Dec 26, 2011

ಚಕ್ರವರ್ತಿಯವರ 'ಜಾಗೋ ಭಾರತ್' : ಅತ್ಯಂತ ಪ್ರೇರಣಾದಾಯಿ ಕಾರ್ಯಕ್ರಮ

ಮೊನ್ನೆ ೨೫ರ ಸಂಜೆ ಗಿರಿನಗರದ ಶ್ರೀ ರಾಮಕೃಷ್ಣ ವಿಶ್ವಭಾವೈಕ್ಯ ಮಂದಿರದ ಆವರಣದಲ್ಲಿ, ರಾಮಕೃಷ್ಣ ಸೇವಾ ಟ್ರಸ್ಟ್ ಸಹಯೋಗದಲ್ಲಿ, ಯೋಗಶ್ರಿ ಸಂಸ್ಥೆ ಆಯೋಜಿಸಿದ್ದ, ೨೪೩ ನೆಯ 'ಜಾಗೋ ಭಾರತ್' ಕಾರ್ಯಕ್ರಮ, ನೆರೆದಿದ್ದ ಭಾರಿ ಜನಸ್ತೋಮ, ಮೈ-ಮನ 'ದೈಶಿಕ ಭಾವಮಯ'ವಾಗುವ ವಾತಾವರಣ, ಚಕ್ರವರ್ತಿ ಸೂಲಿಬೆಲೆಯವರ ಪ್ರೇರಣಾದಾಯಿ ಮಾತುಗಳು, ಅನುಭವಗಳು ಎಂಥವರಲ್ಲೂ 'ದೇಶಭಕ್ತಿ'ಯನ್ನು ಜಾಗೃತಗೊಳಿಸುವಂತಿತ್ತು. ಮಧ್ಯೆ ಮಧ್ಯೆ ದೇಶಭಕ್ತಿ ಗೀತೆಗಳ ಗಾಯನ ವಾತಾವರಣದ ಪಾವಿತ್ರ್ಯವನ್ನು ಹೆಚಿಸುತ್ತಿದ್ದವು.

ಬಹಳ ದಿನಗಳಿಂದ ಚಕ್ರವರ್ತಿಯವರ 'ಜಾಗೋ ಭಾರತ್' ಕಾರ್ಯಕ್ರಮ ವನ್ನು ವೀಕ್ಷಿಸಲೇಬೇಕು ಎಂದು ಕಾಯುತ್ತಿದ್ದೆ. ಕೊನೆಗೂ ಮೊನ್ನೆ ಆ ಅವಕಾಶ ಸಿಕ್ಕಿತು. ಸ್ಥಳ ಹುಡುಕಿಕೊಂಡು ಹೋಗಿ ಕಾರ್ಯಕ್ರಮದಲ್ಲಿ ಕೂತವನೇ ಕೊನೆಯಲ್ಲಿ ವಂದೇಮಾತರಂ ಮುಗಿಯುವವರೆಗೂ ಪ್ರಯತ್ನಪಟ್ಟರೂ ಮೇಲೆ ಏಳಲು ಸಾಧ್ಯವಾಗಲೇ ಇಲ್ಲ. ಆ ನಡುಗುವ ಚಳಿಯಲ್ಲೂ ಕೂತಿದ್ದ ಹೆಂಗಸರು ಮಕ್ಕಳನ್ನು ನೋಡಿ ನನಗೆ ನಾನೇ ಹಾಸ್ಯ ಮಾಡಿಕೊಂಡು ಕಾರ್ಯಕ್ರಮ ಮುಗಿಸಿಕೊಂಡೇ ತೆರಳಿದ್ದು.

ಕಾರ್ಯಕ್ರಮದ ವಾತಾವರಣ ಹೇಗಿತ್ತು ಅಂದ್ರೆ ಸಿಖ್ಖ್ ಪಂಥ ಪ್ರಾರಂಭವಾದ ಆ ದಿನ ವನ್ನು ನೆನಪಿಸುವಂತಿತ್ತು. ಆ ಸಂದರ್ಭದಲ್ಲಿ ಸೂಲಿಬೆಲೆ ಯವರೆನಾದರೂ 'ದೇಶಕ್ಕಾಗಿ ಯಾರು ಪ್ರಾಣ ಕೊಡಲು ತಯಾರಿದೀರ?' ಅಂತ ಏನಾದರು ಕೇಳಿದ್ದರೆ ಬಹುತೇಕ ಎಲ್ಲರು 'ನಾ ರೆಡಿ ' ಎಂದು ಏಳುತ್ತಿದ್ದರು. ಆ ತರಹದಲ್ಲಿ ಸ್ವದೇಶದ ಬಗೆಗಿನ ಅಭಿಮಾನವನ್ನ ತಟ್ಟಿ ಎಬ್ಬಿಸಿದಂತಿತ್ತು. ಹೆಸರಿಗೆ ತಕ್ಕಂತೆ 'ಭಾರತವನ್ನ ಜಾಗೃತ'ಗೊಳಿಸು ವಂತಿತ್ತು. 'ಜಾಗೋ ಭಾರತ್ 'ಕಾರ್ಯಕ್ರಮಕ್ಕೆ ತಾವೇನಾದರೂ ಮಾಡಬೇಕೆಂದು ಬಂದಿದ್ದ ವೇದಿಕೆಯ ಮೇಲಿದ್ದ ವರನ್ನ ಪರಿಚಯ ಮಾಡಿಸಿದಾಗ ಎಂಥವರಲ್ಲೂ 'ತಾವೂ ಸಹ ಏನಾದರು ಮಾಡಬೇಕು' ಎಂದೆನಿಸದೇ ಇರಲು ಸಾಧ್ಯವೇ ಇಲ್ಲ.


ಚಕ್ರವರ್ತಿಯವರ ೨೪೩ ನೆಯ 'ಜಾಗೋ ಭಾರತ್' ಕಾರ್ಯಕ್ರಮವಾದ್ದರಿಂದ ಅವರ ಹಿಂದಿನ ಅನುಭವಗಳು ಎಂಥವರ ಕಣ್ಣಲ್ಲೂ ಕಂಬನಿ ಬರಿಸದೆ ಇರಲಿಲ್ಲ. ಅವಾಗವಾಗ ಅವರು ಹಾರಿಸುತ್ತಿದ್ದ ನಗೆ ಚಟಾಕಿಗಳು ಸಹ ಎಲ್ಲರನ್ನು ನಗಿಸಿತ್ತು. ಅವರು ಹೇಳಿದ ಒಂದು ಘಟನೆ.

ಮದುವೆ ನಿಶ್ಚಯವಾದ ಒಬ್ಬಳು ಹುಡುಗಿ ಚಕ್ರವರ್ತಿಯವರನ್ನು ತನ್ನ ಮದುವೆಯ ಸಂದರ್ಭದ ಆರತಕ್ಷತೆಗೆ 'ಜಾಗೋ ಭಾರತ್' ಕಾರ್ಯಕ್ರಮ ವನ್ನು ನಡೆಸಿಕೊಡಲು ಕೇಳಿಕೊಳ್ಳುತ್ತಾಳೆ. ಎಷ್ಟು ಬೇಡವೆಂದರೂ ಕೇಳದೆ ಹಠ ಹಿಡಿಯುತ್ತಾಳೆ. ಕಾರ್ಯಕ್ರಮ ಮುಗಿದ ನಂತರ ಚಕ್ರವರ್ತಿಯವರ ಹತ್ತಿರ ಬಂದು ತನ್ನ ಮಕ್ಕಳನ್ನು ದೇಶದ ಕೆಲಸಕ್ಕಾಗಿ ಕಳಿಸಿಕೊಡ್ತೇನೆ ಅಂತ ಹೇಳುವಷ್ಟರ ಮಟ್ಟಿಗೆ ಪ್ರೇರಣೆ ಪಡೆದಿರುತ್ತಾಳೆ. ಇಂತಹ ಎಷ್ಟೋ ಘಟನೆಗಳ ಸರಮಾಲೆಯನ್ನೇ ನಮ್ಮ ಮುಂದಿರಿಸಿದ ಕಾರ್ಯಕ್ರಮ ನಿಜವಾಗಲು ಅತ್ಯಂತ ಪ್ರೇರಣಾದಾಯಿಯಾಗಿತ್ತು. ತಕ್ಷಣ ಮನೆಗೆ ಬಂದು ಮುಂದಿನ ಜಾಗೋ ಭಾರತ್ ಕಾರ್ಯಕ್ರಮ ಯಾವಾಗ ಎಂದು
ತಪತಪಿಸುವ ಮಟ್ಟಿಗೆ ಪ್ರಭಾವಿಯಾಗಿತ್ತು ಎಂದು ಹೇಳಲು ಹೆಮ್ಮೆಯಾಗುತ್ತದೆ.

ಕಾರ್ಯಕ್ರಮದ ಕೊನೆಯಲ್ಲಿ ಸೂಲಿಬೆಲೆಯವರು ಎಲ್ಲರಿಗು ಪ್ರಾರ್ಥನೆ ಮಾಡಿದ್ದು ಏನು ಗೊತ್ತ? 'ದಯವಿಟ್ಟು ಇನ್ನಾದರು ನಮ್ಮ ಭಾರತವನ್ನ ಬೈಯುವುದನ್ನ ನಿಲ್ಲಿಸಿ' ಅಂತ.




ಖಂಡಿತ ಎಲ್ಲರು ಹಾಗು ಎಲ್ಲವಾಗಲೂ ಕೇಳಬೇಕಾದ, ನೋಡಬೇಕಾದ ಕಾರ್ಯಕ್ರಮ 'ಜಾಗೋ ಭಾರತ್'. ನಮ್ಮ ದೇಶದ ಹಿರಿಮೆಗಳೇನು ಎಂದು ತಿಳಿದುಕೊಳ್ಳಲು, ಭಾರತವನ್ನು ಪ್ರೀತಿಸಲು, 'ಭಾರತೀಯ'ನಾಗಲು ಹೆಮ್ಮೆಪಡಲು ಏನಿದೆ ಏನು ತಿಳಿದುಕೊಳ್ಳಲು ಯಾರಾದರು 'ಕಷ್ಟ' ಪಡುತ್ತಿದ್ದರೆ ದಯವಿಟ್ಟು ತಪ್ಪಿಸಿಕೊಳ್ಳಬೇಡಿ, 'ಜಾಗೋ ಭಾರತ್'.


Dec 9, 2011

ಆರೆಸ್ಸೆಸ್ ಮತ್ತು ಭಾಜಪದ ಸಂಬಂಧ: ಸಜ್ಜನ ಹಿಂದೂಸಮಾಜದ ಕಳಕಳಿ


ಕೆಲ ದಿನಗಳ ಹಿಂದೆ ಮತ್ತೊಂದು ಹೊಸ 'ಆರೋಪ ಸುದ್ದಿ' ಚಾಲ್ತಿಗೆ ಬಂದಿತ್ತು. ಅದು ಯಡಿಯೂರಪ್ಪನವರು 'ಹೊಸ ದಿಗಂತ' ಎಂಬ ದಿನಪತ್ರಿಕೆಗೆ ನೀಡಿದ ಅಪಾರ ಕೊಡುಗೆಗಳ ಬಗ್ಗೆ. ಯಡ್ಡಿಯವರು ಆರೆಸ್ಸೆಸ್ ನ ಜೊತೆ ಗುರುತಿಸಿಕೊಂಡಿರುವ ಒಂದೇ ಕಾರಣಕ್ಕೆ, ಇದನ್ನೇ ಆಧಾರವಾಗಿಟ್ಟುಕೊಂಡು ಸಂಘಪರಿವಾರದ ವಿರುದ್ಧ ಮಾತಾಡಲು, ಬರೆಯಲು, ಸುದ್ಧಿ ಹಬ್ಬಿಸಲು, ಆ ಮೂಲಕ 'ಹೆಸರುವಾಸಿ'ಯಾಗಲು, ಪ್ರಶಸ್ತಿ -ಅನುದಾನಗಳನ್ನು 'ಸಂಪಾದಿಸಲು' ದೇಶದಲ್ಲಿ ಬಹಳ ದೊಡ್ಡ ದೊಡ್ಡ 'ಸಂಘಟನೆ'ಗಳೇ ಇವೆ. ಅವಕ್ಕೇನು ಕೊರತೆಯಿಲ್ಲ. ಇವುಗಳ ಹಿಂದಿನ ಹೇಸಿಗೆ ರಾಜಕಾರಣ ಎಲ್ಲರಿಗು ಗೊತ್ತಿರುವಂಥದ್ದೇ.

ಆದರೆ ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗಲೇ 'ಹೊಸ ದಿಗಂತ ' ಪತ್ರಿಕೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಾದದ್ದು ಎಂಬುದು ನಿಜವಾಗಿರಬಹುದು. ಯಡಿಯೂರಪ್ಪನವರು ಜೈಲಿನಿಂದ ಬಿಡುಗಡೆಯಾದ ಮರುದಿನದ 'ಹೊಸದಿಗಂತ' ಪತ್ರಿಕೆಯ ಮುಖಪುಟದ ಶೀರ್ಷಿಕೆ ಕೂಡ ಇದಕ್ಕೆ ಪುಷ್ಟಿ ನೀಡುವಂತಿರಬಹುದು. ಹಾಗು ಅದೇ ಯಡಿಯೂರಪ್ಪಾಧಿಕಾರದ ಸಮಯದಲ್ಲೇ ಆರೆಸ್ಸೆಸ್ಸಿನ ಜತೆ ಗುರುತಿಸಿಕೊಂಡವರು ಕೆಲವರು 'ತಮ್ಮ ಆರೆಸ್ಸೆಸ್ ತನವನ್ನು' ಬಳಸಿ ಭಾಜಪದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಆರೆಸ್ಸೆಸ್ ಗೆ ಮುಜುಗರವಾಗಿರುವುದು ಸತ್ಯವಾದರೂ ಅದಕ್ಕೆ ಆರೆಸ್ಸಸ್ಸನ್ನು ಹೊಣೆಯಾಗಿಸಲು ಸಾಧ್ಯವಿಲ್ಲ. ಅದು ಪರಮ ಮೂರ್ಖತನವಾದೀತು. ಆದರೆ ಪಂಚಾಯಿತಿ ಮಟ್ಟದ ಅಥವಾ ತಾಲ್ಲೂಕು ಮಟ್ಟದಲ್ಲೇ ತಮ್ಮ 'ಭ್ರಷ್ಟತೆಯನ್ನು ಸಾಬೀತು' ಪಡಿಸುವವರಿಗೆ ಜಿಲ್ಲಾಮಟ್ಟಕ್ಕೆ, ರಾಜ್ಯಮಟ್ಟಕ್ಕೆ ಹೋಗುವ ಅವಕಾಶವನ್ನು ನೀಡದಿರುವಲ್ಲಿ ಆರೆಸ್ಸೆಸ್ ಪ್ರಮುಖ ಪಾತ್ರ ವಹಿಸಬೇಕಾದ ಅವಶ್ಯಕತೆ ಈ ದೇಶದ ಸಜ್ಜನ ಹಿಂದೂ ಸಮಾಜದ ಅವಶ್ಯಕತೆಯೇ ಆಗಿದೆ.



ಆರೆಸ್ಸೆಸ್ ಮಾಡುತ್ತಿರುವ ಸೇವಾ ಕೆಲಸಗಳು, ಹಿಂದೂ ಸಂಘಟನೆ ಹಾಗು ಅದಕ್ಕೆ ಪೂರಕವಾದ ಎಲ್ಲ ಕೆಲಸಗಳು ಖಂಡಿತ ಈ ದೇಶಕ್ಕೆ ಅವಶ್ಯ, ಅನಿವಾರ್ಯ. ಈ ವಿಷಯವನ್ನು ಸಾಕಷ್ಟು ಕಾಂಗ್ರೆಸ್ಸಿಗರೂ ವೈಯಕ್ತಿಕವಾಗಿ ಒಪ್ಪುತ್ತಾರೆ. ಅಷ್ಟೇ ಅಲ್ಲ ರಹಸ್ಯವಾಗಿ ಪ್ರೋತ್ಸಾಹಿಸುತ್ತಾರೆ ಕೂಡ. ಆದರೆ ಕಾಂಗ್ರೆಸ್ಸಿನಲ್ಲಿನ 'ಅಸ್ತಿತ್ವದ' ಪ್ರಶ್ನೆಯ ಕಾರಣಕ್ಕೆ ಅದನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳುವುದಿಲ್ಲವಷ್ಟೇ. ಅವರ ಅಸಹಾಯಕತೆ ನಮಗೆ ಅರ್ಥವಾಗುತ್ತದೆ. ಪಾಪ..!

ಆದರೆ ಆರೆಸ್ಸೆಸ್ 'ಮಾಡದಿರುವ' ಕೆಲಸದ ಹಾಗು ಅದರ ಪರಿಣಾಮಗಳ ಬಗ್ಗೆ ಸಮಾಜದ ಹಲವರಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಆರೆಸ್ಸೆಸ್ಸಿನ ನಿಷ್ಠಾವಂತ ಕಾರ್ಯಕರ್ತರಲ್ಲೇ ಚಿಂತೆಗೆ ಕಾರಣವಾಗಿರುವುದು ನಿಜ. ತಮ್ಮ ಮನೆಯ ಮಕ್ಕಳ ತಪ್ಪಿಗೆ ತಾವೇ ಮೊದಲು ದಂಡಿಸಬೇಕೆ ಹೊರತು ಬೇರೆಯವರು ದಂಡಿಸಲು ಅವಕಾಶ ಕೊಡಬಾರದು ಎಂಬುದು ಆರೆಸ್ಸೆಸ್ಸಿನಲ್ಲೇ ಆಡುವ ಮಾತು. ಅದೇ ತರಹದಲ್ಲಿ ಆರೆಸ್ಸೆಸ್ಸಿನ ಕಾರ್ಯಕರ್ತರಾದ ಕಾರಣಕ್ಕೆ, ಕೆಲ ತಿಂಗಳುಗಳ ಕಾಲ ಪೂರ್ಣಾವಧಿ ಕಾರ್ಯಕರ್ತರಾದ ಕಾರಣಕ್ಕೆ, ಭಾಜಪದಲ್ಲಿ ಸೀಟು ಗಿಟ್ಟಿಸಿಕೊಂಡವರು, 'ಸ್ವಯಂಸೇವಕನು' ಮಾಡಬಾರದ್ದನ್ನು ಮಾಡುತ್ತಿದ್ದರೂ ಸಂಘದ ಹಿರಿಯರು ಬರೇ 'ಸಲಹೆ - ಸೂಚನೆ'ಗಳಿಗೆ ಸೀಮಿತವಾದದ್ದು ಮಾತ್ರ ಆರೆಸ್ಸಸ್ ನ ಅಸಹಾಯಕತೆಯನ್ನು ತೋರಿಸುತ್ತದೆ. ಅಧಿಕಾರವೇರಿದ ಒಬ್ಬ ಸ್ವಯಂಸೇವಕನನ್ನು ಅವನ ಚಾರಿತ್ರ್ಯದ ಆಧಾರದ ಮೇಲೆ ನಿಯಂತ್ರಣ ಮಾಡುವ ಇಚ್ಛೆ ಅಥವಾ ಅವಕಾಶ ಸಂಘಕ್ಕೆ ಇಲ್ಲದಿದ್ದರೂ ಅವನಿಂದ ಬರೇ ಉತ್ತಮ ಆಡಳಿತವನ್ನು ಅಪೇಕ್ಷಿಸುವ ಈ ಅಸಹಾಯಕತೆಗೆ ಉತ್ತರ?



ಪ್ರಸ್ತುತ ಸಮಯದಲ್ಲಿ ಆರೆಸ್ಸೆಸ್ಸಿನ ಸಾಮಾನ್ಯ ಕಾರ್ಯಕರ್ತ ಅಥವಾ ಸಜ್ಜನ ಹಿಂದೂ ಸಮಾಜದ ವರ್ಗ ಬಯಸುವುದು, ಆರೆಸ್ಸಸ್ ಖಡಾಖಂಡಿತವಾಗಿ ಬಿಜೆಪಿಯನ್ನು ತನ್ನ ಪರಿವಾರವಲ್ಲ ಎಂದು ಘೋಷಿಸುವುದು ಅಥವಾ 'ಸ್ವಯಂಸೇವಕತ್ವ'ವನ್ನು ಕಾಪಾಡಿಕೊಳ್ಳಲಾಗದವರನ್ನು ಮುಲಾಜಿಲ್ಲದೆ ಭಾಜಪದಿಂದ ಹೊರಹಾಕಿ 'ತಾನು ನಿರ್ಮಾಣ' ಮಾಡಿದ ವ್ಯಕ್ತಿಯನ್ನು ಆ ಜಾಗಕ್ಕೆ ತಂದು ಕೂರಿಸುವುದು. ಹೊಸ ವ್ಯಕ್ತಿಗಳಿಂದ ಅಧಿಕಾರಕ್ಕೆ ಬರಲು ಕಷ್ಟವಾಗಬಹುದು ಹಾಗು ಅಧಿಕಾರಕ್ಕೆ ಬಂದ ಮೇಲೆ ಹೊಸಬರೂ ಸಹ ತಪ್ಪು ಹಾದಿ ತುಳಿಯಬಹುದು. ಅಧಿಕಾರಕ್ಕೆ ಬರಲು ಸಾಧ್ಯವೋ ಅಲ್ಲವೋ, ಕಷ್ಟವೋ ನಷ್ಟವೋ, ಸಚ್ಚಾರಿತ್ರ್ಯ ವ್ಯಕ್ತಿಗಳಿಗೆ ಮಾತ್ರ ಅವಕಾಶ ನಿಡಿದಾಗ ಮಾತ್ರ ಆರೆಸ್ಸೆಸ್ ತನ್ನ ಮೇಲೆ ಸಮಾಜದ ಸಜ್ಜನ ವರ್ಗ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಸಾಮಾನ್ಯ ಸ್ವಯಂಸೇವಕನಾಗಿದ್ದಾಗ ಅತ್ಯಂತ ಒಳ್ಳೆಯ ಚಾರಿತ್ರ್ಯವುಳ್ಳ ವ್ಯಕ್ತಿಯಾಗಿದ್ದವ ಅಧಿಕಾರಕ್ಕೆ ಬಂದ ಕೂಡಲೇ ಆಸ್ತಿವಂತನಾಗುತ್ತಾನೆ. ಸಂಘದ ಜವಾಬ್ದಾರಿಯಿದ್ದವ 'ಭಾಜಪದ ಅಧಿಕಾರವುಳ್ಳವ'ನಾಗುತ್ತಾನೆ ಎಂದರೆ, ಸಾಮಾನ್ಯ ವ್ಯಕ್ತಿಯಾಗಿ 'ಅಧಿಕಾರ ಏರುವವ'ನಿಗೂ, ಒಬ್ಬ ಸ್ವಯಂಸೇವಕನಾಗಿ 'ಅಧಿಕಾರ ಏರುವವ'ನಿಗೂ ಏನು ವ್ಯತ್ಯಾಸ? ಹಾಗಿದ್ದಾಗಲೂ ಆ ವ್ಯಕ್ತಿಗೆ ಸಂಘದ ಪೋಷಣೆ ಸಿಕ್ಕಿದರೆ ಅವನಿಗೆ ಎಂದಿಗೂ ತನ್ನ ತಪ್ಪಿನ ಅರಿವಾಗುವುದಿಲ್ಲ. ಅವನಿಗೆ 'ಅಪರಾಧಿತನ' ಕಾಡುವುದಿಲ್ಲ. ಅವನು ತನ್ನ ತಪ್ಪನ್ನು ತಿದ್ದಿಕೊಳ್ಳುವುದಿಲ್ಲ.



ಯಾವಾಗ ತನ್ನ ತಪ್ಪಿನ ಕಾರಣಕ್ಕೆ ಆರೆಸ್ಸೆಸ್ ನನ್ನನ್ನು ಉಪೇಕ್ಷಿಸುತ್ತದೆ ಎಂದೆನಿಸುತ್ತದೋ ಆಗ ತಪ್ಪಿತಸ್ಥನಿಗೆ ಯಾವುದೋ ಮಟ್ಟದ ಹಿಂಜರಿಕೆ ಆಗುವುದು ಖಂಡಿತ. ಮತ್ತೊಮ್ಮೆ ಅವನು ಸಾಮಾನ್ಯ ಸ್ವಯಂಸೇವಕನ ಮಟ್ಟದಿಂದ ತನ್ನ ಚಾರಿತ್ರ್ಯವನ್ನು ಸಾಬೀತು ಪಡಿಸಿ ಭಾಜಪಕ್ಕೆ ಬರಲು ಪ್ರಯತ್ನಿಸುತ್ತಾನೆ. ಆರೆಸ್ಸೆಸ್ ಏನು ಮಾಡುತ್ತದೆ ಎಂಬುದನ್ನು ಸಮಾಜ ನೋಡುವುದು ಸ್ವಯಂಸೇವಕರ ಮೂಲಕವೇ. ಅದು ಸ್ಥಳೀಯ ಸ್ವಯಂಸೇವಕರ ಮೂಲಕ. ಇನ್ನೂ ಮುಖ್ಯವಾಗಿ ಸ್ಥಳೀಯ 'ಅಧಿಕಾರಸ್ಥ ಸ್ವಯಂಸೇವಕರ' ಮೂಲಕ. ಆ ಜಾಗಕ್ಕೆ ನಾವು ಸರಿಯಾದವರನ್ನು ನಿಲ್ಲಿಸದಿದ್ದರೆ 'ಅಧಿಕಾರಕ್ಕೆ ಬಂದ ನಂತರ ಸ್ವಯಂಸೇವಕನೂ ಒಂದೇ, ಇತರರೂ ಒಂದೇ' ಎಂದಾಗುತ್ತದೆ. ಸಂಘಟನಾ ಕೌಶಲ, ಮಾತಿನ ಕೌಶಲ, ಹಣದ ಸಾಮರ್ಥ್ಯ, ಸಂಪರ್ಕ ಸಾಮರ್ಥ್ಯ ಇವೆಲ್ಲವೂ ಚಾರಿತ್ರ್ಯದ ನಂತರದ ಸ್ಥಾನವನ್ನು ಪಡೆಯುವಂತಾದರೆ ಮಾತ್ರ ಭಾಜಪದಲ್ಲಿ ಸಜ್ಜನರು ಇರಲು ಹಾಗು ಸಜ್ಜನರು ಉಳಿಯಲು ಸಾಧ್ಯವಾಗುತ್ತದೆ.

ಈ ಕೆಲಸ ನಾವು ಹೇಳುವಷ್ಟು ಅಥವಾ ಬರೆಯುವಷ್ಟು ಸುಲಭವಲ್ಲ ಎಂಬ ಸತ್ಯದ ಅರಿವಿದ್ದರೂ ನಮ್ಮ ಅಪೇಕ್ಷೆಯ ಹಿಂದೆ ಉತ್ತಮ ಸಮಾಜ ನಿರ್ಮಾಣದ ಕಳಕಳಿಯಿದೆ ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು. ಸಸಿಯಿಂದ ಹೆಮ್ಮರದೆತ್ತರಕ್ಕೆ ಬೆಳೆದ ಆರೆಸ್ಸೆಸ್ಸಿನ ಬಗ್ಗೆ ಅತ್ಯಂತ ನಂಬಿಕೆ, ವಿಶ್ವಾಸವಿದ್ದರೂ, ಭವಿಷ್ಯದ 'ಭವ್ಯ ಭಾರತ ನಿರ್ಮಾಣ'ದ ಕನಸು ಎಲ್ಲಿ ಅಸಾಧ್ಯವಾಗುವುದೋ ಎಂಬ ಸಂಶಯ, ಭಯ ಹಿಂದೂಸಮಾಜದ ನಮ್ಮಂತಹ ಹಲವರಲ್ಲಿ ಮೂಡಿರುವ ಕಾರಣಕ್ಕೆ ನಮ್ಮ ಮನಸ್ಸಿನ ದುಗುಡಗಳನ್ನ ಹೊರಕ್ಕೆ ಹಾಕಿದ ಸಮಾಧಾನವಷ್ಟೇ.


"ವಂದೇ ಭಾರತಮಾತರಂ"

Dec 1, 2011

ಮತ್ತೂರು ವಿಜಯದಶಮಿ ಬೌದ್ಧಿಕ್ : ಭಾಗ - ೪

ಒಮ್ಮೆ ಒಂದು ಘೋಷ್ ವರ್ಗ ನಡೀತಿತ್ತು. ಅವಾಗ ಒಬ್ಬ ಘೋಷ್ ಶಿಕ್ಷಕ, ಒಬ್ಬ ಘೋಷ್ ಶಿಕ್ಷಾರ್ಥಿ ಅಪ್ಪಾಜಿ ಜೋಶಿಯವರೊಡನೆ ಹೋಗ್ತಾ ಇದ್ದರು. ಆಗ ಡಾಕ್ಟರ್ ಜಿ ಆ ಘೋಷ್ ಶಿಕ್ಷಕ ಮತ್ತು ಶಿಕ್ಷಾರ್ಥಿಯವರ ಮಧ್ಯೆ ನಡೆದು ಹೋದರು. ಆಗ ಘೋಷ್ ಶಿಕ್ಷಕ 'ಡಾಕ್ಟರ್ ಜಿ ಹಾಗೆ ಮಧ್ಯೆ ಹೋಗಬಾರದು. ಪಕ್ಕದಲ್ಲಿ ಹೋಗಬಹುದು' ಅಂತ ಹೇಳಿದ. ಆ ನಂತರ ಅಪ್ಪಾಜಿ ಜೋಷಿ ಡಾಕ್ಟರ್ ಜಿಯವರಿಗೆ ಕೇಳಿದರು 'ನೀವು ಬೇಕು ಅಂತಲೇ ಹಾಗೆ ನಡೆದುಕೊಂಡಿರಲ್ಲವೇ?, ಯಾಕೆ?' ಅಂತ ಕೇಳಿದಾಗ ಅದಕ್ಕೆ ಡಾಕ್ಟರ್ ಜಿ 'ಸಂಘದ ಸ್ವಯಂಸೇವಕ ನನಗೆ ತಲೆಬಾಗುತ್ತಾನೋ ಅಥವಾ ಸಂಘದ ನಿಯಮಗಳಿಗೆ ತಲೆಬಾಗುತ್ತಾನೋ ಅನ್ನೋದನ್ನ ತಿಳಿದುಕೊಳ್ಳಲು. ಅವನು ಸರಿ ಮಾಡಿದ.' ಅಂತ ಅಪ್ಪಾಜಿಯವರಿಗೆ ಹೇಳಿದರು.

ಇನ್ನೊಮ್ಮೆ ವರ್ಗದ ಬೈಠಕ್ ನಲ್ಲಿ ಡಾಕ್ಟರ್ ಜಿ 'ನಾನು ಡಾಕ್ಟರ ಕೇಶವ ಬಲಿರಾಮ ಹೆಡಗೆವಾರ್ ಹೇಳ್ತಾ ಇದ್ದೀನಿ ಇದು ಹಿಂದೂ ರಾಷ್ಟ್ರ ಅಲ್ಲ' ಅಂತ ಹೇಳಿದಾಗ ಎಲ್ಲರಿಗೂ ಆಶ್ಚರ್ಯ .! ತುಂಬಾ ಜನ 'ಅದು ಸಾಧ್ಯ ಇಲ್ಲ' ಅಂತ ಅಂದ್ರು. 'ಅದಿರಲಿ, ಇದಕ್ಕೆ ನಿಮ್ಮಗಳ ಉತ್ತರ ಏನು?' ಅಂತ ಡಾಕ್ಟ ರ್ ಜಿ ಕೇಳಿದ್ದಕ್ಕೆ 'ಆಗ ಡಾಕ್ಟರ್ ಜಿ ಸರಸಂಘಚಾಲಕರಾಗಿರೋದಿಲ್ಲ' ಅಂತ ಉತ್ತರ ಕೊಟ್ರು. ಅಂದ್ರೆ ಡಾಕ್ಟರ್ ಜಿ ಯವರಿಗೆ ಸ್ವಯಂಸೇವಕರು ತನ್ನನ್ನು ನಿಷ್ಠೆಯಿಂದ ನೋಡಬೇಕು ಅಂತ ಇರಲಿಲ್ಲ, ಸಂಘವನ್ನ ನಿಷ್ಠೆಯಿಂದ ನೋಡಬೇಕು ಅಂತ ಇತ್ತು. ಸಂಘದ ವಿಚಾರವನ್ನ, ಗುರಿಯನ್ನ, ನಿಷ್ಠೆಯಿಂದ ಅನುಸರಣೆ ಮಾಡಬೇಕು ಅಂತ ಇತ್ತು. ತುಂಬಾ ಸಂದರ್ಭದಲ್ಲಿ ಮನುಷ್ಯ ಇಲ್ಲೇ ಎಡವುವಂಥದ್ದು. ಸಂಘಕ್ಕೆ ಬರುವುದಕ್ಕೆ ಯಾರೋ ಒಬ್ಬರು ಸ್ನೇಹಿತರು ಕಾರಣರಾಗಬಹುದು. ಆದರೆ ಇಲ್ಲಿ ಉಳಿಯಬೇಕಾದರೆ ಸಂಘದ ನಿಷ್ಠೆಯನ್ನೇ ಉಳಿಸಿಕೊಳ್ಳಬೇಕಾದ್ದು. ಇದನ್ನ ಹೆಜ್ಜೆಹೆಜ್ಜೆನಲ್ಲಿ ಡಾಕ್ಟರ್ ಜಿ ಕಲಿಸ್ತಾ ಇದ್ರು.

ಪ್ರತ್ಯಕ್ಷ ಡಾಕ್ಟರ್ ಜಿ ಬಗ್ಗೆ ತುಂಬಾ ಜನಕ್ಕೆ ಡಾಕ್ಟರ್ ಜಿ ತುಂಬಾ ದೊಡ್ಡವರು ಅಂತ ಅನ್ನಿಸ್ತಾನೇ ಇರ್ಲಿಲ್ಲ. ಅಂದ್ರೆ ತಮಗಿಂತ ೨ ಹೆಜ್ಜೆ ಮುಂದಿರಬಹುದು, ನಾವು ೨ ಹೆಜ್ಜೆ ಮುಂದಿಟ್ರೆ ನಾವು ಡಾಕ್ಟರ್ ಜಿ ಜೊತೆ ಅಂತ ಯೋಚಿಸ್ತಾ ಇದ್ರು. ಆದ್ರೆ ತಾವು ೨ ಹೆಜ್ಜೆ ಇಡುವ ಹೊತ್ತಿಗೆ ಡಾಕ್ಟರ್ ಜಿ ಇನ್ ೨ ಹೆಜ್ಜೆ ಮುಂದೆ ಇಡ್ತಾ ಇದ್ರು. ನೋಡಕ್ಕೆ ೨ ಹೆಜ್ಜೆ ಮಾತ್ರ ಮುಂದಿದ್ರೂ ಮನಸ್ಸಿನಲ್ಲಿ ೫೦ ಹೆಜ್ಜೆ ಮುಂದೆ ಇರ್ತಾ ಇದ್ರು ಅಂತ. ಆದ್ರೆ ನೋಡುವವರಿಗೆ ಅವರು ೨ ಹೆಜ್ಜೆ ಮಾತ್ರ ಮುಂದಿದಾರೆ ಅಂತ ಅನ್ನಿಸ್ತಾ ಇತ್ತು. ಸಂಘದ ವಿಶೇಷತೆ ಅಂದ್ರೆ ಇದೇ.

ಸಾಮಾನ್ಯವಾಗಿ ವ್ಯಕ್ತಿಗತ ಪವಾಡಗಳಿಗೆ ಮನುಷ್ಯ ಬೇಗ ಮಾರುಹೋಗ್ತಾನೆ. ಸತ್ತು ಹೋದ ಪಾರಿವಾಳಕ್ಕೆ ಯಾವನೋ ಒಬ್ಬ ಜೀವ ಬರಿಸಿದ ಅಂದ್ರೆ ನಾವು ಬಹಳ ಆಶ್ಚರ್ಯ ಪಡ್ತೇವೆ. ಯಾರಾದ್ರೂ ಕೃತಕ ಹೂವಿಗೆ ವಾಸನೆ ಬರಿಸಿದ್ರು ಅಂದ್ರೆ ಕಣ್ ಕಣ್ ಬಿಡ್ತೇವೆ. ಆದರೆ ಸಂಘ ಮಾಡಿರುವ ಪವಾಡ ಇದೆಯಲ್ಲ, ಇಷ್ಟು ಜನರನ್ನ 'ದೇಶಭಕ್ತ'ರನ್ನಾಗಿ ಮಾಡಿರುವುದಿದೆಯಲ್ಲ, ಇಷ್ಟು ಜನರನ್ನ 'ಈ ದೇಶಕ್ಕೆ ನಿಷ್ಠೆಯಿಂದಿರುವಂತೆ' ಮಾಡಿರುವುದಿದೆಯಲ್ಲ ಇಂಥ ಪವಾಡವನ್ನ ಜಗತ್ತಿನಲ್ಲಿ ಯಾರೂ ಮಾಡಲು ಸಾಧ್ಯ ಇಲ್ಲ.

ಹಾಗಾಗಿ ಸ್ವಯಂಸೇವಕರು ಹೊರಗಡೆ ಪ್ರಪಂಚದ ಪವಾಡಗಳಿಗೆ ಮರುಳಾಗದೆ ನಾವು ಸಂಘದ ಪವಾಡವನ್ನೇ ತೆರೆದ ದೃಷ್ಟಿಯಿಂದ ನೋಡುವುದರಿಂದ ಸಂಘ ಕಾರ್ಯದಲ್ಲಿ ಉಳಿಯಲು ಸಾಧ್ಯವಾಗುತ್ತೆ. ಸಂಘದ ವಿಶೇಷತೆಗಳನ್ನ ಆಗಾಗ್ಗೆ ಮೆಲುಕು ಹಾಕುತ್ತಾ, ಸಂಘದ ಹಿರಿಯರು ಹೇಳಿದ ವಿಚಾರಗಳನ್ನ ಆಗಾಗ್ಗೆ ಚಿಂತಿಸುತ್ತಾ, ಸಂಘದ ಜೊತೆ ನಿರಂತರ ಸಂಪರ್ಕ ಇಟ್ಟುಕೊಳ್ಳುವ ಮೂಲಕ, ನಾವು ಜೀವನಪೂರ 'ಸ್ವಯಂಸೇವಕ'ರು ಎಂಬ ಮಾನಸಿಕತೆಯನ್ನ ಬೆಳೆಸಿಕೊಳ್ಳೋಣ.


( ಮುಗಿಯಿತು)