊಂಡು ವಾಪಸ್ ಹೊರಡುವ ಎಂದು ಬಂದರೆ, ನನ್ನ ಕಾರಿನ ಹಿಂದೆ ಪೋಲೀಸಿನವರ ಕಾರು ನಿಂತಿತ್ತು..! ನನ್ನ ಎದೆ ಡವ ಡವ ಎನ್ನಲು ಶುರು ಮಾಡಿತು. ಕ್ಷಣ ಮಾತ್ರದಲ್ಲಿ ಮುಖದಲ್ಲಿ ಭಯದ ಬೆವರು. ಬಹುಶಃ ನಾನು ಫೈರ್ ಸ್ಟೇಶನ್ ನ ಜಾಗದಲ್ಲಿ ಕಾರನ್ನು ನಿಲ್ಲಿಸಬಾರದಿತ್ತು ಎಂದೆನಿಸುತ್ತದೆ, ಛೆ ನೋ ಪಾರ್ಕಿಂಗ್ ಎಂದೂ ಹಾಕಿಲ್ಲ ಎಂದು ಬೈದುಕೊಳ್ಳುತ್ತಾ,  ಅಥವಾ ರಸ್ತೆ ದಾಟಿದ್ದು ತಪ್ಪಿರಬಹುದಾ, ತಿರುವು ತೆಗೆದು ಕೊಳ್ಳಬಾರದಿತ್ತೇನೋ, ಅಥವಾ ವೇಗವಾಗಿ ಬಂದೆನಾ ಅಥವಾ ಸಿಗ್ನಲ್ ಜಂಪ್ ಮಾಡಿರುವ ನೆನಪಿಲ್ಲ ಎಂದೆಲ್ಲ ಆಲೋಚನೆಗಳೊಂದಿಗೆ ತಪ್ಪು ಮಾಡಿದ್ದರೆ  ತಪ್ಪಿಸಿಕೊಳ್ಳಲಂತೂ ಸಾಧ್ಯವಿಲ್ಲ ಎಂದೇ ಧೈರ್ಯ ಮಾಡಿ ಬಂದು ನಾನೇ 'ಹೈ , ಹೌ ಆರ್ ಯು ಡೂಯಿಂಗ್ ಟುಡೇ ?' ಎಂದು ಪ್ರಾರಂಭಿಸಿ 'ನಾನು ಏನಾದರೂ ತಪ್ಪು ಮಾಡಿದ್ನಾ?' ಎಂದು ಅವರನ್ನೇ ಕೇಳಿದೆ. ಅದಕ್ಕವರು ಪಕ್ಕದಲ್ಲಿದ್ದ ಇನ್ನೊಂದು ಕಾರನ್ನು ತೋರಿಸಿ 'ನಾವು ಬಂದಿದ್ದು ಆ ಕಾರಿಗಾಗಿ, ಅದರ ಮಾಲೀಕರು ಇವರು, ಕಳುವಾಗಿತ್ತು ಅದು, ಅದನ್ನು ಹುಡುಕುತ್ತಿದ್ದೆವು, ನಿಮ್ಮದೇನು ತಪ್ಪಿಲ್ಲ, ನಿಶ್ಚಿಂತೆಯಿಂದಿರಿ' ಎಂದು ಹೇಳಿದಾಗ ಹೋದ ಪ್ರಾಣ ಬಂದಂತಾಗಿತ್ತು.... 

ಮನಸ್ಸಿನಲ್ಲೇ ದೇವರಿಗೊಂದು ಕೃತಜ್ಞತೆ ಅರ್ಪಿಸಿ, ಯಾವ ತಪ್ಪನ್ನೂ ಮಾಡಿಸಬೇಡ ಭಗವಂತ ಎಂದು ವಿನಂತಿಸಿ ಮನೆ ಕಡೆಗೆ ಹೊರಟೆ.....

Sep 2, 2014

ಅಮೆರಿಕಾನುಭವ 2014 - ಭಾಗ 1

ಇತ್ತೀಚೆಗೆ ಸ್ಯಾನ್ ಡಿಯಾಗೋ - ಲಾಸ್ ಏಂಜಲಸ್ ಪ್ರವಾಸಕ್ಕೆ ಹೋಗಿದ್ದೆ (ಜೂನ್ 3 ರಿಂದ 7). ಅದರ ಕೆಲವು ಅನುಭವವನ್ನ ಆದಷ್ಟು ಚಿಕ್ಕದಾಗಿ ಬರೆದಿಟ್ಟು ಕೊಳ್ಳುವ ಪ್ರಯತ್ನ. 

ಜೂನ್ 3ರ ಗುರುವಾರ ಬೆಳಿಗ್ಗೆ 8.20 ಕ್ಕಿದ್ದ ಹಾಲೆಂಡ್ (ನಾನಿರುವ)ನಿಂದ ಚಿಕಾಗೊಗೆ ರೈಲು ಹಿಡಿದು ತಲುಪಿ ಅಲ್ಲಿಂದ ಮೆಟ್ರೋ ರೈಲು ಹಿಡಿದು ಓ'ಹರೆ ವಿಮಾನ ನಿಲ್ದಾಣವನ್ನು ತಲುಪಿದೆ. ರೈಲು 1 ಗಂಟೆ ತಡವಾಗಿ ಚಿಕಾಗೊ ತಲುಪಿತ್ತು. 2-3 ತಾಸುಗಳ ಕಾಯುವಿಕೆಯ ನಂತರ ಇನ್ನೇನು ಬೋರ್ಡ್ ಆಗಬೇಕು ಅನ್ನುವಷ್ಟರಲ್ಲಿ ಲಾಸ್ ಏಂಜಲೀಸ್ ಗೆ ಹೋಗಬೇಕಿದ್ದ ಸ್ಪಿರಿಟ್ ವಿಮಾನ 2 ತಾಸು ವಿಳಂಬವಾಗಿತ್ತು. ವಾತಾವರಣ ಅನುಕೂಲವಾಗಿದ್ದರೂ ಯಾವುದೇ ಕಾರಣ ನೀಡದೇ ವಿಮಾನವನ್ನು ತಡವಾಗಿಸಿದ್ದಕ್ಕೆ ಪ್ರಯಾಣಿಕರು ಜಗಳಮಾಡುತ್ತಿದ್ದರು. ಆದರೂ ಅವನೇನು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ವಿಧಿಯಿಲ್ಲದೇ ಪ್ರಯಾಣಿಕರು ಕಾಯಬೇಕಾಯಿತು.

ಸಂಜೆ 6 ಕ್ಕೆ ತಲುಪಬೇಕಿದ್ದ ವಿಮಾನ 8.30ಗೆ ತಲುಪಿತ್ತು. ಅಲ್ಲಿಂದ ನನ್ನ ಆತ್ಮೀಯ ಬಂಧುವೊಬ್ಬರು ಬಂದು ಸ್ಯಾನ್ ಡಿಯಾಗೋಗೆ ಕರೆದುಕೊಂಡು ಹೋದರು. ಗುರುವಾರ ರಾತ್ರಿಯಿಂದ ಶನಿವಾರ ಬೆಳಿಗ್ಗೆಯವರೆಗೆ ಸ್ಯಾನ್ ಡಿಯಾಗೋದಲ್ಲಿದ್ದು ಶುಕ್ರವಾರ ಅಲ್ಲಿನ ಸೀವರ್ಲ್ಡ್ ನೋಡಿ, ಹತ್ತಿರದ ಕೊರೋನಾಡೋ ಐಲ್ಯಾಂಡ್ ಅನ್ನು ನೋಡಿ ಬಂಧುಗಳ ಜೊತೆ ಕೆಲವು ಗಂಟೆಗಳ ಸಮಯ ಕಳೆದು ಶನಿವಾರ ಬೆಳಿಗ್ಗೆ 10 ಗಂಟೆಯ ಗ್ರೇಹೌಂಡ್ ಬಸ್ ಮೂಲಕ ಲಾಸ್ ಏಂಜಲಿಸ್ ತಲುಪಿದೆ.
ಲಾಸ್ ಏಂಜಲೀಸ್ ಗೆ ಮಧ್ಯಾಹ್ನ 12 ರ ಸುಮಾರಿಗೆ ಬಂದಿಳಿದು ಗ್ರೇಹೌಂಡ್ ಬಸ್ ಸ್ಟಾಂಡ್ ನಿಂದ ಯೂನಿವರ್ಸಲ್ ಸ್ಟುಡಿಯೊಸ್ ಗೆ ಟ್ಯಾಕ್ಸಿ ಮಾಡಿಕೊಂಡು ಹೋಗಿ ಅಲ್ಲಿ ಸಂಜೆ 8 ರ ತನಕ ಸಮಯ ಕಳೆದು ನನ್ನ ಆತ್ಮೀಯರೊಬ್ಬರ ಮನೆಗೆ ಹೋಗಿ, ಉಳಿದು ಮಾರನೇ ದಿನ ಅವರ ಜೊತೆ ಹತ್ತಿರದ ಕೆಲವು ಸ್ಥಳಗಳಿಗೆ ಹೋಗಿ ಸಮಯ ಕಳೆದು ಸಂಜೆ ಇನ್ನೊಬ್ಬರು ಆತ್ಮೀಯರೊಬ್ಬರ ಮನೆಗೆ ಹೋಗಿ, ಉಳಿದು ಸೋಮವಾರ ಬೆಳಗಿನ ಜಾವ ಹೊರಟು 8.30 ರ ವಿಮಾನ ಹಿಡಿದು ಚಿಕಾಗೋ ತಲುಪಿದೆ. ಮಧ್ಯಾಹ್ನ 2 ರ ಸುಮಾರಿಗೆ ತಲುಪಿದ ನನ್ನ ವಿಮಾನ ಅಲ್ಲಿಂದ ಸಿಟಿಎ ರೈಲಿನ ಮೂಲಕ ಚಿಕಾಗೊದ ಯೂನಿಯನ್ ಸ್ಟೇಶನ್ ತಲುಪಿ ಸಂಜೆ 5 ಕ್ಕಿದ್ದ ರೈಲಿನ ಮೂಲಕ ಹಾಲೆಂಡ್ ತಲುಪಿ, ರಾತ್ರಿ 9.30ರ ಸುಮಾರಿಗೆ ಮನೆ ತಲುಪಿದೆ. 
ಇವಿಷ್ಟು ನನ್ನ ಪ್ರಯಾಣದ ಸಂಕ್ಷಿಪ್ತ ವಿವರ. ಈಗ 'ಅನುಭವ ಪ್ರಸಂಗ'ಗಳ ವಿಷಯಕ್ಕೆ ಬರೋಣ.

ಪ್ರಸಂಗ 1 :

ಯುನಿವರ್ಸಲ್ ಸ್ಟುಡಿಯೋ ನೋಡಿ ಹೊರಡುವಾಗ ನಾನು ರೈಲನ್ನು ಹಿಡಿದು ಹೋಗಬೇಕಾಯಿತು. ಅಕಸ್ಮಾತ್ ಯೋಜನೆಯಲ್ಲಿ ಬದಲಾವಣೆಯಾದರೆ ತಾನು ಹೋಗಬೇಕಿದ್ದ ಟೋರ್ರನ್ಸ್ ಗೆ ಹೇಗೆ ಹೋಗಬೇಕು ಎನ್ನುವ ತಯಾರಿಮಾಡಿಕೊಂಡಿರಲಿಲ್ಲ ಹಾಗಾಗಿ ಸ್ವಲ್ಪ ಎಡವಟ್ಟಾಯಿತು. ಯಾರಿಗೂ ಮಾಹಿತಿ ಇರವುದಿಲ್ಲವೋ ಏನೋ, ಒಟ್ಟಿನಲ್ಲಿ ಕೇಳಿದವರೆಲ್ಲರೂ 'ನನಗೆ ಗೊತ್ತಿಲ್ಲ' ಎಂದವರೆ. ಸುಮಾರು 1 ಗಂಟೆಗಳ ಕಾಲ ಪರದಾಡಿ ಅವರಿವರನ್ನು ಕೇಳಿದರೂ ಏನೂ ಸಹಾಯವಾಗಲಿಲ್ಲ. ಕೊನೆಗೆ ದೇವರಮೇಲೆ ಭಾರ ಹಾಕಿ ಡೌನ್ ಟೌನ್ ಗೆ ಹೋದರಾಯಿತು, ಅಲ್ಲಿಂದ ನನ್ನ ಸ್ನೇಹಿತರಿಗೆ ಫೋನಾಯಿಸಿದರಾಯಿತು ಎಂದು ಟ್ರೈನ್ ಹತ್ತಿದೆ. ಅದೂ ಒನ್ ವೇ ಟಿಕೆಟ್ ನಲ್ಲಿ. ಟ್ರೈನಿನಲ್ಲಿ ಒಬ್ಬರು ಒಂದು ಸ್ಟೇಷನ್ ಹೆಸರು ಹೇಳಿ ಅಲ್ಲಿಂದ ಟೋರ್ರನ್ಸ್ ಗೆ ಹತ್ತಿರವಾಗುತ್ತದೆ ಎಂದು ಹೇಳಿದರು. ಅದು Downtown ಗಿಂತ ಹಿಂದಿನ ಸ್ಟೇಶನ್ ಆಗಿತ್ತು. ನಾನು ಹಾಗೆಯೇ ಮಾಡಿದೆ. ಅಲ್ಲಿ ಇಳಿದು ಹೊರಗೆ ಬಂದರೆ ಜನರ ವಾಸನೆಯೂ ಕಾಣಲಿಲ್ಲ..! ಯಾವ ಮಾಹಿತಿಯೂ ಸಿಗುವ ಕುರುಹೂ ಕಾಣಲಿಲ್ಲ! ಕೊನೆಗೆ ಡೌನ್ ಟೌನ್ ಗೆ ಅಂದರೆ ಯೂನಿಯನ್ ಸ್ಟೇಷನ್ನಿಗೇ ಹೋಗುವ ಎಂದು ಮತ್ತೆ ಟ್ರೈನ್ ಹತ್ತಲು ಬಂದರೆ ಒನ್ ವೇ ಟಿಕೆಟ್ ಆದ ಕಾರಣ ಟಿಕೆಟ್ ಕೆಲಸ ಮಾಡಲಿಲ್ಲ..! ಹಾಗೆಯೇ ಒಳಗೆ ಹೋಗಲು  ಪ್ರಯತ್ನಿಸುತ್ತಿರುವಾಗಲೇ ಒಬ್ಬಾಕೆ ಬಂದು ಬಾಗಿಲು ತೆರೆದು ಕೊಟ್ಟು ಹೋದಳು. ನಾನೂ ಧನ್ಯವಾದ ಅರ್ಪಿಸಿ ರೈಲು ಹಿಡಿದು ಡೌನ್ ಟೌನ್ ಸ್ಟೇಷನ್ನಾದ ಯೂನಿಯನ್ ಸ್ಟೇಷನ್ನಿಗೆ  ಬಂದಿಳಿದೆ. 

ಹೊರಗೆ ಬಂದು ಟೋರ್ರನ್ಸ್ ಗೆ ಹೋಗುವ ಬಗೆಯನ್ನು ಹುಡುಕುತ್ತಿರುವಾಗಲೇ ನನ್ನ ಮೊಬೈಲ್ ನಲ್ಲಿ ಚಾರ್ಜ್ ಮುಗಿದು ಹೋಗುವ ಸೂಚನೆ ಕೊಡುತ್ತಿತ್ತು. ತಕ್ಷಣ ನನ್ನ ಸ್ನೇಹಿತರಿಗೆ ಫೋನಾಯಿಸಿ 'ನನ್ನ ಮೊಬೈಲ್ ಕೈ ಕೊಡುವ ಎಲ್ಲ ಲಕ್ಷಣಗಳೂ ಇವೆ. ನಾನು ಯೂನಿಯನ್ ಸ್ಟೇಶನ್ ಗೆ ಬಂದಿಳಿದಿದ್ದೇನೆ. ನಾನೊಬ್ಬನೇ ನಿಮ್ಮ ಮನೆಗೆ ಬರುವ ಸಾಹಸ ಮಾಡಲು ಆಗುವುದು ಅನುಮಾನ. ದಯವಿಟ್ಟು ಎಷ್ಟು ಹೊತ್ತಾದರೂ ನೀವೇ ಬಂದು ನನ್ನನ್ನು ಕರೆದುಕೊಂಡು ಹೋಗಿ ' ಎಂದೆ. ಸಾಕಷ್ಟು ದೂರದ ಊರಿಗೆ ಹೋಗಿದ್ದ ನನ್ನ ಸ್ನೇಹಿತರು ಬರುವುದು ತಡವಾಗುತ್ತದೆ. ಪರವಾಗಿಲ್ಲ ನೀನಲ್ಲೇ ಇರು ಎಂದು 'ಸಮಾಧಾನ' ನೀಡಿದರು. ನಾನು ಅಷ್ಟರೊಳಗೆ ಮೊಬೈಲನ್ನು ಬದುಕಿಸುವ ಎಂದು ಚಾರ್ಜರ್ ಪಾಯಿಂಟನ್ನು ಹುಡುಕುತ್ತಿದ್ದೆ. ಆದರೆ ರಾತ್ರಿ 9.30 - 10 ಆಗಿದ್ದ ಕಾರಣ ಎಲ್ಲ ಚಾರ್ಜಿಂಗ್ ಪಾಯಿಂಟ್ ಗಳನ್ನೂ ಮುಚ್ಚಿದ್ದರು. ಬಹುಶಃ ಮನೆಗೆ ಬೇಗ ಹೋಗುವ ಮನಸ್ಸನ್ನು ಜನ ಮಾಡುವುದಿಲ್ಲ ಎಂಬ ಕಾರಣಕ್ಕಾಗಿಯೋ ಏನೋ..! ನಾನೂ  ಅಸಹಾಯಕನಾಗಿ ನಿಂತಿದ್ದೆ. ಇದ್ದ ಒಂದೇ ಸಂಪರ್ಕ ಮಾಧ್ಯಮ ಕೈ ಕೊಟ್ಟಿರುವಾಗ ನನ್ನ ಸ್ನೇಹಿತರು ಬಂದರೆ ನನ್ನನ್ನು ಅವರು ಸಂಪರ್ಕಿಸದೇ ನಾನು ಮನೆ ತಲುಪುವುದಾದರೂ ಹೇಗೆ ಎಂದು ಯೋಚಿಸುತ್ತಿರುವಾಗ ಅಲ್ಲೇ ಒಂದು ಫ್ಯಾನು ಓಡುತ್ತಿರುವುದು ಕಂಡಿತು. ಹೋಗಿ ನೋಡಿದರೆ ಆ ಚಾರ್ಜಿಂಗ್ ಪಾಯಿಂಟನ್ನು ಮಾತ್ರ ಮುಚ್ಚಿರಲಿಲ್ಲ...! 

ತಕ್ಷಣ ಹಿಂದೆ-ಮುಂದೆ ನೋಡದೆ ಫ್ಯಾನನ್ನು ತೆಗೆದು ನನ್ನ ಮೊಬೈಲ್ ಚಾರ್ಜಿಗಿಟ್ಟೆ. ಮರು ಕ್ಷಣವೇ ಪೋಲೀಸಿನಾಕೆ ಬಂದು ಗದರಿಸಿದಳು, 'ಎಲ್ಲ ಚಾರ್ಜಿಂಗ್ ಪಾಯಿಂಟುಗಳನ್ನು ಮುಚ್ಚಿರುವುದು ಕಾಣಲಿಲ್ಲವೇ ? ಇಲ್ಲಿ ಫ್ಯಾನಿನ ಪಾಯಿಂಟನ್ನೇ ಬಳಸುತ್ತಿರುವೆಯಲ್ಲ... !?' ಎಂದು. ಅದಕ್ಕೆ ನಾನು 'ನನ್ನ ಸ್ನೇಹಿತರೊಬ್ಬರು ಬರುತ್ತಿದ್ದಾರೆ ನನ್ನ ಕರೆದುಕೊಂಡು ಹೋಗಲು. ಆದರೆ ನನ್ನ ಮೊಬೈಲ್ ಗೆ ಚಾರ್ಜ್ ನ ಅವಶ್ಯಕತೆ ಇದೆ. ಇಲ್ಲದಿದ್ದರೆ ನಾನು ಮನೆಗೆ ಹೋಗಲಾಗುವುದಿಲ್ಲ . ಇದು ಅಕ್ಷರಶಃ ಎಮರ್ಜೆನ್ಸಿ' ಎಂದೆ ! ಅದಕ್ಕವರು 'ಎಷ್ಟು ಹೊತ್ತು' ಎಂದು ಮತ್ತೂ ಗದರಿಸಿದರು. ಇವರನ್ನು ಕಳಿಸಿದರೆ ಮತ್ತೆ ಬರುವುದು ಅನುಮಾನ ಎಂಬ ಧೈರ್ಯದಿಂದ, ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ, ನಾನು, 'ಕೇವಲ 10 ನಿಮಿಷ. ಆಮೇಲೂ ನಾನಿಲ್ಲೇ ಇದ್ದರೆ ನೀವೇ ಡಿಸ್ಕನೆಕ್ಟ್ ಮಾಡಿ ಬಂದು' ಎಂದೆ. ಆಯ್ತು ಎಂದವರೇ ಹೊರಟು ಹೋದರು. ಬದುಕಿದೆಯಾ ಬಡಜೀವವೇ ಎಂದುಕೊಂಡೆ. 

ಆ ಹೊತ್ತಿನಲ್ಲೇ ಇನ್ನೊಬ್ಬ ತನ್ನ ಮೊಬೈಲನ್ನು ಬದುಕಿಸಲು ನಾನು ಹೊರಡುವುದನ್ನೇ ಕಾಯುತ್ತಿದ್ದ. ನನ್ನ ಸ್ನೇಹಿತರು ಬಂದ ಮೇಲೆ ನಾನು ಹೊರಟೆ. ನಾನು ಹೊರಡುವಾಗ ಹಿಂದೆ ತಿರುಗಿ ನೋಡಿದಾಗ ಆಕೆ ಅವನಿಗೆ ಅವಕಾಶ ಕೊಡಲಿಲ್ಲ.

(ಮುಂದುವರೆಯುವುದು... )

Jun 7, 2014

ಕಾಲೇಜುಗಳ ಕಾಂಗ್ರೆಸ್ಸೀಕರಣ... ! ?

ಇತ್ತೀಚೆಗೆ ಧಾರವಾಡ ಬಳಿಯ ಐಟಿಐ ಕಾಲೇಜಿನಲ್ಲಿ ನಡೆದ ಪ್ರಬಂಧ ಸ್ಪರ್ಧೆಯೊಂದರಲ್ಲಿ ಗೆದ್ದವರಿಗೆ ಬಹುಮಾನವಾಗಿ ಕೆಲವು ಪುಸ್ತಕಗಳನ್ನು ನೀಡಲಾಗುತ್ತದೆ ಎಂದು ತಿಳಿದು ಖುಷಿಯಾಗಿತ್ತು. ಆದರೆ ಸ್ಪರ್ಧೆ ಮುಗಿದ ನಂತರ ಬಹುಮಾನ ವಿಜೇತರ ಕೈಗೆ ಸಿಕ್ಕ ಪುಸ್ತಕ ನೋಡಿದರೆ ಕೆಲವು ರಾಜಕೀಯ ವ್ಯಕ್ತಿಗಳ ವಿಕೃತ ಮನಸ್ಸುಗಳ ಅನಾವರಣವಾಗುತ್ತದೆ. ನನ್ನೊಬ್ಬ ಆತ್ಮೀಯರಿಗೆ ಸಿಕ್ಕ ಪುಸ್ತಕ, ಇನ್ನೊಬ್ಬರ ಏಳಿಗೆಯ ಕುರಿತಾದ ಅಸೂಯೆಯ ಪ್ರತೀಕವಾದ, ನಕಾರಾತ್ಮಕ ಮನೋಭಾವದ 'ಸುರೇಶ್ ಭಟ್ ಬಕ್ರಬೈಲ್ ಅವರು ಬರೆದ "ಮಂಕು ಬೂ(ಮೋ)ದಿ-ಹಿಟ್ಲರ್ ರ ಹೆಜ್ಜೆ ಜಾಡುಗಳು"!' ಆದರೆ ಇದನ್ನು ನೋಡಿ ಯಾರಿಗೂ ಇದರ ಹಿಂದಿನ ದುರುದ್ದೇಶಗಳು ಗೋಚರಿಸುವುದೇ ಇಲ್ಲ. ತಮ್ಮ ಬಗ್ಗೆ, ತಾವೇನು ಜನರಿಗೆ ಒಳ್ಳೆಯದನ್ನು ಮಾಡಿದ್ದೇವೆ ಎನ್ನುವ ವಿಷಯವನ್ನು ಇಟ್ಟುಕೊಂಡು ಜನರ ಬಳಿಗೆ ಹೊಗಲು ಸಾಧ್ಯವಿಲ್ಲ, ಮೋದಿಯ ಎದುರು ನಿಲ್ಲಲು ಹೆಚ್ಚಾಗಿ ಏನೂ ವಿಷಯವಿಲ್ಲ ಎಂದರಿತ ಕಾಂಗ್ರೆಸ್ಸಿಗರು, ಮೋದಿಯ ಕುರಿತಾಗಿ ಸಮಾಜದಲ್ಲಿ ದ್ವೇಷವನ್ನು, ಅಸಹನೆಯನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ. ತನಗೆ ಸಿಗದಿದ್ದರೂ ಇನ್ನೊಬ್ಬರಿಗೆ ಸಿಗುವುದನ್ನು ತಪ್ಪಿಸಲು ಹೊರಟರೆ ಕೊನೆಗೆ ಧುರ್ಯೋಧನನಿಗಾದ ಪರಿಸ್ಥಿತಿಯೇ ಇವರಿಗೆ ಕಟ್ಟಿಟ್ಟ ಬುತ್ತಿ ಎಂದು ಆದಷ್ಟು ಬೇಗ ಅರಿತರೆ ಭವಿಷ್ಯದ ಕನಸು ಕಾಣಬಹುದು. 

ತಮ್ಮ ಶೈಕ್ಷಣಿಕ ಸಂಸ್ಥೆಗಳನ್ನು ತಮ್ಮ ರಾಜಕೀಯದ ಭವಿಷ್ಯದ 'ಓಟು'ಗಳನ್ನು ನಿರ್ಮಾಣ ಮಾಡಲು ಬಳಸುವಂತಹ ಕೆಟ್ಟ ಮನಸ್ಸಿನ ಫುಡಾರಿಗಳು ಇರುವವರೆಗೂ ನಮ್ಮ ದೇಶದ ರಾಜಕೀಯ ವ್ಯವಸ್ಥೆ ಸರಿಯಾಗಲು ಸಾಧ್ಯವಿಲ್ಲ. ನಾನೂ ಸಹ ಕಾಂಗ್ರೆಸ್ ನೇತೃತ್ವದ ಕಾಲೇಜುಗಳಲ್ಲೇ ಓದಿದ್ದರೂ ಕಾಲೇಜಿನ ಆಡಳಿತ ಒಂದು ಬಾರಿಯೂ ತಮ್ಮ 'ನಕಾರಾತ್ಮಕ' ವಿಚಾರವನ್ನು ಬೆಳೆಸಲು ಪ್ರಯತ್ನಿಸುವುದನ್ನು ಕಂಡಿಲ್ಲ. ಆದರೆ ನನ್ನ ಕಾಲೇಜು ಬರೀ ಅಪವಾದವಾಗಿರಬಹುದಷ್ಟೇ.!

( ಈ ನನ್ನ ಮೇಲಿನ ಬರಹ ದಿನಾಂಕ ಮೇ 13, 2014ರ 'ಕನ್ನಡಪ್ರಭ'ದಲ್ಲಿ ಪ್ರಕಟವಾಯಿತು )


May 22, 2014

ವಿವೇಕಾನಂದ ಶಿಲಾಸ್ಮಾರಕದ 'ಅದ್ಭುತ'ಗಾಥೆ - ಭಾಗ ೪

ಸಬ್ ಕೆ ಸಾಥ್ , ಸಬ್ ಕಾ ಸಾಥ್ :

1970ರ ಸೆಪ್ಟೆಂಬರ್ 2ರ ಶಿಲಾಸ್ಮಾರಕದ ವಿದ್ಯುಕ್ತ ಉದ್ಘಾಟನೆಯಾದ ಒಂದು ತಿಂಗಳ ನಂತರ "ಏಕನಾಥಜಿ, ಇಷ್ಟೊಂದು ದೊಡ್ಡ ಚಮತ್ಕಾರವನ್ನು ಮಾಡಿ ತೋರಿಸಿದ ಬಳಿಕ ಈಗ ನಿಮಗೇನನ್ನಿಸುತ್ತಿದೆ?" ಎಂದು ಕೇಳಿದ್ದಕ್ಕೆ "ಈ ಚಮತ್ಕಾರವನ್ನು ನಾನು ಮಾಡಿದ್ದಲ್ಲ. ಭಾರತದ ಆ ಜಾಗೃತ ಚೇತನವೇ ಮಾಡಿ ತೋರಿಸಿದ್ದು. ನೋಡಲಿಕ್ಕೇನೋ ಅದು ಮೂರ್ಛಿತಾವಸ್ಥೆಯಲ್ಲಿದ್ದಂತಿದ್ದರೂ ಒಳಗಿಂದೊಳಗೆ ಅದು ಸಶಕ್ತವಾಗಿದ್ದು ಅದು ಜೀವಂತವಾಗಿಯೂ ಇದೆ. ಈಗ ನಾನು ಕಳೆದ 7 ವರ್ಷಗಳ ಹಿಂದಿನ ಜೀವನದತ್ತ ನೋಡಿದರೆ ಸ್ವತಃ ನನಗೇ ಆಶ್ಚರ್ಯವಾಗುತ್ತದೆ, ಯಾವ ಮಹಾಶಕ್ತಿಯು ನನ್ನನ್ನು ಅದರ ಕೈಗೊಂಬೆಯಾಗಿಸಿಕೊಂಡು ಈ ಮಹತ್ಕಾರ್ಯವನ್ನು ಮಾಡಿಸಿತು ಎಂದು. ನನಗಂತೂ ಸಂಘದ ಕಾರ್ಯದ ಹೊರತಾಗಿ ಬೇರ್ಯಾವ ಅನ್ಯಪದ್ದತಿಯಿಂದ ಸಾರ್ವಜನಿಕ ಕಾರ್ಯಗಳನ್ನು ಮಾಡಿಸಿದ ಅನುಭವವಿಲ್ಲ. ನಿರ್ಮಾಣಕಲೆ, ವಾಸ್ತುಕಲೆ, ಪ್ರಚಾರಕಲೆ, ಇತ್ಯಾದಿಗಳೆಲ್ಲೆಲ್ಲ ಸ್ವಲ್ಪವೂ ಜ್ಞಾನ ಇದ್ದಿರಲಿಲ್ಲ. ಆದರೆ ಈ 7 ವರ್ಷಗಳಲ್ಲಿ ಯಾವುದೊ ಅದೃಶ್ಯ ಶಕ್ತಿಯು ನನ್ನನ್ನು ಕುಣಿಸುತ್ತಲೇ ಇತ್ತು, ನಾನೂ ಕುಣಿಯುತ್ತಲೇ ಇದ್ದೆ"  ಎಂದರು. 


ಶಿಲಾ ಸ್ಮಾರಕದ ಆರ್ಥಿಕ ಬಜೆಟ್ ಕನ್ಯಾಕುಮಾರಿ ಜಿಲ್ಲಾ ಸಮಿತಿಯ 40000 ರುಪಾಯಿಗಳಿಂದ ಹೆಚ್ಚಾಗುತ್ತಾ ಬಂದು 1 ಕೋಟಿ 35 ಲಕ್ಷ ರೂಪಾಯಿಗಳ ಹಂತಕ್ಕೆ ಹೋಗಿ ನಿಂತಿತು . ಈ ದೊಡ್ಡ ಪ್ರಮಾಣದ ಧನರಾಶಿಯನ್ನು ಹೊಂದಿಸುವುದು ಸುಲಭದ ಕೆಲಸವಾಗಿರಲಿಲ್ಲ. 1965ರ ಭಾರತ ಪಾಕಿಸ್ತಾನ ಯುಧ್ಧ ಹಾಗು ರುಪಾಯಿಯ ಅಪಮೌಲ್ಯದ ಕಾರಣದಿಂದಾಗಿ ದೇಶವು ಗಂಭೀರವಾದ ಅರ್ಥಿಕ ಸಂಕಷ್ಟ ಎದುರಿಸುತ್ತಿತ್ತು.  ಎಷ್ಟೋ ಬಾರಿ ಹಣದ ಅಭಾವದಿಂದ ಕೆಲಸಗಾರರಿಗೆ ಅಲ್ಪವೇತನವನ್ನೂ ಕೊಡಲಾಗುತ್ತಿರಲಿಲ್ಲ. ಇದರಿಂದಾಗಿ ಕೆಲಸಗಾರರನ್ನು ಉಳಿಸಿಕೊಳ್ಳಲೂ ಕಷ್ಟವಾಗುತ್ತದೇನೋ ಎಂದು ಕೆಲವೊಮ್ಮೆ ಅನಿಸುತ್ತಿತ್ತು. ಆದರೆ ಏಕನಾಥಜಿಯವರ ನಿಸ್ವಾರ್ಥ ಸಾಧನೆ ಮತ್ತು ಶಿಲಾಸ್ಮಾರಕದಿಂದ ಸ್ಫುರಿಸುತ್ತಿರುವ ಆಧ್ಯಾತ್ಮ ಚೇತನದಿಂದ ಪ್ರೇರಿತರಾಗಿ 'ನಾವು ನಮ್ಮ ಕುಟುಂಬದವರನ್ನು ಊರಿಗೆ ಕಳುಹಿಸಿದ್ದೇವೆ, ಅಲ್ಲಿ ಅವರಿಗೆ ತಕ್ಕ ಮಟ್ಟದ ವ್ಯವಸ್ಥೆ ಮಾಡಬಹುದು. ತಾವು ಇಲ್ಲೀಗ ನಮ್ಮ ಹೊಟ್ಟೆ ತುಂಬುವಷ್ಟರ ಮಟ್ಟಿಗೆ ವ್ಯವಸ್ಥೆ ಮಾಡಿದರೆ ಸಾಕು, ನಾವಿಲ್ಲಿ ಕೆಲಸ ಮಾಡುತ್ತಾ ಇರುತ್ತೇವೆ, ತಮ್ಮ ಬಳಿ ಹಣ ಬಂದ ನಂತರ ಕೊಟ್ಟರೆ ಸಾಕು ' ಎಂದು ಸ್ವತಃ ಕೆಲಸಗಾರೇ ಏಕನಾಥರ ಬಳಿ ತಿಳಿಸಿದ್ದರಂತೆ!

ಧನಸಂಗ್ರಹ ಅಭಿಯಾನವನ್ನು ಏಕನಾಥರು ರಾಷ್ಟ್ರೀಯ ಯಜ್ಞವನ್ನಾಗಿ ರೂಪಿಸಿದರು. ಅವರು ರಾಜ್ಯ ಮಟ್ಟದಲ್ಲಿ ಶಿಲಾಸ್ಮಾರಕ ಸಮಿತಿಗಳನ್ನು ಸಂಘಟಿಸಲಾರಂಭಿಸಿದರು. ತನ್ಮೂಲಕ ಈ ಸಮಿತಿಗಳಲ್ಲಿ ಆಯಾ ರಾಜ್ಯಗಳ ಎಲ್ಲಾ ವಿಚಾರಧಾರೆಗಳ ಪ್ರಭಾವಶಾಲಿ ಪ್ರತಿನಿಧಿಗಳನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದರು. ತಮಿಳ್ನಾಡಿನ ರಾಜ್ಯ ಸಮಿತಿಯಲ್ಲಿ ದ್ರಾವಿಡ ಮುನ್ನೇತ್ರ ಕಜಗಂ ಮುಖಂಡರಾದ ಸಿ.ಎನ್.ಅಣ್ಣಾದೊರೈ ಸೇರಿದ್ದರೆ, ಕಮ್ಯುನಿಸ್ಟ್ ಮುಖಂಡರಾದ ಕಲ್ಯಾಣ ಸುಂದರಂ, ಜ್ಯೋತಿಬಸು, ವಾಸವ ಪುನೈಯಾರಂತಹವರೆಲ್ಲ ಭಾಗವಹಿಸಿದ್ದರು. ಏಕನಾಥರು ಈ ಸ್ಮಾರಕ ನಿರ್ಮಾಣಕ್ಕಾಗಿ ಕನಿಷ್ಠ 1 ಲಕ್ಷವನ್ನಾದರೂ ನೀಡಲು ಎಲ್ಲ ರಾಜ್ಯ ಸರ್ಕಾರವನ್ನು ಒಪ್ಪಿಸಿದ್ದರು. ನಾಗಾಲ್ಯಾಂಡ್, ಸಿಕ್ಕಿಂನಂತಹ ಸಣ್ಣ ರಾಜ್ಯಗಳಿಂದ ಹಿಡಿದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಶೇಖ್ ಅಬ್ದುಲ್ಲಾರಿಂದಲೂ ಅವರು ಈ ಮೊತ್ತವನ್ನು ಪಡೆದಿದ್ದರು. ಮಹಾರಾಷ್ಟ್ರದಲ್ಲಿ ಸಮಿತಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡರಾದ ಎಸ್.ಕೆ.ಪಾಟಿಲ್ ರನ್ನು ಮಾಡಿದರೆ, ಚಂದ್ರಭಾನು ಗುಪ್ತರನ್ನು ಉತ್ತರಪ್ರದೇಶದ ಸಮಿತಿಯ ಅಧ್ಯಕ್ಷರನ್ನಾಗಿಸಿದರು.

ರಾಜ್ಯ ಹಾಗು ಜಿಲ್ಲಾ ಸಮಿತಿಗಳ ನಿರ್ಮಾಣ ಪ್ರಕ್ರಿಯೆಯಲ್ಲಿ ಏಕನಾಥರು ಭಾರತದ ಬಾಹ್ಯ ವೈವಿಧ್ಯತೆ, ವಿಖಂಡಿತ ರಾಜನೀತಿಯ ಗರ್ಭದಲ್ಲಡಗಿರುವ ಸಾಂಸ್ಕೃತಿಕ ಐಕ್ಯತೆ ಹಾಗು ಧರ್ಮನಿಷ್ಠೆಗಳ ಪ್ರತ್ಯಕ್ಷ ಸಾಕ್ಷಾತ್ಕಾರವನ್ನು ಮಾಡಿದರು. ಧನಸಂಗ್ರಹಕ್ಕಾಗಿ ರಾಜ್ಯ ಸರ್ಕಾರಗಳ ಜೊತೆಯಲ್ಲಿ ಏಕನಾಥರು ಉದ್ಯಮಿಗಳ ಸಹಾಯವನ್ನೂ ಪಡೆದರು. ಮೊಟ್ಟ ಮೊದಲು ಅವರು ಪ್ರಸಿದ್ಧ ಉದ್ಯಮಿಯಾದ ಜುಗಲ್ ಕಿಶೋರರೆದುರು ತಮ್ಮ ಹಸ್ತವನ್ನು ಚಾಚಿ ಅವರಿಂದ 1 ಲಕ್ಷ ರೂಪಾಯಿಗಳ ಬೇಡಿಕೆಯನ್ನಿತ್ತರು. ಏಕನಾಥರಂತಹ ಓರ್ವ ಅಪರಿಚಿತ, ಸಾಧಾರಣ ವ್ಯಕ್ತಿಯು ಈ ಬೃಹತ್ ಯೋಜನೆಯನ್ನು ಪೂರ್ಣಗೊಳಿಸಿಯಾರೇ ಎಂಬ ವಿಶ್ವಾಸ ಆ ಉದ್ಯಮಿಗೆ ಮೂಡಲೇ ಇಲ್ಲ. ಅದರಿಂದಾಗಿ ಏಕನಾಥರು ಬಹಳವಾಗಿ ಕೇಳಿಕೊಂಡ ನಂತರ 50 ಸಾವಿರ ಮಾತ್ರ ಮೊದಲಿಗೆ ಕೊಟ್ಟು ಆ ನಂತರ ಇನ್ನುಳಿದ 50 ಸಾವಿರವನ್ನು ಕೊಟ್ಟಿದ್ದರು.

ಏಕನಾಥರು ಈ ಧನಸಂಗ್ರಹ ಕಾರ್ಯವನ್ನು ಬರೇ ಕೇವಲ ರಾಜ್ಯಗಳಿಗೆ, ಉದ್ಯಮಿಗಳಿಗಷ್ಟೇ ಸೀಮಿತಗೊಳಿಸದೆ ಈ ಸ್ಮಾರಕ ನಿರ್ಮಾಣ ಕಾರ್ಯದಲ್ಲಿ ದೇಶದಲ್ಲಿನ ಜನ-ಮನಗಳನ್ನು ಬೆಸೆಯಲು ಯೋಜನೆ ಹಾಕಿಕೊಂಡಿದ್ದರು. ಇದನ್ನೊಂದು ರಾಷ್ಟ್ರೀಯ ಪ್ರಯತ್ನದ ರೂಪದಲ್ಲಿ ವಿಶ್ವಕ್ಕೆ ಸಾಬೀತು ಪಡಿಸಲು ಬಯಸುತ್ತಿದ್ದರು. ಆದುದರಿಂದ ಜನರ ಬಳಿಗೆ ಹೋಗಿ ಧನ ಸಂಗ್ರಹಿಸುವುದಕ್ಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಶಾಲ ಸ್ವಯಂಸೇವಕ ವರ್ಗವು ತಮ್ಮೆಲ್ಲಾ ಶಕ್ತಿ, ಆಸಕ್ತಿಯೊಂದಿಗೆ ಈ ಅಭಿಯಾನದಲ್ಲಿ ತೊಡಗಿಕೊಂಡಿತು. ಕರ್ನಾಟಕ ಸರ್ಕಾರವು 1, 2 ರೂಪಾಯಿಗಳ ಕೂಪನ್ ಗಳ ಮೂಲಕ ಧನಸಂಗ್ರಹ ಮಾಡಲು ಮಾರ್ಗದರ್ಶನ ಮಾಡಿತ್ತು. 1966ರ ಡಿಸೆಂಬರ್ 25ಕ್ಕೆ ಮೈಸೂರು ರಾಜ್ಯ ಸಮಿತಿಯು ನಾಲ್ಕೂವರೆ ಲಕ್ಷ ರೂಪಾಯಿಗಳ ಚೆಕ್ಕನ್ನು ನೀಡುವುದರ ಮೂಲಕ ಏಕನಾಥರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿತ್ತು. ಈ ಕೂಪನ್ ಗಳನ್ನು ಸ್ಮೃತಿ ಚಿಹ್ನೆಯಾಗಿ ಜಾಗೃತೆಯಿಂದ ಕಾಪಾಡಬೇಕೆಂಬ ಭಾವನೆ ಪ್ರತಿಯೊಬ್ಬರ ಹೃದಯದಲ್ಲಿ ಜಾಗೃತವಾಗುವಷ್ಟು ಆಕರ್ಷಕವಾಗಿ ಅವುಗಳನ್ನು ಏಕನಾಥರು ರೂಪುಗೊಳಿಸಿದ್ದರು. ಸ್ಮಾರಕ ನಿರ್ಮಾಣಕ್ಕಾಗಿ ಸಂಗ್ರಹವಾದ 1 ಕೋಟಿ 35 ಲಕ್ಷದ ಒಟ್ಟು ಮೊತ್ತದ ಧನರಾಶಿಯಲ್ಲಿ 85 ಲಕ್ಷ ರೂಪಾಯಿಗಳು ಈ ಕೂಪನ್ ಗಳಿಂದಲೇ ಸಂಗ್ರಹ ವಾದದ್ದು! ಇಡೀ ದೇಶದಲ್ಲಿನ  30 ಲಕ್ಷ ಜನ ಈ ಕಾರ್ಯದಲ್ಲಿ ಆರ್ಥಿಕ ಸಹಾಯದಲ್ಲಿ ತೊಡಗಿದ್ದರು.

ವಿರೋಧಗಳಿಗೆ ಸೋಲು :
ಒಂದೆಡೆ ಸ್ಮಾರಕ ನಿರ್ಮಾಣದ ಕಾರ್ಯ ಮುಂದುವರೆದಿದ್ದರೆ ಇನ್ನೊಂದೆಡೆ ರಾಜನೀತಿ ಕ್ಷೇತ್ರವಾದ ಹಾಗೂ ಜಾತಿವಾದದ ಮಡುವಿನಲ್ಲಿ ಕುಸಿಯತೊಡಗಿತ್ತು. ತಮಿಳುನಾಡಿನ ಉತ್ತರ ಹಾಗು ದಕ್ಷಿಣದ ವಿವಾದವು ಕಾವೇರಲಾರಂಭಿಸಿತ್ತು. ಕ್ಷೇತ್ರದವರು ಈ ಸ್ಮಾರಕ ನಿರ್ಮಾಣದ ವಿಷಯದಲ್ಲಿ ಉತ್ತರ-ದಕ್ಷಿಣ ಹೆಸರಿನಲ್ಲಿ ವಿವಾದವನ್ನಾರಂಭಿಸಲು ಪ್ರಯತ್ನಿಸುತ್ತಿದ್ದರು. ತಮಿಳ್ನಾಡಿನಲ್ಲಿ ಉತ್ತರ ಭಾರತದ ವಿವೇಕಾನಂದರ ಪ್ರತಿಮೆಯನ್ನು ಸ್ಥಾಪಿಸುವುದೇಕೆ ? ಹಾಗು ದಕ್ಷಿಣ ಭಾರತದ ವಂದನೀಯ ಸಂತರಾದ ತಿರುವಳ್ಳುವರ್ ರವರ ಪ್ರತಿಮೆಯನ್ನು ಯಾಕೆ ನಿರ್ಮಾಣ ಮಾಡುವುದಿಲ್ಲ? ಎನ್ನುವುದೇ ಅವರ ಗಲಾಟೆಗೆ ಕಾರಣವಾಗಿತ್ತು. ಈ ಕ್ಷೇತ್ರೀಯ ಆಂದೋಲನದಿಂದ ಶಿಲಾಸ್ಮಾರಕ ಸಮಿತಿಯ ಆಗಿನ ತಮಿಳ್ನಾಡುವಾಸಿ ಅಧ್ಯಕ್ಷರಾಗಿದ್ದ ರಾಜನ್ ಕೂಡ ಪ್ರಭಾವಿತರಾದರು. ಆಗ ಅವರು ಆ ಶಿಲೆಯ ಮೇಲೆ ವಿವೇಕಾನಂದರೊಂದಿಗೆ ತಿರುವಳ್ಳುವರ್ ರವರ ಪ್ರತಿಮೆಯನ್ನೂ ಅಗತ್ಯವಾಗಿ ನಿರ್ಮಾಣ ಮಾಡಬೇಕೆಂದು ಸಮಿತಿಗೆ ಒತ್ತಡ ಹೇರಿದರು. ಆಗ ಏಕನಾಥರಿಗೆ ದೊಡ್ಡ ಧರ್ಮ ಸಂಕಟವೊಂದು ಎದುರಾಯಿತು. ಅವರು ಒಂದು ಕಡೆ ರಾಜನ್ ರವರ ರಾಜೀನಾಮೆಯನ್ನು ತಡೆದರು. ಇನ್ನೊಂದೆಡೆ ದ್ರಾ.ಮು.ಕ ಮುಖಂಡರಾದ ಕರುಣಾನಿಧಿಯವರನ್ನು ಶಿಲೆಯ ಹತ್ತಿರ ಕರೆದುಕೊಂಡು ಹೋದರು. ಕರುಣಾನಿಧಿಯವರಲ್ಲಿ ಕಲಾಕಾರನ ದೃಷ್ಟಿ ಇತ್ತು. ಈ ದೃಷ್ಟಿಯಿಂದಲೇ ಅವರು ಶಿಲೆಯ ಮೇಲೆ ಎರಡು ಮಹಾಪುರುಷರ ಪ್ರತಿಮೆಗಳನ್ನು ಸ್ಥಾಪಿಸುವುದು ಅಸಂಭವ ಎಂದರು. ಹೀಗಾಗಿ ತಿರುವಳ್ಳುವರ್ ರವರ ಪ್ರತಿಮೆ ಸ್ಥಾಪನೆಗೆ ಇನ್ನೊಂದು ಸ್ಥಳವನ್ನು ಹುಡುಕಬೇಕಾಗುತ್ತದೆ ಎಂದು ಅಭಿಪ್ರಾಯವನ್ನಿತ್ತರು.

1967ರಲ್ಲಿ ಕಾಂಗ್ರೆಸ್ಸನ್ನು ಸೋಲಿಸಿ ದ್ರಾ.ಮು.ಕ ಪಕ್ಷವು ಅಧಿಕಾರಕ್ಕೆ ಬಂದಿತು. ಈ ಪಕ್ಷದ ಮೊದಲ ಮುಖ್ಯಮಂತ್ರಿ ಅಣ್ಣಾದೊರೈರವರ ಮೃತ್ಯುವಿನ ನಂತರ ಕರುಣಾನಿಧಿಯವರು ಮುಖ್ಯಮಂತ್ರಿಗಳಾದರು ಹಾಗೂ ಈ ಕಾರಣದಿಂದಾಗಿ 1970ರ ಸೆ.3 ರಂದು ಶಿಲಾಸ್ಮಾರಕದ ಔಪಚಾರಿಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರೇ ಅಧ್ಯಕ್ಷತೆ ವಹಿಸಿದ್ದರು. ಸ್ಮಾರಕ ನಿರ್ಮಾಣ ಕಾರ್ಯ ಮುಗಿದ ನಂತರ ಅವರದನ್ನು ನೋಡಲೆಂದು ಬಂದಾಗ ಮೂರ್ತಿಯನ್ನು ನೋಡಿದೊಡನೆ ಗದ್ಗದಿತರಾಗಿ 'ನನ್ನ ರಾಜ್ಯದಲ್ಲಿ ಈ ಶಿಲ್ಪಕಲೆಯ ಇಂತಹ ಭವ್ಯ ಕೃತಿಯು ನಿರ್ಮಿಸಲ್ಪಟ್ಟಿರುವುದು ನನಗೆ ತಿಳಿದೇ ಇರಲಿಲ್ಲ' ಎಂದು ನುಡಿದರು. ಕಾರ್ಯಕ್ರಮದಲ್ಲಿ  'ನಾನು ಈ ವೇದಿಕೆಯಿಂದಲೇ ಹೇಳ ಬಯಸುವುದೇನೆಂದರೆ ನಾನು, ನಮ್ಮ ಪಕ್ಷ ಹಾಗು ನನ್ನ ಸರ್ಕಾರವು ಸ್ವಾಮೀಜಿಯವರ ಜೀವನಾದರ್ಶಗಳಿಗೆ ಪೂರ್ಣ ರೀತಿಯಿಂದ ಸಮರ್ಪಿತವಾಗಿದೆ' ಎಂದೂ ನುಡಿದಿದ್ದರು.

(ಹಿಂದಿನ ಭಾಗ)

May 12, 2014

ವಿವೇಕಾನಂದ ಶಿಲಾಸ್ಮಾರಕದ 'ಅದ್ಭುತ'ಗಾಥೆ - ಭಾಗ ೩

ಏಕನಾಥಜಿ : ಕಲ್ಪನೆ ಮತ್ತು ಯಥಾರ್ಥ 
323 ಸಾಂಸದರ ಹಸ್ತಾಕ್ಷರಗಳು ಹಾಗು ನೆಹರೂರವರ ಹೇಳಿಕೆಯಿಂದ ಪ್ರಭಾವಿತರಾದ ಭಕ್ತವತ್ಸಲಂರವರು 1964ರ ಫೆಬ್ರವರಿ 5ರಂದು ರಾಜ್ಯ ಸರ್ಕಾರವು ಸ್ವಾಮಿ ವಿವೇಕಾನಂದ ಸ್ಮಾರಕಕ್ಕೆ ಒಪ್ಪಿಗೆ ನೀಡಿದೆ ಆದರೆ ಈ ಪ್ರತಿಮೆಯು ಸಣ್ಣ ಆಕಾರದ್ದಾಗಿದ್ದು ಒಂದು ಸುರಕ್ಷಿತವಾದ ಬೇಲಿಯೊಳಗೆ ಇರುವಂತದ್ದಾಗಿರುತ್ತದೆ ಎಂದು ತನ್ನ ಕೆಲವು ಬಾತ್ಮೀದಾರರಿಗೆ ತಿಳಿಸಿದರು. ಭಕ್ತವತ್ಸಲಂರವರ ಈ ಹೇಳಿಕೆಯು ಮರುದಿನ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಆದರೆ ಏಕನಾಥರು ಭಕ್ತವತ್ಸಲಂರವರ ಹಟದ ಸ್ವಭಾವವನ್ನು ಅರಿತಿದ್ದರು. ಹೀಗಾಗಿ ಅವರು ಬಹಳ ವಿನಮ್ರತೆಯೊಂದಿಗೆ ಫೆಬ್ರವರಿ 13ರಂದು ಭಕ್ತವತ್ಸಲಂರವರನ್ನು ಖುದ್ದಾಗಿ ಭೇಟಿಯಾಗಿ ಶಿಲೆಯ ಮೇಲೆ ಪ್ರತಿಮೆ ಸ್ಥಾಪಿಸುವುದಕ್ಕೆ ಅನುಮತಿ ನೀಡಿದ್ದಕ್ಕಾಗಿ ಕೃತಜ್ಞತೆ ಅರ್ಪಿಸಿದರು.

ಆದರೆ ಸ್ಮಾರಕದ ಸ್ವರೂಪ ಹಾಗು ಆಕಾರದ ಬಗೆಗೆ ಏಕನಾಥರು ಹಾಗು ಭಕ್ತವತ್ಸಲಂರವರ ಕಲ್ಪನೆಯ ಚಿತ್ರಗಳಲ್ಲಿ ಆಕಾಶ-ಪಾತಾಳದ ಅಂತರವಿತ್ತು. ಭಕ್ತವತ್ಸಲಂರವರು 15x15 ಅಡಿ ಆಕಾರದ ಸ್ಮಾರಕ ನಿರ್ಮಾಣಕ್ಕೆ ಅಂಟಿಕೊಂಡಿದ್ದರೆ ಏಕನಾಥರ ಕಲ್ಪನೆಯಲ್ಲಿ ಭವ್ಯವಾದ, ವಿಶಾಲವಾದ ಚಿತ್ರ ಮನೆಮಾಡಿತ್ತು. ಸರ್ಕಾರದ ಅನುಮತಿಯಿಲ್ಲದೆ ತಮ್ಮ ಕಲ್ಪನೆಯು ಸಾಕಾರಗೊಳ್ಳುವಂತಿರಲಿಲ್ಲ. ಆದ್ದರಿಂದ ಏಕನಾಥರು ಭಕ್ತವತ್ಸಲಂರೊಡನೆ ಬಹಳ ಧೈರ್ಯ, ಬುದ್ಧಿವಂತಿಕೆಯಿಂದಲೇ ವ್ಯವಹರಿಸಿದರು. ಅವರೊಂದಿಗೆ ತಮ್ಮಿಬ್ಬರ ನಡುವಿನ ಕಲ್ಪನೆಗಳ ಭಿನ್ನತೆಯನ್ನು ವ್ಯಕ್ತಪಡಿಸಲೇ ಇಲ್ಲ. ಸ್ವಾಮಿ ವಿವೇಕಾನಂದರ ಬಗ್ಗೆ ಶ್ರಧ್ಧೆ, ಭಕ್ತಿ ಮತ್ತು ಅವರ ಸ್ಮಾರಕ ನಿರ್ಮಾಣ ವಿಚಾರದಲ್ಲಿ ತಮ್ಮಿಬ್ಬರ ನಡುವಿನ ಏಕಾಭಿಪ್ರಾಯವನ್ನೇ ಭಕ್ತವತ್ಸಲಂರೆದುರು ವ್ಯಕ್ತಪಡಿಸುತ್ತಿದ್ದರು. ತನ್ನ ಈ ಚತುರತೆಯಿಂದ ಏಕನಾಥರು ಸ್ಮಾರಕದ ಬಗೆಗಿನ  ತಮ್ಮ ಕಲ್ಪನಾ ಚಿತ್ರದ ಸಾಕಾರಕ್ಕಾಗಿ ಭಕ್ತವತ್ಸಲಂರವರ ಅನುಮತಿ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಶೀಲರಾದರು. 


'ನಾವು ಯಾಕೆ ಈ ದೇಶದ ಪಾರಂಪರಿಕ ಶಿಲ್ಪಿಗಳ ಮೂಲಕ ಸ್ಮಾರಕದ ರೂಪುರೇಷೆಯನ್ನು ತಯಾರಿಸಬಾರದು ಹಾಗು ಅದರ ಬಗ್ಗೆ ದೇಶದ ಐದಾರು ಪ್ರಮುಖರ ಅಭಿಪ್ರಾಯವನ್ನು ಪಡೆಯಬಾರದು?' ಎಂಬ ಪ್ರಶ್ನೆಯೊಂದನ್ನು ಏಕನಾಥರು ಭಕ್ತವತ್ಸಲಂ ಮುಂದಿಟ್ಟಾಗ 'ಅಂತಹ ಪ್ರಮುಖರು ಯಾರಾಗಬಹುದು?' ಎಂದು ಪ್ರಶ್ನಿಸಿದರು. ಆ ಕೂಡಲೇ ಏಕನಾಥರು ಪ್ರಧಾನಿ  ಪಂಡಿತ್ ನೆಹರೂ, ಗೃಹಮಂತ್ರಿ ಶಾಸ್ತ್ರೀಜಿ, ರಾಷ್ಟ್ರಪತಿ ರಾಧಾಕೃಷ್ಣನ್, ಸಂಸ್ಕೃತಿ ಮಂತ್ರಿ ಮಹಮ್ಮದ್ ಕರೀಂ ಛಾಗ್ಲಾ, ರಾಮಕೃಷ್ಣ ಮಿಶನ್ ನ ಅಧ್ಯಕ್ಷ ಸ್ವಾಮಿ ಮಾಧವಾನಂದರು ಹಾಗು ಕೊನೆಯಲ್ಲಿ ಅವರು ಕಂಚಿ ಕಾಮಕೋಟಿಪೀಠದ ಪರಮಾಚಾರ್ಯರಾದ ಚಂದ್ರಶೇಖರ ಸರಸ್ವತಿಯವರ ಹೆಸರನ್ನೂ ಉಲ್ಲೇಖಿಸಿದ್ದರು. ಪರಮಾಚಾರ್ಯರ ಬಗ್ಗೆ ಭಕ್ತವತ್ಸಲಂರವರು ಅಗಾಧ ಶ್ರಧ್ಧೆ ಹೊಂದಿದ್ದಾರೆಂಬುದನ್ನು ಏಕನಾಥರು ಅರಿತಿದ್ದರು. ಅವರ ಹೆಸರನ್ನು ಹೇಳುತ್ತಿದ್ದಂತೆಯೇ ಭಕ್ತವತ್ಸಲಂರವರು ಆನಂದಿತರಾಗಿ "ಸರಿ, ನೀವು ಸ್ಮಾರಕದ ಕರಡು ನಕಾಶೆಯನ್ನು ತಯಾರಿಸಿ ಅದರ ಬಗ್ಗೆ ಪರಮಾಚಾರ್ಯರ ಅಭಿಪ್ರಾಯವೇನೆಂಬುದನ್ನು ನನಗೆ ತಿಳಿಸಿ " ಎಂದರಂತೆ. ಏಕನಾಥರು ಕೂಡಲೇ ಪರಮಾಚಾರ್ಯರನ್ನು ಭೇಟಿಯಾದರು. ಅವರು ಸಹ ಸ್ಮಾರಕದ ಬಗೆಗೆ ಬಹಳ ಆಸಕ್ತಿಯನ್ನು ವ್ಯಕ್ತಪಡಿಸಿದರು ಹಾಗೂ ಏಕನಾಥರ ಮುಖೇನ ಆಯ್ಕೆಯಾದ ಪರಂಪರಾಗತ ಶೈಲಿಯ ಉತ್ಕೃಷ್ಟ ವಾಸ್ತುಶಿಲ್ಪಿಯಾದ ಎಸ್.ಕೆ.ಆಚಾರಿಯವರನ್ನು ತಮ್ಮೊಂದಿಗೇ ಕೂರಿಸಿಕೊಂಡು ಸ್ಮಾರಕದ ರೂಪುರೇಷೆಯ ಬಗ್ಗೆ ವಿವರವಾಗಿ ಚರ್ಚಿಸಿದರು ಹಾಗು ಅವಶ್ಯವಾದ ನಿರ್ದೇಶನಗಳನ್ನೂ ನೀಡಿದರು. ಪರಮಾಚಾರ್ಯರಿಂದ ಸ್ವೀಕೃತವಾದ ಕರಡು ಚಿತ್ರವನ್ನು ನೋಡಲು ಭಕ್ತವತ್ಸಲಂ ಉತ್ಸುಕರಾದರು. ಏಕನಾಥರು ಅವರಿಗೆ ಚಿತ್ರವನ್ನೇನೋ ತೋರಿಸಿದರು ಆದರೆ ಅದರ ಗಾತ್ರ, ಆಕಾರದ ಉಲ್ಲೇಖ ಮಾಡದೇ ಜಾಗೃತೆ ವಹಿಸಿದ್ದರು. 

ಈ ಸಮಯಕ್ಕೆ ಸ್ಮಾರಕ ನಿರ್ಮಾಣ ಕಾರ್ಯದಲ್ಲಿ ತಮಿಳುನಾಡಿನ ಸರ್ಕಾರದ ಕಡೆಯಿಂದ ಎದುರಾಗಲಿದ್ದ ವಿರೋಧವನ್ನು ಪರಾಜಯಗೊಳಿಸುವಂತಹ ಕೊನೆಯ ಹಂತವನ್ನೂ ಏಕನಾಥರು ಪಾರುಗೊಳಿಸಿಯಾಗಿತ್ತು. ಸ್ಮಾರಕದ ಆಕಾರವು ಅವಿರತವಾಗಿ ವಿಸ್ತಾರಗೊಳ್ಳುತ್ತಾ ಇತ್ತು. ಸಭಾಮಂಟಪದೊಂದಿಗೇ  ದೇವಿಯ ಚರಣಗಳ ಮೇಲೆ ಶ್ರೀಪಾದ ಮಂಟಪ ಹಾಗು ಶಿಲೆಯ ಮೇಲೆ ಒಂದು ಆಳವಾದ ಹೊಂಡದಲ್ಲಿ 'ಓಂ' ಪ್ರತಿಮೆಯೊಂದಿಗೆ ಒಂದು ಧ್ಯಾನಮಂಟಪವನ್ನು ನಿರ್ಮಿಸುವಂತಹ ಕಲ್ಪನೆಗಳು ಏಕನಾಥರ ಮನಸ್ಸಿನಲ್ಲಿ ಮೂಡಲಾರಂಭಿಸಿದ್ದುವು. ಅದಕ್ಕೆ ಹಂತಹಂತವಾಗಿ ಸರ್ಕಾರದಿಂದ ಔಪಚಾರಿಕವಾಗಿ ಅನುಮತಿಯನ್ನೂ ಪಡೆಯುತ್ತಿದ್ದರು. 


ಈ ರೀತಿಯಾಗಿ 1963ರ ಆಗಸ್ಟ್ 11 ರಿಂದ ವಿವೇಕಾನಂದ ಶಿಲಾಸ್ಮಾರಕ ಸಮಿತಿಯ ಸಂಘಟನಾ ಮಂತ್ರಿಸ್ಥಾನವನ್ನು ನಿಭಾಯಿಸುತ್ತಾ 1964ರ ಸೆಪ್ಟೆಂಬರ್ ವರೆಗೂ ಒಂದು ವರ್ಷ ಸ್ಮಾರಕ ನಿರ್ಮಾಣಕ್ಕೆ ಸರಕಾರೀ ಅನುಮತಿಗಳನ್ನು ಪಡೆಯಲಿಕ್ಕಾಗಿಯೇ ಕಳೆದುಹೋಯಿತು. ಆದರೆ ಈಗಿನ ಸ್ಮಾರಕದ ಚಿತ್ರಣವನ್ನು ಸಾಕಾರಗೊಳಿಸುವುದಕ್ಕಾಗಿ ತಮಿಳುನಾಡಿನ ಸರ್ಕಾರದ ಅನುಮತಿಗಳಿಸುವ ಕಾರ್ಯವು ಅಂತಿಮ ಹಂತದ ತನಕ ಸಾಗಿತ್ತು. ಇಡೀ ಚಿತ್ರವನ್ನು ಒಗ್ಗೂಡಿಸಿ ಒಮ್ಮೆಗೇ ಪ್ರಸ್ತುತ ಪಡಿಸಿ ಸರ್ಕಾರವನ್ನು ಬೆಚ್ಚಿಸದೆ ಎಚ್ಚರಿಕೆ ವಹಿಸಲಾಗಿತ್ತು. ಇಲ್ಲಿ ಭಾವುಕತೆಯ ಒಘಕ್ಕಿಂತ ಏಕನಾಥರ ಪ್ರಗಲ್ಭವಾದ ಚತುರತೆ ಹಾಗು ಕುಶಲ ರಣನೀತಿಯ ಪ್ರಭಾವವೇ ಅಧಿಕವಾಗಿತ್ತು . 

ಕುಶಲ ಸಂಘಟಕ ಹಾಗು ಪ್ರಾಯೋಜಕ 
ಏಕನಾಥರ ಪ್ರತಿಭೆ, ಕಲ್ಪನಾ ಶಕ್ತಿ, ಯೋಜನಾ ಕೌಶಲ್ಯ, ಸಾಧನ ಸಂಗ್ರಹದ ಸಾಮರ್ಥ್ಯ, ಒಂದು ಶಿಲಾಸ್ಮಾರಕ ನಿರ್ಮಾಣದ ಕಾರ್ಯವನ್ನು ರಾಷ್ಟ್ರಜಾಗೃತಿ ಹಾಗು ರಾಷ್ಟ್ರೀಯ ಐಕ್ಯತೆಯ ದೇಶವ್ಯಾಪಿ ಆಂದೋಲನವನ್ನಾಗಿಸುವಂತಹ ಕ್ಷಮತೆಯನ್ನು ಬೆಳಕಿಗೆ ತಂದಿತು. ಏಕನಾಥರು ಏಕಾಂಗಿಯಾಗಿರಲಿಲ್ಲ. ಸ್ವಾಮಿ ವಿವೇಕಾನಂದರ ಜೀವನದ ಗುರಿ ಮತ್ತು ಆದರ್ಶಗಳಿಗೆ ಸಮರ್ಪಿತವಾದ ಇಡೀ ದೇಶದಲ್ಲಿ ಹಬ್ಬಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಶಾಲ ಸಂಘಟನೆಯು ಈ ಮಹತ್ಕಾರ್ಯದ ಬೆನ್ನೆಲುಬಾಗಿ ನಿಂತಿತ್ತು.  ವಿವೇಕಾನಂದರ ಬಗ್ಗೆ ದೇಶದ ಜನಮಾನಸದಲ್ಲಿ ವ್ಯಾಪಿಸಿದ್ದ ಶ್ರದ್ಧಾ - ಭಕ್ತಿಗಳನ್ನು, ಅನೇಕ ಪಂಗಡಗಳಲ್ಲಿ, ಪಕ್ಷಗಳಲ್ಲಿ, ಹಂಚಿಹೋಗಿದ್ದ ನೇತೃತ್ವಗಳನ್ನು ಒಂದೇ ಕಡೆ ಪ್ರವಹಿಸುವಂತೆ ಮಾಡಲು ಯಾವ ಒಂದು ಅಪೂರ್ವ ಕಲ್ಪನಾ ಶಕ್ತಿ, ಯೋಜನಾ ಚಾತುರ್ಯ, ಸಂಘಟನಾ ಕೌಶಲ್ಯದ ಅವಶ್ಯಕತೆ ಇತ್ತೋ ಅದನ್ನು ನಿಯತಿಯು ಏಕನಾಥರಲ್ಲಿ ಪ್ರಕಟಪಡಿಸಿತ್ತು. ಅವರು ಒಂದೇ ಬಾರಿ ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕತೊಡಗಿದರು. ಶಿಲಾಸ್ಮಾರಕದ ಅಂತಿಮ ಚಿತ್ರಣ ಹೇಗಿರಬೇಕು, ಮಂಟಪಗಳು ಹೇಗಿರಬೇಕು, ಎಲ್ಲಿರಬೇಕು, ಎಲ್ಲೆಲ್ಲಿ ಯಾವ ಯಾವ ತರಹದ ಕಲ್ಲುಗಳು, ಎಲ್ಲೆಲ್ಲಿ ಯಾವ ಯಾವ ಬಣ್ಣಗಳು, ಎಲ್ಲೆಲ್ಲಿಂದ ಏನೇನನ್ನು ತರಬೇಕು, ತಲುಪಿಸುವ ವ್ಯವಸ್ಥೆಗಳು, ಕೆಲಸಗಾರರ ಅವಶ್ಯಕತೆ-ಪೂರೈಕೆ, ಅವರಿಗೆ ಕುಡಿಯುವ ನೀರು-ಆಹಾರ, ಕೆತ್ತನೆಗಾರರ ಪೂರೈಕೆ, ತಜ್ಞರ ಅವಶ್ಯಕತೆ ಮುಂತಾದ ಪ್ರತಿಯೊಂದು ಸಣ್ಣ ಸಣ್ಣ ವಿಷಯಕ್ಕೂ ಮೊದಲೇ ಯೋಜನೆ, ಕಾರ್ಯರೂಪದ ವಿಧಾನ ಎಲ್ಲವೂ ತಯಾರಾಗಿತ್ತು. ಇವೆಲ್ಲಕ್ಕಿಂತ ಮುಖ್ಯವಾಗಿ ಈ ಸಮಯಬದ್ಧ ವಿಶಾಲ ಯಜ್ಞವನ್ನು ಪೂರ್ಣಗೊಳಿಸಲು ಅಗತ್ಯವಾದ ಆರ್ಥಿಕ ಮೂಲಗಳಿಗಾಗಿ ಹುಡುಕಾಟದೊಂದಿಗೇ ಈ ಶೋಧ ಕಾರ್ಯವನ್ನು ರಾಷ್ಟ್ರಜಾಗೃತಿ ಹಾಗು ರಾಷ್ಟ್ರೀಯ ಏಕತೆಯ ಪ್ರಕ್ರಿಯೆಯಲ್ಲಿ ಮುಕ್ತಾಯಗೊಳಿಸುವುದೇ ಒಂದು ದೊಡ್ಡ ಪ್ರಶ್ನೆಯಾಗಿತ್ತು. ಅವರು ಒಂದು ದೊಡ್ಡ ಬಂಡೆಯಲ್ಲಿ ಒಂದು ಕಾರ್ಯಶಾಲೆಯನ್ನು ಸ್ಥಾಪನೆ ಮಾಡಿದರು . ವಿವೇಕಾನಂದಪುರಂ ಎಂಬ ಹೆಸರಿನ ವಿಶಾಲ ಪರಿಸರಕ್ಕಾಗಿ ಭೂಮಿಯನ್ನು ನಿಗದಿಗೊಳಿಸಲು ಪ್ರಯತ್ನಿಸಲಾರಂಭಿಸಿದರು.

ವಿವೇಕಾನಂದ ಶಿಲಾಸ್ಮಾರಕದ 'ಅದ್ಭುತ'ಗಾಥೆ - ಭಾಗ ೨

( ಮುಂದುವರೆಯುದು... )

May 4, 2014

ವಿವೇಕಾನಂದ ಶಿಲಾಸ್ಮಾರಕದ 'ಅದ್ಭುತ'ಗಾಥೆ - ಭಾಗ ೨

ರಾಮಕೃಷ್ಣಮಿಶನ್ ನ ಆಶೀರ್ವಾದದೊಂದಿಗೆ ಏಕನಾಥರು ಮದ್ರಾಸನ್ನು ತಲುಪಿದರು. ಅಲ್ಲಿ ಈ ವಿವಾದಕ್ಕೆ ಸಂಬಂಧಿಸಿದ ಫೈಲುಗಳನ್ನೆಲ್ಲ ಅವರು ಸೂಕ್ಷ್ಮವಾಗಿ ಅಧ್ಯಯನ ಮಾಡಿದಾಗ ಅವರಿಗೆ ಅದರಲ್ಲಿ ಭಕ್ತವತ್ಸಲಂ ಅವರ ವಿರೋಧದ ಮುಖ್ಯ ಎಳೆಯೊಂದು ದೊರೆಯಿತು. ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವರಾದ ಶ್ರೀ ಹುಮಾಯೂನ್ ಕಬೀರ್ ಆ ಶಿಲೆಯ ಮೇಲೆ ಸ್ಮಾರಕ ನಿರ್ಮಾಣದ ಬಗ್ಗೆ ವಿರೋಧ ವ್ಯಕ್ತ ಪಡಿಸಿದ್ದರು. ಏಕೆಂದರೆ ಈ ಸ್ಮಾರಕ ನಿರ್ಮಾಣದಿಂದ ಆ ಕ್ಷೇತ್ರದ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಕಬೀರರ ಈ ವಾದವನ್ನು ಪ್ರಧಾನಮಂತ್ರಿ ನೆಹರೂರವರು ಶಿಲೆಯ ಮೇಲೆ ಸ್ಮಾರಕ ನಿರ್ಮಾಣವನ್ನು ವಿರೋಧಿಸುವುದಕ್ಕೆ ಮುಖ್ಯ ಆಧಾರವನ್ನಾಗಿ ಮಾಡಿದ್ದಾರೆ ಎಂಬುದು ಭಕ್ತವತ್ಸಲಂ ಅವರ ತರ್ಕವಾಗಿತ್ತು. ಇನ್ನೀಗ ಸ್ಮಾರಕ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರಕ್ಕಿಂತ ಮೊದಲು ಕೇಂದ್ರ ಸರ್ಕಾರದ ಅನುಮತಿ ಪಡೆಯುವುದು ಅವಶ್ಯಕವಾಗಿದೆ ಹಾಗು ಇದಕ್ಕಾಗಿ ಮೊದಲು ಹುಮಾಯೂನ್ ಕಬೀರರಿಂದ ಎದುರಾಗಿರುವ ವಿರೋಧವನ್ನು ನಿರ್ಮೂಲ ಮಾಡಬೇಕು ಎಂಬುದನ್ನು ಏಕನಾಥರು ಅರ್ಥೈಸಿಕೊಂಡರು. ಸಮಸ್ಯೆಯನ್ನು ಆಮೂಲಾಗ್ರವಾಗಿ ಅಭ್ಯಸಿಸಿದ ನಂತರ ಸ್ವಾಮಿ ವಿವೇಕಾನಂದರ ಶಿಲಾಸ್ಮಾರಕ ಸಮಿತಿಯಲ್ಲಿ ಯಾರಾದರೊಬ್ಬರು ಔಪಚಾರಿಕವಾಗಿ ಪದಗ್ರಹಣ ಮಾಡಿದ ಹೊರತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರೋಧವನ್ನು ಇತ್ಯರ್ಥಗೊಳಿಸಲಾಗದೆಂದು ಏಕನಾಥರಿಗೆ ಧೃಢವಾಯಿತು. ಇದಕ್ಕಾಗಿಯೇ ಅವರು ಪೂರ್ವರಚಿತ ಸಮಿತಿಯನ್ನು ಕೊಂಚವೂ ಬದಲಿಸದೆ 1963ರ ಆಗಸ್ಟ್ 13ರಂದು 'ಅಖಿಲ ಭಾರತೀಯ ವಿವೇಕಾನಂದ ಶಿಲಾಸ್ಮಾರಕ ಸಮಿತಿ'ಯ ಪ್ರಥಮ ಸಂಘಟನಮಂತ್ರಿ ಪದವಿಯನ್ನು ಅಂಗೀಕರಿಸಿದರು. 


ಕನ್ಯಾಕುಮಾರಿಯಲ್ಲಿ ಶಿಲೆಯ ನೈಸರ್ಗಿಕ ಪರಿಸರದ ಅಧ್ಯಯನ ನಡೆಸಿದ ನಂತರ ಏಕನಾಥರು ಕಬೀರರ ಭೇಟಿಗೆ ಸಮಯವನ್ನು ಕೇಳಿಕೊಂಡರೂ ಕಬೀರರು ಅವಕಾಶ ನೀಡಲೇ ಇಲ್ಲ. ಕೋಲ್ಕತ್ತಾಗೆ ಮರಳಿದ ಏಕನಾಥರು ಅಲ್ಲಿ ಸ್ವಾಮಿ ಮಾಧವಾನಂದ ಹಾಗೂ ಅನ್ಯ ಜನರೊಂದಿಗೆ ಪರಾಮರ್ಶಿಸಿದರು. ಇವರ ಸಹಾಯದಿಂದ ಕೊಲ್ಕತ್ತಾದ ಎಲ್ಲ ಪ್ರಮುಖ ಸಂಪಾದಕರನ್ನು ಭೇಟಿಯಾದರು. ಸ್ಮಾರಕ ನಿರ್ಮಾಣಕ್ಕೆ ಕಬೀರರೇ ಪ್ರಮುಖ ಮುಖ್ಯ ತಡೆಯಾಗಿದ್ದಾರೆಂಬುದು ಅವರೆಲ್ಲರ ಅಭಿಪ್ರಾಯವಾಗಿತ್ತು . 

ಕನ್ಯಾಕುಮಾರಿಯಲ್ಲಿ ಸ್ವಾಮಿಜಿಯವರ ಸ್ಮಾರಕ ನಿರ್ಮಾಣಕ್ಕಾಗಿ ಇಡೀ ಬಂಗಾಳವೇ ಉತ್ಸುಕವಾಗಿತ್ತು. ಬಂಗಾಳವೇ ಕಬೀರರ ಸ್ವಂತ ರಾಜಕೀಯ ಕ್ಷೇತ್ರವಾಗಿತ್ತು. ಹೀಗಾಗಿ ಪ್ರಪ್ರಥಮವಾಗಿ ಕಬೀರರ ವಿರೋಧವನ್ನು ಕೊನೆಗೊಳಿಸಲೇಬೇಕಿತ್ತು . ವೈಯಕ್ತಿಕ ಭೇಟಿಗಳ ಬಳಿಕ ಅನುಕೂಲಕರ ಮನಃಸ್ಥಿತಿಯನ್ನು ರೂಪಿಸಿಕೊಂಡು ಕೊಲ್ಕತ್ತಾದಲ್ಲಿ ಏಕನಾಥರು ಪತ್ರಿಕಾಗೋಷ್ಠಿಯನ್ನು ಕರೆದು ಹುಮಾಯೂನ್ ಕಬೀರರ 'ವಿರೋಧಿಪಾತ್ರ'ವನ್ನು ಸಾರ್ವಜನಿಕವಾಗಿ ತೆರೆದಿಟ್ಟರು. ಮರುದಿನ ಎಲ್ಲ ವಾರ್ತಾಪತ್ರಿಕೆಗಳಲ್ಲಿ ಸುದ್ದಿಯಾಗಿ ವ್ಯಾಪಕ ವಿರೋಧವು ಆರಂಭವಾಯಿತು. ಪ್ರವಾಹದೋಪಾದಿಯ ಈ ಪ್ರಚಾರದಿಂದಾಗಿ ಕಬೀರರು ಅಪ್ರತಿಭರಾದರು. ಅವರು ಏಕನಾಥರನ್ನು ದಿಲ್ಲಿಗೆ ಬಂದು ಭೇಟಿಯಾಗುವಂತೆ ಆಹ್ವಾನಿಸಿದರು. ಏಕನಾಥರೂ ಭೇಟಿಯಾದರು. ಸುಧೀರ್ಘವಾದ ವಾರ್ತಾಲಾಪದ ನಂತರ ಕಬೀರರನ್ನು ಶಿಲಾಸ್ಮಾರಕ ನಿರ್ಮಾಣದ ವಿರೋಧದಿಂದ ವಿಮುಖರನ್ನಾಗಿಸುವಲ್ಲಿ ಏಕನಾಥರು ಸಫಲರಾದರು! ಈ ಭೇಟಿಯ ನಂತರ ಏಕನಾಥರು ಕಬೀರರೊಂದಿಗೆ ನಡೆದ ಮೌಖಿಕ ವಾರ್ತಾಲಾಪವನ್ನು ಅಕ್ಷರಶಃ ಲಿಪಿಬಧ್ಧವಾಗಿಸಿ ಆ ಕೂಡಲೇ ಕಬೀರರಿಗೆ ಕಾಣಿಕೆಯಾಗಿ ನೀಡಿದುದು ಈ ಭೇಟಿಯ ವಿಶೇಷತೆ. ಏಕನಾಥಜಿಯವರ ಅಸಾಧಾರಣ ಸ್ಮರಣ ಶಕ್ತಿ ಯನ್ನು ನೋಡಿ ಕಬೀರರು ಬಹಳ ಆಶ್ಚರ್ಯಚಕಿತರಾದರು.
  
ಹುಮಾಯೂನ್ ಕಬೀರರ ವಿರೋಧವನ್ನು ನಿವಾರಿಸಿದ ನಂತರ ಏಕನಾಥರು ಪಂಡಿತ್ ನೆಹರೂರವರ ಅನುಮತಿ ಪಡೆಯಲಿಕ್ಕಾಗಿ ಉಪಾಯ ಹುಡುಕತೊಡಗಿದರು. ನೆಹರೂರವರ ಅನುಮತಿ ಇಲ್ಲದೆ ತಮಿಳುನಾಡಿನ ಮುಖ್ಯಮಂತ್ರಿ ಭಕ್ತವತ್ಸಲಂರವರ ಅನುಮತಿ ಪಡೆಯುವುದು ಅಸಂಭವವೇ ಆಗಿತ್ತು. ನೆಹರೂರವರ ದೃಷ್ಟಿಯಲ್ಲಿ, ಚರ್ಚ್ ವಿರೋಧದ ಕಾರಣದಿಂದಾಗಿ ಈ ಸಮಸ್ಯೆಯು ಮೂಲಭೂತವಾದಂದೆದ್ದಾಗಿತ್ತು. ಸ್ವಾಮಿ ವಿವೇಕಾನಂದರ ಬಗ್ಗೆ ವ್ಯಕ್ತಿಗತವಾಗಿ ಶ್ರದ್ಧಾ ಭಾವವನ್ನೂ ಹೊಂದಿದ್ದೂ ನೆಹರೂರವರ ಹಿಂದುತ್ವ ವಿರೋಧೀ ನೀತಿಯು ಜಗಜ್ಜಾಹೀರಾಗಿತ್ತು. ಅವರು ಸ್ಮಾರಕ ನಿರ್ಮಾಣಕ್ಕಾಗಿ ಒಪ್ಪಿಗೆ ನೀಡಿ ತಮ್ಮ ಮೇಲೆ ಮೂಲಭೂತವಾದಿ ಎಂಬ ಮೊಹರೊತ್ತಿಸಿಕೊಳ್ಳಲು ಸಿದ್ಧರಿರಲಿಲ್ಲ. ಕೆಲವು ದಿನಗಳಲ್ಲೇ ಭಕ್ತವತ್ಸಲಂ ಜೊತೆ ನೆಹರೂರವರ ಭೇಟಿಯಾಗುವುದಿತ್ತು. ಅವರ ಕೇವಲ ಒಂದು ಶಬ್ದವೇ ಭಕ್ತವತ್ಸಲಂರನ್ನು ತಮ್ಮೆಡೆಗೆ ಸೆಳೆಯಲು ಸಾಕಿತ್ತು. ಆದರೆ ನೆಹರೂರನ್ನು ಭೇಟಿಯಾಗುವುದು ಹೇಗೆ? ಈಗ ಏಕನಾಥರ ದೃಷ್ಟಿ ಲಾಲ್ ಬಹದ್ದೂರ್ ಶಾಸ್ತ್ರಿಯವರತ್ತ ಹೋಯಿತು. ಶಾಸ್ತ್ರಿಯವರನ್ನು ಭೇಟಿಯಾದರು. ಶಾಸ್ತ್ರಿಯವರು ಕೂಡ "ನನ್ನ ದೇಹದ ಗಾತ್ರ ಚಿಕ್ಕದು, ನಾನು ನನ್ನದೇ ಆದ ಗತಿಯಲ್ಲಿ ಹಾಗು ನನ್ನದೇ ಆದ ರೀತಿಯಲ್ಲಿ ನಿಮಗೆ ಸಹಕರಿಸುತ್ತೇನೆ" ಎಂದರಂತೆ. ಕೆಲ ದಿನಗಳ ನಿರೀಕ್ಷೆಯ ನಂತರ ಏಕನಾಥರು ಕೆಲವು ಜನ ಸಂಸತ್ ಸದಸ್ಯರ ಹಸ್ತಾಕ್ಷರಗಳೊಂದಿಗೆ ಸಂಬಂಧಿತ ಮನವಿಯನ್ನು ನೆಹರೂರವರಿಗೆ ತಲುಪಿಸುವಂತೆ ಮಾಡಿದರೆ ಆಗ ಶಾಸ್ತ್ರಿಯವರ ಕೆಲಸಕ್ಕೆ ಅನುಕೂಲವಾಗಬಹುದೇ ಎಂದು ಶಾಸ್ತ್ರಿಯವರನ್ನು ಕೇಳಿದ್ದಕ್ಕೆ ಹೀಗೆ ಮಾಡಲು ಸಾಧ್ಯವಾದರೆ ಮುಂದಿನ ಹಾದಿ ಸುಗಮವಾಗುವುದೆಂದು ಲಾಲ್ ಬಹದ್ದೂರರು ಉತ್ತರಿಸಿದರು.


ಸಂಸತ್ ಅಧಿವೇಶನ ಆರಂಭವಾದೊಡನೆ ಏಕನಾಥರು ದಿಲ್ಲಿಯಲ್ಲಿ ತಳವೂರಿದರು. ಬೇರೆ ಬೇರೆ ಸಾಂಸದರನ್ನು ಪ್ರತ್ಯೇಕವಾಗಿ ಭೇಟಿಯಾದರು. ಎಲ್ಲ ಪಕ್ಷಗಳ, ಎಲ್ಲ ವಿಚಾರಧಾರೆಗಳ ಸಾಂಸದರು ಸ್ವಾಮಿ ವಿವೇಕಾನಂದರಲ್ಲಿ ಶ್ರದ್ಧೆ ಹೊಂದಿದವರಾಗಿದ್ದಾರೆ ಎಂಬುದು ಏಕನಾಥರಿಗೆ ತಿಳಿಯಿತು. ಈ ಅನುಕೂಲಕರ ಸ್ಥಿತಿಯಿಂದಾಗಿ 1963ರ ಡಿಸೆಂಬರ್ 24, 25 ಮತ್ತು 26 ಕೇವಲ ಈ ಮೂರು ದಿನಗಳ ಅವಧಿಯಲ್ಲಿ ಏಕನಾಥರು ಶಿಲಾಸ್ಮಾರಕದ ಪರವಾಗಿ 323 ಸಾಂಸದರ ಹಸ್ತಾಕ್ಷರಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು .  

ಸಮಾಜವಾದಿ ಸಾಂಸದರ ಹಸ್ತಾಕ್ಷರ ಪಡೆಯಲು ಡಾ.ರಾಮ ಮನೋಹರ ಲೋಹಿಯಾ ಸಹಾಯ ಮಾಡಿದರೆ ಕಮ್ಯುನಿಸ್ಟ್ ಪಕ್ಷದ ಸಾಂಸದರ ಹಸ್ತಾಕ್ಷರ ಪಡೆಯುವಲ್ಲಿ ರೇಣುಚಕ್ರವರ್ತಿಯವರೇ ಸ್ವತಃ ಮೊದಲಿಗರಾದರು. ಈ ವಿಜ್ಞಾಪನೆಯಲ್ಲಿ ಬರೀ ರಾಜ್ಯಗಳ, ಪಕ್ಷಗಳ, ಮಾತ್ರವಲ್ಲ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಾಂಸದರ ಹಸ್ತಾಕ್ಷರಗಳೂ ಇದ್ದವು. ಈ ಹಸ್ತಾಕ್ಷರಗಳೊಂದಿಗೆ ಏಕನಾಥರು ಶಾಸ್ತ್ರೀಜಿ ಯವರನ್ನು ಭೇಟಿಯಾದಾಗ ಅದನ್ನು ನೋಡಿ ಅವರು ಚಕಿತರಾದರು. ಏಕನಾಥರಂತಹ ರಾಜಕೀಯೇತರ ಅಪ್ರಸಿಧ್ಧ ವ್ಯಕ್ತಿಯೊಬ್ಬರು ಇಷ್ಟು ಕಡಿಮೆ ಅವಧಿಯಲ್ಲಿ ಅದ್ಭುತ ಸಂಖ್ಯೆಯ ಸಾಂಸದರ ಹಸ್ತಾಕ್ಷರಗಳನ್ನು ಸಂಪಾದಿಸಿದ್ದು ಆಶ್ಚರ್ಯವಾಗಿತ್ತು . 

ಪ್ರತ್ಯುತ್ತರವಾಗಿ ಶಾಸ್ತ್ರೀಜಿಯವರು 'ಈಗಿನ್ನು ನೀವು ನಿಶ್ಚಿಂತರಾಗಿರಿ. ಮುಂದಿನ ಕಾರ್ಯವನ್ನು ನಾನು ಮಾಡುತ್ತೇನೆ' ಎಂದರು. ಶಾಸ್ತ್ರೀಜಿಯವರ ಸೂಚನೆಯಂತೆ ಏಕನಾಥರು ಸಂಸತ್ತಿನ ವರಿಷ್ಠ ಸದಸ್ಯರಾದ ಶ್ರೀ ಬಾಪು ಅಣಿಯವರ ಮೂಲಕ ಈ ಹಸ್ತಾಕ್ಷರಗಳನ್ನೊಳಗೊಂಡ ಮನವಿ ಪತ್ರವನ್ನು ಔಪಚಾರಿಕ ರೀತಿಯಲ್ಲಿ  ನೆಹರೂರವರಿಗೆ ತಲುಪಿಸಿದರು. ಈ ಮನವಿ ಪತ್ರವು ನೆಹರೂರವರ ಮೇಲೆ ಗಾಢವಾದ ಪ್ರಭಾವ ಬೀರಿತು ಹಾಗು ತಮ್ಮ ಮುಂದಿನ ಭೇಟಿಯಲ್ಲಿ ಭಕ್ತವತ್ಸಲಂರನ್ನು ಕಂಡು ತಮ್ಮ ಒಪ್ಪಿಗೆಯನ್ನೂ ಸೂಚಿಸಿದರು . 

Apr 30, 2014

ವಿವೇಕಾನಂದ ಶಿಲಾಸ್ಮಾರಕದ 'ಅದ್ಭುತ'ಗಾಥೆ - ಭಾಗ ೧

(ಕನ್ಯಾಕುಮಾರಿಯಲ್ಲಿನ 'ಸ್ವಾಮಿ ವಿವೇಕಾನಂದ ಶಿಲಾಸ್ಮಾರಕ'ದ ಅದ್ಭುತಗಾಥೆಯನ್ನು ಓದುವುದು, ಮನನ ಮಾಡುವುದು ಒಂದು ಪುಣ್ಯದ ಹಾಗೂ ಪ್ರೇರಣಾದಾಯಿ ಕೆಲಸವಾಗಿದ್ದು ಅದನ್ನು ನನ್ನ ಬ್ಲಾಗಿನಲ್ಲಿ ಶಾಶ್ವತವಾಗಿ ಇರಿಸಿಕೊಳ್ಳುವ ನಿಟ್ಟಿನಲ್ಲಿ ವರ್ಷದ ಹಿಂದೆ ಹೊಸದಿಗಂತದಲ್ಲಿ ಪ್ರಕಟವಾದ ದೇವೇಂದ್ರ ಸ್ವರೂಪ್ ರವರ ಲೇಖನಮಾಲೆಯನ್ನು ಸಂಕಲನಮಾಡಿ ಸಂಕ್ಷಿಪ್ತವಾಗಿ ಇಲ್ಲಿ ಬರೆದಿಟ್ಟುಕೊಳ್ಳುವ ಪ್ರಯತ್ನ)


1963ರಲ್ಲಿ ಸ್ವಾಮಿ ವಿವೇಕಾನಂದರ ಜನ್ಮಶತಾಬ್ದಿಯನ್ನು ವರ್ಷವಿಡೀ ಆಚರಿಸುವ ಯೋಜನೆಯನ್ನು ಆರಂಭಿಸಲಾಯಿತು. ಆಗ ತಮಿಳುನಾಡಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಪ್ರಚಾರಕರಾದ ದತ್ತಾಜಿ ಡಿಡೋಲ್ಕರ್ ರವರ ಪ್ರೇರಣೆಯಂತೆ ಸ್ವಾಮಿಜಿಯವರ ಪ್ರತಿಮೆಯನ್ನೂ ಸ್ಥಾಪಿಸುವ ವಿಚಾರವೂ ಮೂಡಿಬಂದಿತು. ಕನ್ಯಾಕುಮಾರಿಯ ಪ್ರತಿಷ್ಟಿತ ನಾಗರೀಕರ ಸ್ಥಾನೀಯ ಸಮಿತಿ ಕೂಡ ರಚಿತವಾಯಿತು. ರಾಮಕೃಷ್ಣ ಮಿಶನ್ ನ ಒಬ್ಬ ಪ್ರಭಾವಶಾಲಿ ಸನ್ಯಾಸಿ ಸ್ವಾಮಿ ಚಿದ್ಭಾವಾನಂದರೂ ಇದಕ್ಕೆ ಬೆಂಬಲವಾಗಿ ನಿಂತರು. ಆದರೆ ತಮಿಳುನಾಡಿನ ಹಿಂದೂಗಳ ಈ ಯೋಜನೆಯ ಅರಿವಾಗುತ್ತಲೇ ಕ್ಯಾಥೊಲಿಕ್ ಚರ್ಚ್ ಇದಕ್ಕೆ ವಿರುಧ್ಧವಾಗಿ ನಿಂತಿತು. ಅದಾಗಲೇ ತನ್ನ ಸುಧೀರ್ಘ ಪ್ರಯತ್ನದ ಫಲವಾಗಿ ಕನ್ಯಾಕುಮಾರಿ ಕ್ಷೇತ್ರದ ಬಹುಪಾಲು ಜನರನ್ನು ಕ್ರೈಸ್ತ ಮತಕ್ಕೆ ಮತಾಂತಿರಸಲಾಗಿತ್ತು. ಈ ಬಹುಸಂಖ್ಯಾತ ಜನರ ಬೆಂಬಲದಿಂದಾಗಿಯೇ ವಿವೇಕಾನಂದರ ಶಿಲೆಗೆ 'ಸಂತ ಜೇವಿಯರ್ ಶಿಲೆ' ಎಂದು ನಾಮಕರಣ ಮಾಡಿತು. 16ನೆಯ ಶತಮಾನದಲ್ಲಿ ಜೇವಿಯರ್ ಈ ಶಿಲೆಯ ಬಳಿ ಬಂದಿದ್ದರೆಂದು ವಾದಿಸಿತ್ತಲ್ಲದೆ ಅದರ ಮೇಲೆ ತನ್ನ ಹಕ್ಕನ್ನು ಸ್ಥಾಪಿಸಲು ಶಿಲೆಯ ಮೇಲೆ ತನ್ನ 'ಕ್ರಾಸ್' ಚಿಹ್ನೆಯ ಪ್ರತಿಮೆಯನ್ನೂ ಸ್ಥಾಪಿಸಿದರು. ಚರ್ಚ್ ನ ಪ್ರಭಾವದಿಂದಾಗಿ ಕನ್ಯಾಕುಮಾರಿಯ ಮತಾಂತರಿತ  ಕ್ರೈಸ್ತ ನಾವಿಕರು ಹಿಂದೂ ಕಾರ್ಯಕರ್ತರನ್ನು ಸಮುದ್ರತಟದಿಂದ ಶಿಲೆಯ ಬಳಿಗೆ ಕೊಂಡೊಯ್ಯಲು ನಿರಾಕರಿಸಿದರು. ಈ ಬಹಿಷ್ಕಾರವನ್ನು ಎದುರಿಸುವುದಕ್ಕಾಗಿ ಬಾಲನ್ ಹಾಗು ಲಕ್ಷ್ಮಣರಂತಹ ಅನೇಕ ವೀರನಾವಿಕ ಸ್ವಯಂಸೇವಕರು ಕನ್ಯಾಕುಮಾರಿಗೆ ಹೋಗಿ ತಲುಪಿದರು.


ತಮಿಳುನಾಡಿನ ಕಾಂಗ್ರೆಸ್ ಸರ್ಕಾರವು 1962 ರ ಅಕ್ಟೋಬರ್ 3 ರಂದು ಸೆಕ್ಷನ್ 144 ವಿಧಿಸುವುದರ ಮೂಲಕ ಸಾರ್ವಜನಿಕ ಆಂದೋಲನದ ಬಾಗಿಲುಗಳನ್ನೇ ಮುಚ್ಚಿತು. ತಮಿಳುನಾಡಿನಲ್ಲಿ ಆಗ ಕಾಂಗ್ರಸ್ ನ ಮುಖ್ಯಮಂತ್ರಿಯಾಗಿದ್ದ ಭಕ್ತವತ್ಸಲಂರವರು ಧಾರ್ಮಿಕ ಪ್ರವೃತ್ತಿ ಉಳ್ಳವರಾಗಿದ್ದರು. ಅವರು ಕಂಚಿ ಕಾಮಕೋಟಿ ಪೀಠದ ಪರಮಾಚಾರ್ಯರಾದ ಶ್ರೀ ಚಂದ್ರಶೇಖರ ಸರಸ್ವತಿ ಸ್ವಾಮಿಜಿಯವರ ಬಗ್ಗೆ ಅಗಾಧ ಶ್ರಧ್ಧೆ  ಉಳ್ಳವರಾಗಿದ್ದರು. ಆದರೂ ಕ್ರೈಸ್ತರ ವೋಟ್ ಬ್ಯಾಂಕ್ ಲಾಲಸೆಯಿಂದ ಸಂಕುಚಿತ ಪಕ್ಷಸ್ವಾರ್ಥಕ್ಕಾಗಿ ಅವರು ಚರ್ಚ್ ಗೆ ಅಸಮಾಧಾನ ಉಂಟುಮಾಡಲು ಸಿಧ್ಧರಿರಲಿಲ್ಲ. ಇಂತಹ ವಿಷಮ ಸ್ಥಿತಿಯನ್ನು ಸಮರ್ಥವಾಗಿ ಎದುರಿಸುವುದಕ್ಕಾಗಿ ದತ್ತಾಜಿ ಡಿಡೋಲ್ಕರ್ ರವರ ಪ್ರೇರಣೆಯಂತೆ 1963ರ ನವೆಂಬರ್ ನಲ್ಲಿ ಕನ್ಯಾಕುಮಾರಿಯ ಜಿಲ್ಲಾ ಸಮಿತಿಯನ್ನು ವಿಸ್ತರಿಸಿ ಕೇರಳದ ಮುಖ್ಯ ನಾಯರ್ ನೇತಾರರಾದ ಶ್ರೀ ಮನ್ಮಥ ಪದ್ಮನಾಭರ ಅಧ್ಯಕ್ಷತೆಯಲ್ಲಿ 'ಅಖಿಲ ಭಾರತ ವಿವೇಕಾನಂದ ಶಿಲಾಸ್ಮಾರಕ ಸಮಿತಿ'ಯನ್ನು ರಚಿಸಲಾಯಿತು. 

1963ರ ಜನವರಿ 13ರಿಂದ ಆರಂಭವಾಗಿ ಸ್ವಾಮಿ ವಿವೇಕಾನಂದರ ಜನ್ಮಶತಾಬ್ದಿ ವರ್ಷವು 1964ರ ಜನವರಿಯಲ್ಲಿ ಪೂರ್ಣಾಹುತಿಯೊಂದಿಗೆ ಆ ಬಂಡೆಗಲ್ಲಿನ ಮೇಲೆ ವಿವೇಕಾನಂದರ ಪ್ರತಿಮೆಯನ್ನು ತಾವು ಖಂಡಿತವಾಗಿಯೂ ನಿರ್ಮಿಸಲಿದ್ದೇವೆ ಎಂದು ಈ ಸಮಿತಿಯು ಆ ಸಂದರ್ಭದಲ್ಲೇ ಘೋಷಿಸಿತ್ತು. ಈ ಇಡೀ ಯೋಜನೆಯು 6 ಲಕ್ಷ ರೂಪಾಯಿಗಳ ಯೋಜನೆಯಾಗಿತ್ತು. ಇದಕ್ಕೆ ಸರ್ಕಾರವು ಸ್ವಾಮಿ ವಿವೇಕಾನಂದ ಸ್ಮಾರಕ ಹೆಸರಿನಲ್ಲಿ ಘೋಷಿಸುವಂತೆ ಮನವಿ ಮಾಡಿದ್ದರು. ಒಂದು ಶಿಲಾಲೇಖವನ್ನು ಅಲ್ಲಿ ಪ್ರತಿಷ್ಟಾಪನೆ ಮಾಡುವ ಬಗ್ಗೆಯೂ  ಮನವಿಯನ್ನಿತ್ತರು. ಮುಖ್ಯಮಂತ್ರಿ ಭಕ್ತವತ್ಸಲಂರವರು ಈ ಆಂದೋಲನದವರನ್ನು ಭ್ರಮಿತಗೊಳಿಸಲಿಕ್ಕಾಗಿ 'ವಿವೇಕಾನಂದ ಶಿಲಾ' ಎಂಬ ನಾಮಕರಣ ಒಪ್ಪಿಕೊಂಡರಲ್ಲದೆ ಶಿಲೆಯ ಮೇಲೆ ಸ್ವಾಮಿಜಿಯವರ ಆಗಮನ ಹಾಗು ಸಮಾಧಿಯ ಸತ್ಯದ ಘೋಷಣೆ ಮಾಡುವಂತಹ ಒಂದು ಶಿಲಾಲೇಖ ಸ್ಥಾಪನೆಗೂ ಅನುಮತಿ ನೀಡಿದರು. 

ಆದರೆ ಆ ಶಿಲೆಯ ಮೇಲೆ ಯಾವುದೇ ಸ್ಮಾರಕ ನಿರ್ಮಾಣ ಮಾಡಬಾರದೆಂಬ ತಮ್ಮ ನಿರ್ಣಯವನ್ನು ಮಾತ್ರ ಬದಲಿಸಲೇ ಇಲ್ಲ. ಮುಖ್ಯಮಂತ್ರಿಯವರ ನಿರ್ಣಯಕ್ಕೆ ಮಣಿದು ಸ್ವಾಮಿ ಚಿದ್ಭಾವಾನಂದಜೀಯವರು ಶಿಲೆಯ ಎದುರುಗಡೆ ಮುಖ್ಯತಟದ ಮೇಲೆ ಕೇವಲ 15 x 15 ಅಡಿಗಳ ಪ್ರಮಾಣದಲ್ಲಿ ಧ್ಯಾನ ಮುದ್ರೆಯಲ್ಲಿ ಸ್ವಾಮಿ ವಿವೇಕಾನಂದರು ಕುಳಿತಿರುವಂತಹ ಹಾಗು ಕಬ್ಬಿಣದ ಸರಳುಗಳಿಂದಾವೃತವಾದ ಸ್ಮಾರಕವೊಂದನ್ನು ನಿರ್ಮಾಣ  ಮಾಡಲು ಒಪ್ಪಿಕೊಂಡರು.

ಇಂದಿಗೂ ಅಲ್ಲಿ ಈ ಸ್ಮಾರಕವನ್ನು ನೋಡಬಹುದು. ಇತ್ತ ಅಖಿಲ ಭಾರತೀಯ ವಿವೇಕಾನಂದ ಶಿಲಾ ಸ್ಮಾರಕ ಸಮಿತಿಯು ಮುಖ್ಯಮಂತ್ರಿಯವರ ಆಶ್ವಾಸನೆಯಂತೆ 1963ರ ಜನವರಿ 17ರಂದು ಆ ಬಂಡೆಗಲ್ಲಿನ ಮೇಲೆ ಶಿಲಾ ಸ್ಮಾರಕ ಸನದನ್ನು ಸ್ಥಾಪಿಸಿತ್ತು. ಆದರೆ 1963ರ ಮೇ 16ರಂದು ಇದನ್ನು ರಾತ್ರಿಯ ಸಮಯದಲ್ಲಿ ಮುರಿದು ಸಮುದ್ರಕ್ಕೆಸೆಯಲಾಗಿತ್ತು. ಇದರಿಂದಾಗಿ ಪರಿಸ್ಥಿತಿಯು ಉದ್ವಿಗ್ನಗೊಂಡಿತು. ಚರ್ಚ್ ಹಾಗು ತಮಿಳುನಾಡಿನ ಸರ್ಕಾರದ ಸಂಯುಕ್ತ ವಿರೋಧವನ್ನು ಸ್ಥಾನೀಯರ ಸಹಕಾರದೊಂದಿಗೆ ಎದುರಿಸುವುದು ಸ್ಮಾರಕ ಸಮಿತಿಗೆ ಬಹಳ ಕಠಿಣವಾಗಿತ್ತು. ಮುಖ್ಯಮಂತ್ರಿ ಭಕ್ತವತ್ಸಲಂ ಅಭಿಪ್ರಾಯದಂತೆ ಕೇಂದ್ರ ಸರ್ಕಾರವು ಕೂಡ ಶಿಲೆಯ ಮೇಲೆ ಯಾವುದೇ ಸ್ಮಾರಕ ನಿರ್ಮಿಸುವ ಪಕ್ಷದೊಂದಿಗೆ ಸಹಭಾಗಿಯಾಗುವುದಿಲ್ಲ. ತಮಿಳುನಾಡಿನ ಸರಕಾರವಂತೂ ಕೇಂದ್ರ ಸರ್ಕಾರದ ಸಹಕಾರವಿಲ್ಲದೆ ಏನೂ ಮಾಡುವಂತಿಲ್ಲ. ಈ ಸ್ಥಿತಿಯನ್ನು ನೋಡಿದಾಗ ಇನ್ನೀಗ ಈ ಸಮಸ್ಯೆಯು ಅಖಿಲ ಭಾರತೀಯ ಪ್ರಯತ್ನದಿಂದ ಮಾತ್ರ ಪರಿಹಾರವಾಗಬಹುದೆಂದು ದತ್ತಾಜಿಯವರಿಗೆ ಹಾಗು ಸಮಿತಿಯ ಸದಸ್ಯರಿಗೆ ಅನ್ನಿಸಿತು. ಆದರೆ ಈ ಅಖಿಲ ಭಾರತೀಯ ಪ್ರಯತ್ನ ಕಾರ್ಯಗಳ ನೇತೃತ್ವ ವಹಿಸುವವರಾರು? ಎಂಬ ಪ್ರಶ್ನೆ ಉದ್ಭವಿಸಿದಾಗ ಎಲ್ಲರ ದೃಷ್ಟಿಯೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗು ಸ್ವಾಮಿ ವಿವೇಕಾನಂದರಬಗ್ಗೆ ಅಗಾಧ ಶ್ರಧ್ಧೆಯನ್ನು ಹೊಂದಿದ್ದ ಆರೆಸ್ಸಸ್ ನ ಸರಸಂಘಚಾಲಕರಾದ ಪರಮ ಪೂಜನೀಯ ಗುರೂಜಿಯವರತ್ತಲೇ ನೆಟ್ಟಿತ್ತು. ಆದರೆ ವಿಧಿಯು ಮೊದಲಿನಿಂದಲೇ ಇದಕ್ಕೊಂದು ಆಧಾರ ಭೂಮಿಯನ್ನು ಸಿದ್ಧಗೊಳಿಸಲಾರಂಭಿಸಿತ್ತು !

1963ರ ಮಾರ್ಚ್ ನಲ್ಲಿ ಸಂಘದ ಒಬ್ಬ ಮುಖ್ಯ  ಕಾರ್ಯಕರ್ತರಾದ ಶ್ರೀ ಏಕನಾಥ ರಾನಡೆಯವರನ್ನು ಸರಕಾರ್ಯವಾಹ ಸ್ಥಾನದಿಂದ ಮುಕ್ತಗೊಳಿಸಿ ಅಖಿಲ ಭಾರತೀಯ ಬೌಧ್ಧಿಕ್ ಪ್ರಮುಖ್ ಜವಾಬ್ದಾರಿಯನ್ನು ಅವರಿಗೆ ವಹಿಸಲಾಯಿತು. ಮಾತ್ರವಲ್ಲ ಸ್ವಾಮಿ ವಿವೇಕಾನಂದರ ಜನ್ಮಶತಾಬ್ದಿ ವರ್ಷದ ಪ್ರಯುಕ್ತ ಸಂಘದ ಸಹಕಾರದ ರೂಪದಲ್ಲಿ ಅವರ ವಿಚಾರಗಳ ಒಂದು ಸಂಕಲನವನ್ನು ಸಿಧ್ಧಪಡಿಸುವ ಕೆಲಸವನ್ನು ಅವರಿಗೆ ನೀಡಲಾಯಿತು. ಈ ಕಾರ್ಯವು ರಾನಡೆಯವರಿಗೆ ಬಹಳ ಖುಷಿಯನ್ನು ನೀಡಿತ್ತು. ತಮ್ಮ ವಿದ್ಯಾರ್ಥಿ ಜೀವನದಲ್ಲಿ ವಿವೇಕಾನಂದರ ಬಗ್ಗೆ ಅವರು ಚೆನ್ನಾಗಿ ಓದಿ ತಿಳಿದುಕೊಂಡಿದ್ದರಲ್ಲದೆ ಅವರ ಮನಸ್ಸಿನ ಮೇಲೂ ಗಾಢವಾದ ಪ್ರಭಾವವನ್ನು ಬೀರಿತ್ತು. ಶ್ರೀಗುರೂಜಿಯವರಿಂದ ಈ ನಿರ್ದೇಶನವು ಬಂದೊಡನೆ ಏಕನಾಥರು ಹರ್ಷಚಿತ್ತರಾಗಿಯೇ ಅದನ್ನು ಸ್ವೀಕರಿಸಿದ್ದರಲ್ಲದೆ ಕೊಲ್ಕೊತ್ತಾಗೆ ಹೋಗಿ ವಿವೇಕಾನಂದರ ಅಧ್ಯಯನದಲ್ಲಿ ಮುಳುಗಿ ಬಿಟ್ಟರು! ನಾಲ್ಕೈದು ತಿಂಗಳುಗಳ ತನಕ ಶ್ರೀ ರಾಮಕೃಷ್ಣ ಮಿಶನ್ ನ ಬೇಲೂರು ಮಠದಲ್ಲಿದ್ದುಕೊಂಡು ಅವರ ಸಂಪೂರ್ಣ ಚಿಂತನೆಗಳನ್ನು, ವಾಣಿಗಳನ್ನು, ಮೂರು-ನಾಲ್ಕು ಸಲ ಪಾರಾಯಣ ಮಾಡಿದರು. ಚಿಂತನೆಗಳ ಮಂಥನದಿಂದ ಅವರು ಪಡೆದುಕೊಂಡ ಅನುಭವದ ಸಾರವನ್ನು ಇಂಗ್ಲಿಷ್ ನಲ್ಲಿ 'ರೈಸಿಂಗ್ ಕಾಲ್ ಟು ಹಿಂದೂ ನೇಶನ್' ಮತ್ತು ಹಿಂದಿಯಲ್ಲಿ 'ಉತ್ತಿಷ್ಥತ ಜಾಗ್ರತ್' ಎಂಬ ಶೀರ್ಷಿಕೆಗಳಿಂದ ಶೀರ್ಷಿಕೆಗಳಿಂದ ಪ್ರಕಟಿಸಲಾಗಿದೆ.


ಶಿಲಾಲೇಖವನ್ನು ಧ್ವಂಸಗೊಳಿಸಿದ ನಂತರ ಎಚ್ಚೆತ್ತುಕೊಂಡ ಶಿಲಾಸ್ಮಾರಕ ಸಮಿತಿಯ ಅನೇಕ ಪ್ರಮುಖರು ದತ್ತಾಜಿ ಡಿಡೋಲ್ಕರ್ ರವರೊಂದಿಗೆ ನಾಗಪುರದಲ್ಲಿ ಶ್ರೀಗುರೂಜಿಯವರನ್ನು ಭೇಟಿ ಮಾಡಿದರು. ಗುರೂಜಿಯವರ ಕಣ್ಣುಗಳು ಈ ಮಹಾನ್ ಸಮಸ್ಯೆಯ ನಿವಾರಣೆಗಾಗಿ ಯೋಗ್ಯ ಪಾತ್ರವೊಂದನ್ನು ಅರಸಲಾರಂಭಿಸಿದ್ದವು. ಆದರೆ ಇದು ಕೇವಲ ಸಂಯೋಗವಲ್ಲ, ನಿಯತಿಯ ಯೋಜನೆಯೂ ಆಗಿತ್ತೇನೋ ಎಂಬಂತೆ  ಇದೇ ಸಂದರ್ಭಕ್ಕೆ ಸರಿಯಾಗಿ ಅದು ಕಾರ್ಯನಿಮಿತ್ತ ಏಕನಾಥರನ್ನು ನಾಗಪುರಕ್ಕೆ ಬರುವಂತೆ ಮಾಡಿತು! ಏಕನಾಥರು ಅದೇ ದಿನ ಮಧ್ಯಾಹ್ನ ನಾಗಪುರದಿಂದ ಬೇರೆಡೆಗೆ ಹೋಗುವುದಿತ್ತು. ಆಗ ಶ್ರೀ ಗುರೂಜಿಯವರು ಏಕನಾಥರಿಗೆ ಶಿಲಾಸ್ಮಾರಕ ಸಮಿತಿಯವರ ಸಮಸ್ಯೆಯನ್ನು ತಿಳಿಸುತ್ತಾ "ನೀವು ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿಧ್ಧರಿರುವಿರಾ?" ಎಂದು ಕೇಳಿದರಂತೆ. ಆದಾಗಲೇ ವಿವೇಕಾನಂದರಲ್ಲೇ ಮುಳುಗಿದ್ದ ಏಕನಾಥರು ಆ ಕೂಡಲೇ ಒಪ್ಪಿದರು. ಹಾಗು ಮೊತ್ತಮೊದಲಿಗೆ ಬೇಲೂರಿನ ಮಠಕ್ಕೆ ಬಂದು ರಾಮಕೃಷ್ಣ ಮಠದ ಅಂದಿನ ಅಧ್ಯಕ್ಷರಾಗಿದ್ದ ಸ್ವಾಮಿ ಮಾಧವಾನಂದರ ಆಶೀರ್ವಾದವನ್ನು ಬೇಡಿದರು. ಸ್ವಾಮಿ ಮಾಧವಾನಂದರೊಂದಿಗೆ ಅವರ ಸ್ನೇಹ ಬಹಳ ಹಳೆಯದು. 1963ರ ಜನವರಿ 17ರಂದು ವಿವೇಕಾನಂದರ ವಿಚಾರ ಸಂಕಲನಗಳ ಮೊದಲ ಪ್ರತಿಯನ್ನು ಸಹ ಏಕನಾಥರು ಮಾಧವಾನಂದರಿಗೇ ಅರ್ಪಿಸಿದ್ದರು. ಸ್ವಾಮಿ ಮಾಧವಾನಂದರು "ಇದು ಬಹಳ ಪುಣ್ಯದ ಕೆಲಸವಾಗಿದೆ, ನೀನಿದನ್ನು ವಹಿಸಿಕೊ. ನನ್ನ ಆಶೀರ್ವಾದವೇನು ಸ್ವತಃ ರಾಮಕೃಷ್ಣರ ಹಾಗು ವಿವೇಕಾನಂದರ ಆಶೀರ್ವಾದವೇ ಸದಾ ನಿನ್ನೊಂದಿಗಿರುತ್ತದೆ" ಎಂದರು. ಏಕನಾಥರ ಈ ಹೆಜ್ಜೆಯು ಬಹ ದೂರದರ್ಶಿತ್ವ ಪೂರ್ಣವಾಗಿತ್ತು. ರಾಮಕೃಷ್ಣ ಮಿಶನ್ ನ ಆಶೀರ್ವಾದ,  ಒಪ್ಪಿಗೆ ಪಡೆಯದೇ ಅವರು ಶಿಲಾಸ್ಮಾರಕ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡರೆ, ಆಗೆಲ್ಲಾದರೂ ಪತ್ರಕರ್ತರು ಯಾರಾದರೂ  ರಾಮಕೃಷ್ಣ ಮಿಶನ್ ನವರಲ್ಲಿ ವಿಚಾರಿಸಿದರೆ ಅವರಿಗದರ ಅರಿವೇ ಇಲ್ಲವಾದರೆ ಆಗ ಅಭಿಯಾನದ ಪ್ರಾಮಾಣಿಕತೆಯ ಸಂದೇಹ ಮೂಡು ವಂತಾಗುತ್ತಿತ್ತು.

 ( ಮುಂದುವರೆಯುವುದು )

Feb 11, 2014

ಪತ್ರಿಕೋದ್ಯಮದ ದುರ್ಬಳಕೆ ಅಕ್ಷಮ್ಯವಾಗಬೇಕು...


ಧುರ್ಯೋಧನನ ಆತಿಥ್ಯವನ್ನು ಸ್ವೀಕರಿಸಿದ ದೂರ್ವಾಸರು ದುರ್ಯೋಧನನಿಗೆ ವರ ಕೇಳಲು ಹೇಳಿದಾಗ ಅವನು ಕೇಳಿದ್ದು ದ್ರೌಪದಿಯ ಊಟವಾದ ನಂತರ ಅವರ ಮನೆಗೆ ಊಟಕ್ಕೆ ಹೋಗುವಂತೆ ಕೇಳುತ್ತಾನೆ . ಆ ಮೂಲಕ ಅವರಿಗೆ ಆತಿಥ್ಯ ಸಿಗದೆ ಶಾಪ ಸಿಗಲಿ ಎಂಬ ದುರುದ್ದೇಶದಿಂದ. ಅಕಸ್ಮಾತ್ ಆಗಲೇ ಯುಧ್ಧ ಗೆಲ್ಲಬೇಕು ಎಂದು ಕೇಳಿದ್ದರೆ ಕುರುಕ್ಷೇತ್ರವೇ ನಡೆಯುತ್ತಿರಲಿಲ್ಲ. ಆದರೆ 'ಇನ್ನೊಬ್ಬರಿಗೆ ಕೆಟ್ಟದಾಗಲಿ' ಎಂಬ ನಕಾರಾತ್ಮಕ ಧೋರಣೆಯಿಂದ ಕೂಡಿದ ದುರ್ಯೋಧನ ನಾಶವನ್ನು ಹೊಂದಿದ ಎಂಬ ಕಥೆಯನ್ನು ಕೇಳಿದ್ದೆವು. ಆದರೆ ಈಗಲೂ ಅದು ಎಷ್ಟು ಪ್ರಸ್ತುತ ಎಂದೆನಿಸುತ್ತಿದೆ. 


ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ಆರೆಸ್ಸಸ್, ವಿಹೆಚ್ ಪಿ , ಭಜರಂಗದಳ ಮುಂತಾದ ಹಿಂದೂ ಸಂಘಟನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ವಿರೋಧೀ ಶಕ್ತಿಗಳು ಆ ಮೂಲಕ ಬಿಜೆಪಿಯ ವರ್ಚಸ್ಸಿಗೆ ಧಕ್ಕೆ ತರುವ ಯೋಜನೆ ಹಾಕಿಕೊಂಡಿರುವುದು ಗೋಚರಿಸುತ್ತಿದೆ. ದೇಶದ ಅಭಿವೃಧ್ಧಿಯ ಉತ್ಕಟ ಆದರ್ಶ ಹೊಂದಿರುವ ಮೋದಿಯವರ 'ಮೋಡಿ'ಯನ್ನು ಸಹಿಸಲು ಆಗದವರು ಮಾಧ್ಯಮವನ್ನು ದುರ್ಬಳಕೆ ಮಾಡಿಕೊಳ್ಳುವ ವಾಮಮಾರ್ಗದಲ್ಲಿ ಸಾಗಿದ್ದಾರೆ. 

ಆರೆಸ್ಸಸ್ ನ ಮೋಹನ್ ಜಿ ಭಾಗವತ್ ರವರು ಕೆಲವು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವುದರ ಬಗ್ಗೆ ಅಸೀಮಾನಂದರು ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ ಎಂಬ ಅಪ'ಪ್ರಚಾರ' ಕೊಟ್ಟ ಬೆನ್ನಲ್ಲೇ ಸ್ವಾಮಿ ಅಸೀಮಾನಂದರೇ ಅದನ್ನು ಅಲ್ಲಗಳೆದಿದ್ದಾರೆ. ಇಂಥಹ ಅಪಪ್ರಚಾರದ ಹಿಂದೆ ಅಡಗಿರುವ ಪತ್ರಿಕೋದ್ಯಮದ ದುರ್ಬಳಕೆ ಸಮಾಜದ ಸ್ವಾಸ್ಥ್ಯವನ್ನು  ಹಾಳುಗೆಡವುತ್ತಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ. ಇಡೀ ದೇಶದ ಜನತೆ ದೇಶದ ಸುದ್ದಿವಿಚಾರಗಳನ್ನು ತಿಳಿಯಲು ಮಾಧ್ಯಮವನ್ನೇ ನಂಬಿರುವಾಗ ಸತ್ಯಕ್ಕೆ ದೂರವಾದ ವಿಚಾರಗಳನ್ನು ದೇಶದಲ್ಲಿ ಹರಡುವುದು ಅಕ್ಷಮ್ಯ ಅಪರಾಧವಾಗಿ ಪರಿಗಣಿಸಿ ಘೋರ ಶಿಕ್ಷೆಗೆ ಅರ್ಹವಾಗಿಸಬೇಕು. ಆಗ ಮಾತ್ರ ಮಾಧ್ಯಮ ಕ್ಷೇತ್ರವೂ ತನ್ನ ಕರ್ತವ್ಯವನ್ನು ಹೆಚ್ಚಿನ ಜವಾಬ್ದಾರಿಯುತವಾಗಿ ನಿರ್ವಹಿಸಲು ಅವಕಾಶವಾಗುತ್ತದೆ.

----------------------------------------------------------------------------------------------------------

ಈ ನನ್ನ ಮೇಲಿನ ಬರಹ ಫೆಬ್ರವರಿ ೧೦ ರ ಕನ್ನಪ್ರಭದಲ್ಲಿ ಪ್ರಕಟವಾಯಿತು. ಭಟ್ಟರ ತಂಡ ಕನ್ನಡಪ್ರಭಕ್ಕೆ ವಲಸೆ ಬಂದ ಮೇಲೆ ನನ್ನ ಮೊದಲ ಬರಹ. ಖುಷಿಯಾಯಿತು.