Dec 27, 2010

ರಾಜೀವರ ಪ್ರವಾಸಗಳು ಯಾವ ರಾಷ್ಟ್ರಕೆಲಸಕ್ಕೆ ಕಡಿಮೆ?


ಯಾವುದೇ ಒಂದು ಶ್ರೇಷ್ಠ ಸಿದ್ದಾಂತ ಅಥವಾ ಜೀವನಪದ್ದತಿಯ ಬಗ್ಗೆ ಮಾತಾಡುವುದು ಬಹಳ ಸುಲಭ. ಆದರೆ ಪ್ರಸ್ತುತ ಆಚರಣೆಯಲ್ಲಿ ತರುವುದು ಸಾಮಾನ್ಯರಿಗೆ ತುಸು ಕಷ್ಟ. ಆದರೆ ನುಡಿ ಮತ್ತು ನಡೆ ಎರಡರಲ್ಲೂ ಒಂದೇ ಸಮನಾಗಿ ಇರುವುದು ಧ್ಯೇಯ ನಿಮಿತ್ತರಿಗೆ ಮಾತ್ರ ಸಾಧ್ಯ ಎಂದು ಹಿರಿಯರೊಬ್ಬರು ಹೇಳಿದ ನೆನಪು.


ಬಹುಶಃ 10 ವರ್ಷಗಳ ಹಿಂದೆ, ನಮ್ಮ ಊರಿಗೂ ಬಂದಿದ್ದರು. ಬರುವ ಸ್ವಲ್ಪ ಸಮಯಕ್ಕೆ ಮುಂಚೆಯೇ ತಿಳಿದದ್ದು ಅವರು ಬರುತ್ತಾರೆಂದು. ಅದುವರೆಗೆ ಬರೇ ಕ್ಯಾಸೆಟ್ ಗಳಲ್ಲಿ, ಸಿಡಿಗಳಲ್ಲಿ ಕೇಳಿದ್ದೆವು ಅವರ ಮಾತುಗಳನ್ನು. ಹಿಂದಿ ಅರ್ಥವಾಗದಿದ್ದರೂ ಅವರ ಮಾತುಗಳ ಹಿಂದಿದ್ದ ಭಾವನೆಗಳು, ಉದ್ದೇಶಗಳಿಂದಲೇ ಸಾಕಷ್ಟು ಅರ್ಥವಾಗುತ್ತಿತ್ತು. ಅದುವರೆಗೆ ನೇರವಾಗಿ ಯಾರ ಹಿಂದಿ ಭಾಷಣವನ್ನು ಕೇಳಿದ್ದಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ 'ಸಂಸ್ಕಾರ'ದ ಕಾರಣದಿಂದ ಮೊದಲೇ ಇದ್ದ 'ಸ್ವದೇಶೀ' ಎಂಬ ಕಲ್ಪನೆಗೆ ಆಚರಣೆಯ ಆಯಾಮವನ್ನು ಕೊಟ್ಟದ್ದು 'ರಾಷ್ಟ್ರಬಂಧು ರಾಜೀವ್ ದೀಕ್ಷಿತ'ರ ನಡವಳಿಕೆ ಹಾಗು ಭಾಷಣಗಳು. ಹೌದು ನಮ್ಮೆಲ್ಲರಿಗೂ ಅವರು ಪರಿಚಯವಿದ್ದದ್ದು 'ರಾಷ್ಟ್ರಬಂಧು' ಎಂತಲೇ. ಅವರ ಭಾಷಣಗಳಿಗಿಂತ ಹೆಚ್ಚಾಗಿ ಅವರ ಜೀವನ ಪದ್ದತಿಯಿಂದಲೇ ಅವರನ್ನು 'ರಾಷ್ಟ್ರಬಂಧು' ಎಂದು ಗುರುತಿಸುತ್ತಿದ್ದೆವು.


ಮೊದಲೇ ಇದ್ದ 'ಸ್ವದೇಶೀ' ನಡವಳಿಕೆಗೆ ಮತ್ತಷ್ಟು ಶ್ರದ್ಧೆ ಹಾಗು ರಾಷ್ಟ್ರಭಕ್ತಿಯನ್ನು ಪೂರೈಕೆ ಮಾಡಿದ ಕೀರ್ತಿ ರಾಜೀವ್ ದೀಕ್ಷಿತರಿಗೆ ಸಲ್ಲಬೇಕು. ಮೊನ್ನೆ ನವಂಬರ್ ೩೦ ರಂದು, ಹುಟ್ಟಿದ ದಿನದಂದೇ ನಮ್ಮನ್ನಗಲಿದ ರಾಜೀವ್ ದೀಕ್ಷಿತರ ಮಾತುಗಳು ನಾಡಿನ ಜನತೆಯಲ್ಲಿ ಉಂಟುಮಾಡಿದ ಪರಿಣಾಮ ಅಕ್ಷರಶಃ ಆಚರಣೆಯಲ್ಲಿದೆಯೇ ಹೊರತು ಯಾವುದೇ ಪ್ರಶಸ್ತಿ ಅಥವಾ ಆಡಂಬರದಲ್ಲಿಲ್ಲ. ಅದೇ ಕಾರಣದಿಂದಲೇ ಅವರ ಅಗಲಿಕೆ ಈ ಭವ್ಯ ಭಾರತದ ಯಾವುದೇ ಪೂರ್ವಾಗ್ರಹ ಪೀಡಿತ ಪತ್ರಿಕೆಗಳಲ್ಲಿ ಸುದ್ದಿಯಾಗದೇ ಬರೇ 'ಮಾಹಿತಿ'ಯಾಯಿತು.


ಮನೆಯಲ್ಲಿದ್ದುಕೊಂಡೇ ರಾಷ್ಟ್ರದ ಕೆಲಸ ಮಾಡುವ ಹಂಬಲವಿರುವವರಿಗೆ 'ಸ್ವದೇಶೀ ಬಳಕೆ' ಎಂಬುದು ಹೆಮ್ಮೆಯ ಜೀವನ ಪದ್ದತಿಯಾಯಿತು. 'ಕಲ್ಪನೆ'ಗೆ 'ಆಂದೋಲನ'ದ ರೂಪ ಕೊಟ್ಟು ಇಡೀ ದೇಶದಲ್ಲಿ ಸಂಚಾರ ಮಾಡಿ ತನ್ನ ಮಾತು ಮತ್ತು ತನ್ನ ನಡತೆಗಳ ಮೂಲಕ ಜನರ ಚಿಂತನೆಗಳನ್ನು ನಿರ್ಧಿಷ್ಟ ದಿಕ್ಕಿನತ್ತ ಕೊಂಡೊಯ್ಯುವುದು ಸಾಮಾನ್ಯ ಸಾಧನೆಯಲ್ಲ. ಲೇಖನಗಳ ಮೂಲಕ ಪ್ರಸಿದ್ಧಿಯನ್ನು ಪಡೆಯುವ 'ಗೀಚಣಿಕರಿ'ಗಿಂತ ರಾಜೀವ ದೀಕ್ಷಿತ್ ರಂತಹವರು ಸಾವಿರ ಪಾಲು ಮೇಲು.


ಸ್ವದೇಶೀ ವಸ್ತುಗಳ ಜೊತೆಗೆ ನಮ್ಮ ದೇಶದ ಉತ್ಪನ್ನಗಳಾದ ಖಾದಿ ಬಟ್ಟೆಗಳನ್ನು ಅತ್ಯಂತ ಹೆಮ್ಮೆಯಿಂದ ಬಳಸುವವರ ನಮ್ಮಂತಹ ಅಸಂಖ್ಯ ಯುವಕರನ್ನು ನಿರ್ಮಾಣ ಮಾಡಿದ ರಾಜೀವರ ಪ್ರವಾಸಗಳು ಯಾವ ರಾಷ್ಟ್ರಕೆಲಸಕ್ಕೆ ಕಡಿಮೆ? ಬಹುಶಃ ಗಾಂಧೀಜಿಯವರ ನಂತರ ಖಾದಿ ಬಟ್ಟೆಗೆ 'ಬಳಕೆಯ ಬೆಲೆ' ತಂದುಕೊಡುವಲ್ಲಿ ರಾಜೀವರು ಅಗ್ರಗಣ್ಯರು ಎಂದರೆ ಅತಿಶಯೋಕ್ತಿಯಲ್ಲ.


ಅತ್ಯಂತ ಕಡಿಮೆ ವಯಸ್ಸಿಗೆ ಅಸಂಖ್ಯರ ಮನಸ್ಸಿನಲ್ಲಿ 'ದೇಶೀಯತೆ'ಯ ಛಾಪನ್ನು ಮೂಡಿಸಿ ಇಹಲೋಕ ತ್ಯಜಿಸಿದ 'ರಾಷ್ಟ್ರಬಂಧು ರಾಜೀವ್ ದೀಕ್ಷಿತ'ರಿಗೆ ಅತ್ಯಂತ ಭಾವಪೂರ್ಣ ಶ್ರದ್ಧಾಂಜಲಿ.


-----------------------------------------------------------------------------------------

Dec 21, 2010

'ಓಜಸ್ ನಿಸರ್ಗ' ಎಂಬ ಅಪರೂಪದ ದೇಶೀಯ ಮಳಿಗೆ


ಯಾರಿಗಾದರೂ ಯಾವುದಾದರು ಅಂಗಡಿ ಅಥವಾ ವ್ಯಾಪಾರವನ್ನು ಪ್ರಾರಂಭಿಸಬೇಕು ಎಂದೆನಿಸಿದರೆ ಎಲ್ಲ ರೀತಿಯಲ್ಲೂ ಯೋಚನೆ ಮಾಡಿ ಲಾಭ ಯಾವುದರಲ್ಲಿ ಹೆಚ್ಚು ಅಂತ ಲೆಕ್ಕ ಮಾಡಿಯೇ ಬಹಳಷ್ಟು ಜನರು ಮುಂದುವರೆಯುತ್ತಾರೆ. ಆದ್ದರಿಂದಲೇ ಎಲ್ಲಿ ನೋಡಿದರೂ ಹೋಟೆಲ್ಗಳು, ಆಭರಣ ಮಳಿಗೆಗಳು, ಬೃಹತ್ ವ್ಯಾಪಾರ ಮಳಿಗೆಗಳು (ಶಾಪಿಂಗ್ ಕಾಂಪ್ಲೆಕ್ಸ್) ತಲೆ ಎತ್ತಿ ನಿಂತಿದೆ. ಅಷ್ಟೇ ಅಲ್ಲದೆ ಜನರ ತಲೆ ಕೆಲಸ ಮಾಡದಿರುವಂತೆಯೂ ಮಾಡಿದೆ! ಆದರೆ ಇಲ್ಲೊಂದು ವಿಶೇಷ ತಂಡವಿದೆ. ತಾವು ಸಮಾಜದ ಒಳಿತನ ಬಗೆಗೆ ಬರೀ ಮಾತಾಡುವವರಿಗಿಂತ ಭಿನ್ನವಾಗಿ ಚಿಂತಿಸಿ ಅದನ್ನು ಕಾರ್ಯರೂಪಕ್ಕೂ ತಂದಿದ್ದಾರೆ. ಸಮಾಜದ ಬಗೆಗಿರುವ ಕಾಳಜಿಯನ್ನು ಅಭಿವ್ಯಕ್ತಗೊಳಿಸಿದ್ದಾರೆ. ಈ ಎಲ್ಲ ಸದುದ್ದೇಶ ಗಳ ಫಲವೇ 'ಓಜಸ್ ನಿಸರ್ಗ' ಎಂಬ ಸಾವಯವ ಹಾಗು ನೈಸರ್ಗಿಕ ಉತ್ಪನ್ನಗಳ ಪುಟ್ಟ ಮಳಿಗೆ.



ಇದರ ವಿಶೇಷ ಎಂದರೆ ಯಾವುದೇ ಕೃತಕ ರಾಸಾಯನಿಕಗಳನ್ನು ಹಾಗು ಕ್ರಿಮಿನಾಶಕಗಳನ್ನು ಬಳಸದೆ ಬೆಳೆದಂತಹ ತರಕಾರಿಗಳು, ಧವಸ ಧಾನ್ಯಗಳು, ದೇಶೀಯ ವಸ್ತುಗಳು, ಸ್ಥಾನೀಯವಾಗಿ ತಯಾರಿಸಲ್ಪಟ್ಟ ವಸ್ತುಗಳಿಗೆ ಪುಟ್ಟ ಮಾರುಕಟ್ಟೆಯ ರೂಪವನ್ನು ಕೊಟ್ಟಿದ್ದಾರೆ. ಕೊಳ್ಳುವ ವಸ್ತುಗಳಿಗೆ ದೇಶೀಯತೆಯ ಹಾಗು ರಾಷ್ಟ್ರೀಯತೆಯ ಗಂಧವನ್ನು ಲೇಪಿಸಿದ್ದಾರೆ. ಮನೆಯಲ್ಲಿದ್ದುಕೊಂಡೇ ರಾಷ್ಟ್ರದ ಕೆಲಸ ಮಾಡಬೇಕೆನ್ನುವ ಹಂಬಲಿಗರಿಗೆ ಅವಕಾಶವನ್ನು ನೀಡಿದ್ದಾರೆ.



ಎಲ್ಲರಿಗಿಂತ ಭಿನ್ನವಾಗಿ ಆದರೆ ಆ ಭಿನ್ನತೆಯಲ್ಲೂ ಶ್ರೇಷ್ಠತೆಯನ್ನು ಹಾಗು ರಾಷ್ಟ್ರೀಯತೆಯನ್ನು ಅಳವಡಿಸಿಕೊಂಡಿರುವ 'ಓಜಸ್ ನಿಸರ್ಗ' ತಂಡಕ್ಕೆ ನಾವೆಲ್ಲರೂ ಅಭಿನಂದನೆಯನ್ನು ಸಲ್ಲಿಸಲೇಬೇಕು. ಅದಷ್ಟೇ ಅಲ್ಲ. ನಾವು ಸಹ 'ಓಜಸ್ ನಿಸರ್ಗ'ಕ್ಕೆ ಭೇಟಿ ನೀಡಿ ನಮ್ಮ ದೇಶೀಯ ವಸ್ತುಗಳನ್ನು ಕೊಂಡುಕೊಳ್ಳುವ ಮೂಲಕ ನಮ್ಮ ಹಸ್ತವನ್ನೂ 'ಓಜಸ್ ನಿಸರ್ಗ' ತಂಡದೊಂದಿಗೆ ಜೋಡಿಸಬೇಕು. ಅದರಲ್ಲೂ ಮುಖ್ಯವಾಗಿ ದಿನೋಪಯೋಗಿ ವಸ್ತುಗಳನ್ನು 'ಓಜಸ್ ನಿಸರ್ಗ'ದಲ್ಲೇ ಕೊಂಡುಕೊಳ್ಳುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಈ ಮೂಲಕ ಈ ಭೂಮಿ ಹಾಗು ಪ್ರಕೃತಿಯೊಡಗಿನ ನಮ್ಮ ಸಂಭಂಧವನ್ನ ಉತ್ತಮಗೊಳಿಸುವ ಹಾಗು ನಮ್ಮ ಕಾಳಜಿಯನ್ನ ಪ್ರತ್ಯಕ್ಷ ಆಚರಣೆಗೆ ತರುವ ಪ್ರಯತ್ನ ನಮ್ಮೆಲ್ಲರಿಂದ ಆಗಬೇಕು ಎಂಬುದೇ ಅಪೇಕ್ಷೆ. ಸಮಾಜದ ಬಗ್ಗೆ ಹಾಗು ದೇಶದ ಬಗ್ಗೆ ಬರೇ ಮಾತಾಡುವವರ ನಡುವೆ ಭಿನ್ನತೆಯನ್ನು ಮೆರೆಯೋಣ. ಮಾಹಿತಿಗಾಗಿ ಲಗತ್ತಿಸಿರುವ ಪತ್ರಕವನ್ನು ನೋಡಿ.



ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ http://www.ojasnisarga.com/




----------------------------------------------------------------------------

Oct 29, 2010

ದೇಶದ್ರೋಹಿಗಳಿಗೂ ಆಶ್ರಯ ತಾಣ ಭಾರತ...?


ದೇಶದ್ರೋಹಿ ಕೆಲಸಗಳನ್ನು ಮಾಡಿದರೂ ಸೌಖ್ಯವಾಗಿ ಇರಲು ಸಾಧ್ಯವಿರುವ ದೇಶ ಎಂದರೆ ಭಾರತ ಒಂದೇ ಎಂದು ಯಾರಿಗಾದರೂ ಅನ್ನಿಸದಿದ್ದರೆ ಆಶ್ಚರ್ಯ ಪಡಬೇಕು...!

ಭಾರತದ ಮೇಲೆ ಆಕ್ರಮಣ ಮಾಡಿದವರೂ ಭಾರತದಲ್ಲಿ ಆರಾಮಾಗಿ ರಬಹುದು, ಭಾರತ ವನ್ನು ಕೊಳ್ಳೆ ಹೊಡೆದವರೂ ಭಾರತದಲ್ಲಿ ಆರಾಮಾಗಿ ರಬಹುದು, ಭಾರತ ದ ವಿರುದ್ಧ ಹೇಳಿಕೆ ನೀಡಿದರೂ ಅವರಿಗೆ ಭವ್ಯ ಸ್ವಾಗತ ಸಿಗುತ್ತೆ ನಮ್ಮ ಈ ಭಾರತದಲ್ಲಿ...! ಕಸಬ್, ಅಫ್ಜಲ್ ಗುರು ಅಂತಹವರು ಹುಲುಸಾಗಿರುವಾಗ ನಾನು ಯಾರಿಗೆ ಕಮ್ಮಿ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಲೇಖಕಿ ಅರುಂಧತಿ ರಾಯ್ ತಮ್ಮ ಹೆಜ್ಜೆ ಇಟ್ಟಿದ್ದಾರೆ, ಅಷ್ಟೇ ಅಲ್ಲ, ಮುಂದೆ ಇನ್ನು ದೊಡ್ಡ ದೊಡ್ಡ ಹೆಜ್ಜೆಯನ್ನು ಇಡಲಿದ್ದಾರೆ ಎಂದು ಸಾಬೀತು ಮಾಡಿದ್ದಾರೆ. ಇಂತಹ ಹೆಣ್ಣು(?) ಮಕ್ಕಳನ್ನು ಪಡೆದ ಭಾರತ ಮಾತೆ ನೀನೆ ಧನ್ಯ...!!!!!


ಪ್ರಸಿದ್ಧಿಯನ್ನು ಪಡೆಯುವ ಸಲುವಾಗಿ ಒಂದು ಸೂತ್ರವಿದೆ. ನಿಮಗೆ ಅಂತಾರಾಷ್ಟ್ರೀಯ ಖ್ಯಾತಿ ಏನಾದರು ಬೇಕಾದಲ್ಲಿ ಭಾರತದ ವಿರುದ್ಧ ಮಾತೆತ್ತಿ ಅಥವಾ ಪುಸ್ತಕ ಬರೆಯಿರಿ ಅಥವಾ ನಮ್ಮ ಈ ಆಧುನಿಕ ಭಾರತದ ಒಳಗೆ ನಿಮಗೇನಾದರೂ ಪ್ರಸಿದ್ಧಿ ಬೇಕಾದಲ್ಲಿ ಹಿಂದೂಗಳ ವಿರುದ್ಧ ದನಿಯೆತ್ತಿ ಎಂದು. ತಕ್ಷಣದಲ್ಲಿ ಪ್ರಸಿದ್ಧಿ ಪಡೆದ ಬಹುತೇಕ ಎಲ್ಲ ಪಿಪಾಸುಗಳೂ ಇದೆ ಗುಂಪಿಗೆ ಸೇರಿದವರಾಗಿದ್ದಾರೆ, ಪರೀಕ್ಷಿಸಿ ನೋಡಿ.


ಸಂವಿಧಾನದ ೩೭೦ ನೆ ವಿಧಿಯ ಕಾರಣದಿಂದಾಗಿ ಇಡೀ ಕಾಶ್ಮೀರ ಬಹುತೇಕ ಪರಕೀಯವಾಗಿಯೇ ಉಳಿದಿರುವಂತಹ ಪರಿಸ್ಥಿತಿಯಲ್ಲಿ ಭಾರತೀಯ ನಾರಿ ಅರುಂಧತಿ ರಾಯ್ ತಮ್ಮ ನಾಲಗೆಯನ್ನು ಹರಿಬಿಟ್ಟಿದ್ದರೂ, ದೇಶದ್ರೋಹದಾಪಾದನೆಯಡಿ ಬಂಧಿಸುವ ಅವಕಾಶವಿದ್ದರೂ, 'ಇಂತಹವರು ಮುಂದೊಂದು ದಿನ ನಮಗೂ ಸಹಾಯಕ್ಕೆ ಬರಬಹುದು' ಎಂಬ ದೂರಾಲೋಚನೆ (!)ಯಡಿ ಕೇಂದ್ರ ಸರಕಾರ ಸಮಸ್ಯೆಯನ್ನು ಹೆಚ್ಚಾಗಿಸುವುದು ಬೇಡ ಎಂಬ ಜಾಣ್ಮೆಯಲ್ಲಿ ಪರಿಸ್ಥಿಯನ್ನು ನಿಭಾಯಿಸುತ್ತಿದೆ!


ಎಲ್ಲ ಪಕ್ಷಗಳೂ, ಎಲ್ಲ ರಾಜಕಾರಣಿಗಳೂ ರಾಷ್ಟ್ರಹಿತದ ವಿಷಯದಲ್ಲಿ ಎಂದಿಗೆ ಒಂದಾಗುವರೋ, ಅಂದಿನಿಂದ ಹೆಚ್ಚುಗೊಳ್ಳುವ ಭಾರತದ ಅಭ್ಯುದಯದ ವೇಗವನ್ನು ನಿಯಂತ್ರಿಸಲೂ ಯಾವ ಅಂತಾರಾಷ್ಟ್ರೀಯ ತಂತ್ರಗಳಿಂದಲೂ ಸಾಧ್ಯವಿಲ್ಲ.

Sep 27, 2010

ಸಾಮರಸ್ಯದ ನವ್ಯ ಯುಗಕೆ ನಿಮಗಿದೋ ಆಮಂತ್ರಣ


ಇದು ಕೆಲವರಿಗೆ ಆಶ್ಚರ್ಯ, ಕೆಲವರಿಗೆ ಪ್ರೇರಣೆ, ಕೆಲವರಿಗೆ ಅಸೂಯೆ, ಕೆಲವರಿಗೆ ಸಂತೋಷ, ಕೆಲವರಿಗೆ ಅನುಕರಣೀಯ, ಕೆಲವರಿಗೆ ಆಜ್ಞೆಯೂ ಸಹ. ಅಸ್ಪೃಶ್ಯತೆ ಯಂತಹ ಅಸ್ಪೃಶ್ಯತೆಯನ್ನು ಪೇಜಾವರ ಶ್ರೀಗಳಂತಹ ಪೇಜಾವರ ಶ್ರೀಗಳು ಮೆಟ್ಟಿ ನಿಲ್ಲಲು ಈ ಪರಿ ಕಂಕಣಬಧ್ಧರಾಗಿ ತಮ್ಮ ಕರ್ತವ್ಯವನ್ನು ಮಾಡುತ್ತಿರುವ ಶ್ರೀಗಳಿಗೆ ವಂದಿಸುವುದು ನಮ್ಮೆಲ್ಲರ ಕರ್ತವ್ಯ. ಉಪೇಕ್ಷಿತ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಸಲುವಾಗಿ, ಅವರಲ್ಲಿ ಕೆಲವರಿಗಿರುವ ಕೀಳರಿಮೆಯನ್ನು ಕಿತ್ತೆಸೆಯಲು 'ವೈಷ್ಣವ ದೀಕ್ಷೆ' ಕೊಡಲು ಸಿದ್ದ ಎಂದು, 'ದಲಿತರು', 'ಮಾದಿಗರು' ಎಂಬುದಾಗಿ ಮೇಲ್ವರ್ಗದವರು ಕರೆಯುವುದಕ್ಕಿಂತ ಹೆಚ್ಚಾಗಿ ಅವರೇ ಕರೆಸಿಕೊಳ್ಳಲು ಹೆಮ್ಮೆ ಪಡುವವರ ಕೇರಿಗಳಲ್ಲಿರುವವರ ಮನೆಗಳಿಗೆ ಭೇಟಿ ನೀಡಿ ಅವರವರ ಕುಲದೈವರ ಪೂಜೆ ಗೈ ಯುವ ಮುಖಾಂತರ ಅತ್ಯಂತ ಪ್ರೇರಣಾದಾಯಿಯಾದ ಕೆಲಸಕ್ಕೆ ನಾಂದಿ ಹಾಡಿದ್ದಾರೆ ಪೇಜಾವರ ಶ್ರೀಗಳು. ಆ ಮೂಲಕ ಉಳಿದೆಲ್ಲ ಮಠಾಧೀಶರಿಗೆ ಹಾಗೂ ಸಾಮರಸ್ಯ ತುಂಬಿದ ಹಿಂದೂ ಸಮಾಜದ ಭವ್ಯ ಕನಸನ್ನು ಕಾಣುತ್ತಿರುವವರಿಗೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ.

ತಮ್ಮ ಸ್ವಾರ್ಥ ರಾಜಕೀಯ ಕಾರಣಗಳಿಗೋಸ್ಕರ ಈ ಕೆಲಸದಲ್ಲೂ ಕೊಂಕನ್ನು ಹುಡುಕುವ ಅಸಾಧಾರಣ ಪ್ರಜೆಗಳು ಅವರವರ ಯೋಗ್ಯತೆಗೆ ತಕ್ಕಂತೆ ನಡೆದುಕೊಳ್ಳುತ್ತಿರುವುದು ಭಾರತದಂತ ಹ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಆಶ್ಚರ್ಯವೇ ಅಲ್ಲ. ಆ ಮೂಲಕ ಉತ್ತಮ ಸಮಾಜದ ನಿರ್ಮಾಣದ ವಿಷಯದಲ್ಲಿ ತಮ್ಮ ಅಭಿಪ್ರಾಯವೇನು ಎಂಬುದನ್ನು ನಿರೂಪಿಸಿದ್ದಾರೆ.

ಅಸ್ಪೃಶ್ಯತೆಯ ವಿರುದ್ಧ ಈ ವರೆಗೆ ಮಾತಾಡಿ ಗೋಳಾಡಿರುವ ಎಷ್ಟು ಜನರು ಅಥವಾ ಎಷ್ಟು ಸಂಘಟನೆಗಳು ತಮ್ಮ ಕಾಳಜಿಯನ್ನು ಕೃತಿ ರೂಪಕ್ಕೆ ತಂದಿದ್ದಾರೆ ? ಸಂಘರ್ಷದ ಮೂಲಕ, ಸೌಹಾರ್ದದ ಮೂಲಕ ಸಂಘಟನೆಯ ಮೂಲಕ ಅಸ್ಪೃಶ್ಯತೆಯನ್ನು ಹೋಗಲಾಡಿಸುತ್ತೇವೆ ಎಂಬ ಕೂಗಿನೊಂದಿಗೆ ಹುಟ್ಟಿದವರು ಬರೀ ಅನ್ಯಾನ್ಯ ಜಾತಿ-ವರ್ಗಗಳ ಜನರ ಮಧ್ಯ ಇರುವ ಅಂತರವನ್ನು ಕಾಪಾಡಿಕೊಳ್ಳುತ್ತ, ತಮ್ಮಗಳ ಸ್ವಾರ್ಥ ರಾಜಕೀಯದ ಬೇಳೆಯನ್ನು ಬೇಯಿಸಿ ಕೊಳ್ಳುತ್ತಿರುವ ಸಮಾಜ ದ್ರೋಹಿಗಳ ಸಂಖ್ಯೆಯೇ ಹೆಚ್ಚು. ಅವರ ಸ್ವಾರ್ಥ ಕ್ಕೋಸ್ಕರ ನಮ್ಮ ಮನದಲ್ಲಿ ದ್ವೇಷ ಬಿತ್ತುವ ಕೆಲಸ ಗಳು ಅವ್ಯಾಹತವಾಗಿ ನಡೆಯುತ್ತಿರುವುದು ನಮಗೆ ಹಾಗು ನಮ್ಮ ಸಮಾಜಕ್ಕೆ ಅತ್ಯಂತ ಕಂಟಕವಾದುದು.

ಪೂಜ್ಯ ಪೇಜಾವರ ಶ್ರೀಗಳ 'ಉತ್ತಮ ಹಿಂದೂ ಸಮಾಜದ' ನಿರ್ಮಾಣದ ಕುರಿತಾದ ಕೆಲಸಗಳಿಗೆ ಮಾದಿಗ ಜನಾಂಗದ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮಿಗಳು ಕೈ ಜೋಡಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಮೈಸೂರಿನಲ್ಲಿ ನಡೆದ ಮಾದಾರ ಚನ್ನಯ್ಯ ಸ್ವಾಮಿಗಳ ಬ್ರಾಹ್ಮಣ ಸಮುದಾಯದವರ ಭೇಟಿ ಮತ್ತಿತರ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ನಡೆಯಲಿರುವ ಒಳ್ಳೆಯ ಕೆಲಸಗಳ ಮುನ್ಸೂಚನೆ ನೀಡುತ್ತದೆ.

ಆಧುನಿಕ ವಿದ್ಯಾಭ್ಯಾಸದ ಕಾರಣದಿಂದ ಹಾಗು ಇನ್ನಿತರ ಕಾರಣಗಳಿಂದ ಅಸ್ಪೃಶ್ಯತೆಯ ವಿಷಯದಲ್ಲಿ ದಶಕಗಳ ಹಿಂದಿನ ಪರಿಸ್ಥಿತಿ ಪ್ರಸ್ತುತ ಇಲ್ಲದಿರುವಾಗ ಇಂದಿನ ಪರಿಸ್ಥಿತಿಯೂ ಸಹ ಉತ್ತಮಗೊಳ್ಳಲು ಸಮಯದ ಅವಶ್ಯಕತೆ ಇದೆ. ಈ ಕಾರಣದಿಂದ ಎಲ್ಲ ವರ್ಗಗಳ ಜನರು ಸಂಘರ್ಷಗಳಿಗೆ ಎಡೆ ಮಾಡಿಕೊಡದೆ ಸ್ವಾರ್ಥ ಸಾಧಕರ ಕೈಗೊಂಬೆಯಾಗದೆ ಸಾವಧಾನದಿಂದ ಕಾಯಬೇಕಾಗಿದೆ. ಅಸ್ಪೃಶ್ಯತೆಯಂತಹ ಸೂಕ್ಷ್ಮ ಸಮಸ್ಯೆಗಳು ಮನೋ ವಿಕಾಸದ ಮೂಲಕ ಮನಃ ಪರಿವರ್ತನೆಯ ಮೂಲಕ ಬಗೆಹರಿಯುವಂತಹವೇ ಹೊರತು ಸಂಘರ್ಷ ಅಥವಾ ಕ್ರಾಂತಿಯ ಮೂಲಕವಲ್ಲ. ಎಲ್ಲ ಉತ್ತಮ ಕೆಲಸಗಳೂ ಸಾಕಾರಗೊಳ್ಳಲು ಸಮಯದ ಅವಶ್ಯಕತೆ ಇದ್ದೇ ಇರುತ್ತದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿದ್ದ ಪರಮ ಪೂಜನೀಯ ಗುರೂಜಿಯವರ ಜನ್ಮ ಶತಾಬ್ದಿ ಯ ನಂತರದಲ್ಲಿ ವೇಗಗೊಂಡಿರುವ ಅಸ್ಪೃಶ್ಯತೆಯ ವಿರುಧ್ಧದ ಕಾರ್ಯಾಚರಣೆಗಳು ಸಮರಸ ಹಿಂದೂ ಸಮಾಜದ ನಿರ್ಮಾಣದ ಸಂಕಲ್ಪದೊಂದಿಗೆ ಯಾವ ಪ್ರಚಾರವೂ ಇಲ್ಲದೆ ನಿರಂತರವಾಗಿ ನಡೆಯುತ್ತಿರುತ್ತಲೇ ಇರುತ್ತದೆ. ಈ ಎಲ್ಲ ಕೆಲಸಗಳಲ್ಲಿ ಉತ್ತಮ ಹಿಂದೂ ಸಮಾಜದ ಅಪೇಕ್ಷೆ ಇರುವ ನಾವುಗಳು ಮನಃ ಪೂರ್ವಕವಾಗಿ ಭಾಗಿಯಾಗಿ ಭವ್ಯ ಸಮರಸ ಹಿಂದೂ ಸಮಾಜದ ನಿರ್ಮಾಣದ ಕಾರ್ಯದಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಇದೆ. 'ಸ್ವಾರ್ಥ ಜಾತಿ ಪಿಪಾಸು'ಗಳ ಕುರಿತು ಸದಾ ಜಾಗೃತರಾಗಿರುವ ಅನಿವಾರ್ಯತೆಯೂ ಅಷ್ಟೇ ಇದೆ.

Aug 4, 2010

ಬದಲಾವಣೆಗಳೆಲ್ಲವೂ ಅಭಿವೃದ್ಧಿಯ ಸಂಕೇತವೇ?


ಒಬ್ಬರು ಹಿರಿಯರು ಹೇಳಿದ ಮಾತು ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿ ಕೂತುಬಿಟ್ಟಿದೆ. ದಿನದ ಬಹಳಷ್ಟು ಸಮಯ ನನ್ನನ್ನು ಕಾಡುತ್ತದೆ. ಅವರು ಹೇಳಿದ್ದು, 'ಇತಿಹಾಸದಲ್ಲಿ ನಡೆದಿರುವ ಎಷ್ಟೋ ಘಟನೆಗಳನ್ನು, ಅನ್ಯಾಯಗಳನ್ನು, ಅವಘಡಗಳನ್ನು ನಾವು ಖಂಡಿಸುತ್ತೇವೆ. ಅದಕ್ಕೆ ಕಾರಣಕರ್ತರಾದವರನ್ನೂ ದೂಷಿಸುತ್ತೇವೆ. ಆದರೆ ನಮ್ಮ ಕಣ್ಣ ಮುಂದೆಯೇ ಆ ಘಟನೆಗಳು ಮತ್ತೊಮ್ಮೆ ನಡೆದರೂ ಕೈ ಕಟ್ಟಿ ಕೂತುಬಿಡುವಷ್ಟು ಹೇಡಿಗಳಾಗಿಬಿಟ್ಟಿರುತ್ತೇವೆ' ಎಂದು.

ಶಿವಮೊಗ್ಗದ ಕುವೆಂಪು ರಂಗಮಂದಿರದ ಮುಂದೆ ಇದ್ದಂತಹ ಹತ್ತಾರು ಬೃಹತ್ ಮರಗಳನ್ನು ಜಿಲ್ಲಾಡಳಿತ ಕಡಿದಾಗ ಕಾಲೇಜಿನಲ್ಲಿ ಕೂತು ಖಂಡಿಸಿದ್ದೇ ಖಂಡಿಸಿದ್ದು , ಮನೆಯಲ್ಲಿ ಕೂತು ಅಂದದ್ದೇ ಅಂದದ್ದು. ಆದರೆ ನಮ್ಮೂರಿನಲ್ಲೇ ನಮಗೇ ತಿಳಿದವರೋ ಅಥವಾ ನಮ್ಮ ರಕ್ತ ಸಂಬಂಧಿಗಳೋ ನಮ್ಮ ಕಣ್ಣ ಮುಂದೆಯೇ ಹತ್ತಾರು ವರ್ಷಗಳ ಬೃಹತ್ ಮರವನ್ನು ಕಡಿದಾಗ ಪ್ರತಿಭಟನೆ ಒತ್ತಟ್ಟಿಗಿರಲಿ, ಆ ಕುರಿತು ಕನಿಷ್ಟ ನಮ್ಮ ಕಾಳಜಿಯನ್ನು ವ್ಯಕ್ತಪಡಿಸಲೂ ಆಗಲಿಲ್ಲ. ದೇಶದ ಎಲ್ಲ ಮೋಸಗಾರರನ್ನು, ಕಳ್ಳರನ್ನು, ಭ್ರಷ್ಟರನ್ನು ಬಾಯಿಗೆ ಬಂದಂತೆ ಬೈಯುತ್ತೇವೆ, ಆ ಶಿಕ್ಷೆ ನೀಡಬೇಕು, ಈ ಶಿಕ್ಷೆ ನೀಡಬೇಕು ಎಂಬಂತೆಲ್ಲ ತೀರ್ಪು ಕೊಡುತ್ತೇವೆ. ಆದರೆ ನಮ್ಮ ಕಣ್ಣ ಮುಂದೆಯೇ ನಮ್ಮೂರಿನವರೋ ಅಥವಾ ನಮ್ಮ ಬಂಧುಗಳೋ ಅದೇ ಕೆಲಸ ಮಾಡಿದಾಗ ತೆಪ್ಪಗಿರುತ್ತೇವೆ!

ದೇಶದ ಸಂಸ್ಕೃತಿ ನಾಶದ ಬಗ್ಗೆ, ದೇಶದಲ್ಲಿನ ಪ್ರಕೃತಿ ದತ್ತವಾದ ಪರಿಸರ ನಾಶದ ಬಗ್ಗೆ ಭಾಷಣ ಮಾಡುತ್ತೇವೆ. ಇತರರಿಗೆ ಬುದ್ಧಿವಾದ ಹೇಳುತ್ತೇವೆ. ಆದರೆ ನಮ್ಮ ಕಣ್ಣೆದುರಿನಲ್ಲಿ ನಮ್ಮೂರಿನಲ್ಲೇ ಇವೆಲ್ಲ ನಡೆಯುತ್ತಿದ್ದರೂ ನಮ್ಮ ಕೆಲಸ ಅಲ್ಲ ಇದು ಎಂಬ ಉದಾಸೀನತೆಯಿಂದಲೋ ಅಥವಾ ನಮ್ಮ ಬಳಿ ಏನು ಮಾಡಲಾಗದು ಎಂಬ ಹತಾಶೆಯಿಂದಲೋ ಅಥವಾ ದೊಡ್ಡವರ ಸಹವಾಸ , ಸಮಾಜದ ಪ್ರಬಲ ಶಕ್ತಿಗಳ ಸಹವಾಸ ಬೇಡೆಂಬ ಭಯದಿಂದಲೋ ನೋಡಿದರೂ ನೋಡದಿದ್ದರ ಹಾಗೆ ಸುಮ್ಮನಿರುತ್ತೇವೆ. ಎಂತಹ ಜೀವನ ನಮ್ಮದು ಎಂದು ಸದಾಕಾಲ ಗೊಣಗುವುದೇ ನಮ್ಮ ದೇಶಸೇವೆಯಾಗಿಬಿಟ್ಟಿದೆ!

ಬೆಂಗಳೂರಿನಂತಹ ನಗರಗಲ್ಲಿ ಕಟ್ಟಡ ನಿರ್ಮಾಣ, ರಸ್ತೆ ಅಗಲೀಕರಣದಂತಹ ಕೆಲಸಗಳು ಸಾಕಷ್ಟು ಅನಿವಾರ್ಯತೆಯನ್ನು ಸೃಷ್ಟಿಸಿರುವುದು ಕಟು ವಾಸ್ತವ. ಆದರೆ ಪ್ರಕೃತಿಮಾತೆಯ ಸಾಕ್ಷಾತ್ಕಾರ ದಂತಿರುವ, ನೆಮ್ಮದಿ ಜೀವನದ ತವರಾದಂತಹ, ನಮ್ಮತನ ವನ್ನು ಹುಡುಕಿ ದಕ್ಕಿಸಿಕೊಳ್ಳಬಹುದಾದಂತಹ, ಹಳ್ಳಿಗಳನ್ನು, ಗ್ರಾಮಗಳನ್ನು ಇದೇ ರೀತಿಯ 'ಅಭಿವೃದ್ಧಿಯ'(?) ಕೆಲಸಗಳಿಗೆ ಅಡ ಇಟ್ಟರೆ ಇದಕ್ಕಿಂತ ಅವಿವೇಕದ ಕೆಲಸ ಮತ್ತೊಂದು ಉಂಟೇ?

ಇತ್ತೀಚೆಗೆ ರಾಜ್ಯದ ಕೆಲವು ಗ್ರಾಮಗಳ, ಹಳ್ಳಿಗಳ ಅಂದವನ್ನು 'ಅಭಿವೃದ್ಧಿ', 'ಸ್ವಚ ಗ್ರಾಮ-ಸುವರ್ಣ ಗ್ರಾಮ' ಎಂಬಂತಹ ಹೆಸರುಗಳಿಂದ ಕರೆಯುವ ಯೋಜನೆಗಳಡಿ ಹಾಳು ಮಾಡುತ್ತಿರುವುದು ನಿಜಕ್ಕೂ ಬೇಸರದ ವಿಚಾರವಾಗಿದೆ. ಟಾರ್ ರಸ್ತೆಗಳು, ಮಾಲ್ ಗಳು, ಬೃಹತ್ ಕಟ್ಟಡಗಳು ನಗರಕ್ಕೆ ಅನಿವಾರ್ಯವಾದರೂ ಅವುಗಳ ಅನಿವಾರ್ಯತೆ ಹಳ್ಳಿಗಳಿಗಾಗಲೀ ಅಥವಾ ಗ್ರಾಮಗಳಿಗಾಗಲೀ ಇಲ್ಲ. ಉತ್ತಮ ಟಾರ್ ರಸ್ತೆಗಳು ಖಂಡಿತ ನಗರಕ್ಕೆ ಬೇಕು. ಆದರೆ ಹಳ್ಳಿಗಳಲ್ಲಿನ ಉತ್ತಮ ಹಾಗು ಆರೋಗ್ಯದಾಯಕವಾದ ಮಣ್ಣಿನ ರಸ್ತೆಗಳನ್ನು ಕಸಿದು ಟಾರ್ ರಸ್ತೆಗಳನ್ನಾಗಲಿ, ಅಥವಾ ಬೆಂಗಳೂರಿನ ಪುಟ್ ಪಾತ್ ಗಳಲ್ಲಿರುವ ಸಿಮೆಂಟಿನ ಕಲ್ಲುಗಳ ರಸ್ತೆಗಳನ್ನಾಗಲೀ ಮಾಡುವ ಅವಶ್ಯಕತೆ ಏನಿದೆ? ಅಕಸ್ಮಾತ್ ಮಣ್ಣಿನ ರಸ್ತೆಗಳು ಸರಿಯಿಲ್ಲದಿದ್ದರೆ ಅದನ್ನೇ ಸಮತಟ್ಟಾಗಿ ಮಾಡಿ ಉತ್ತಮಗೊಳಿಸುವುದನ್ನು ಬಿಟ್ಟು ಮಣ್ಣಿನ ರಸ್ತೆಯನ್ನು ತೆಗೆದರೆ?

ದೈವದತ್ತವಾದ ಮಣ್ಣಿನ ರಸ್ತೆಗಳ ಮೇಲೆ ಸಿಮೆಂಟಿನ 'ಮಾನವ ನಿರ್ಮಿತ' ಕಲ್ಲುಗಳಿಂದ ರಸ್ತೆಗಳನ್ನು ಮಾಡಿ 'ಮಹದುಪಕಾರ' ಮಾಡಿದ್ದೇವೆ, 'ಅಭಿವೃದ್ಧಿ' ಮಾಡಿದ್ದೇವೆ ಎಂದು ತಪ್ಪು ತಿಳಿದುಕೊಂಡಿದೆ ಸರ್ಕಾರ!

ಹಳ್ಳಿಗಳಲ್ಲಿ, ಗ್ರಾಮಗಳಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡುವವರು ಕಡಿಮೆ. ನಗರಕ್ಕೆ ಅಥವಾ ಶಾಲೆಗೆ ಹೋಗುವಾಗ ಮಾತ್ರ ಚಪ್ಪಲಿ ಬಳಸುವುದು ಅಭ್ಯಾಸ. ಆದರೆ ಈಗ ಚಪ್ಪಲಿ ಅನಿವಾರ್ಯ. ಮಣ್ಣಿನ ರಸ್ತೆಗಳಿದ್ದಾಗ, ಆಟವಾಡುತ್ತಿದ್ದ ಮಕ್ಕಳು ಬಿದ್ದರೆ ಸಣ್ಣ ತರಚಿದ ಗಾಯವಾಗುತ್ತಿತ್ತು. ಆದರೆ ಈಗ ಆಸ್ಪತ್ರೆ ಪ್ರಯಾಣ ಖಚಿತ ! ಮಣ್ಣಿನ ನೆಲದಲ್ಲಿ ಬೆಳಗಿನ ಜಾವ ನಮ್ಮ ತಾಯಂದಿರು ಹಾಕುತ್ತಿದ್ದ ರಂಗೋಲಿಯನ್ನು ನೋಡಲು ಎರಡು ಕಣ್ಣು ಸಾಲದಿತ್ತು. ಅದೂ ಊರಿನ ಜಾತ್ರೆಗಳ ಸಂದರ್ಭಗಳಲ್ಲಿ, ರಥೋತ್ಸವಗಳ ಸಮಯದಲ್ಲಿ, ಎಲ್ಲರ ಮನೆಯ ಮುಂದೆ ಕಂಗೊಳಿಸುತ್ತಿದ್ದ ರಂಗೋಲಿಯನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಆದರೆ ಈಗ ನಮ್ಮ ತಾಯಂದಿರಿಗೆ ರಂಗೋಲಿಯಲ್ಲಿ ಮನಸ್ಸಿಲ್ಲದ ಮನಸ್ಸು!

ಮಣ್ಣಿನ ನೆಲವಿದ್ದಾಗ ಕೊಳೆಗಳಾಗಲೀ, ಪ್ರಾಣಿಗಳ ತ್ಯಾಜ್ಯಗಳಾಗಲೀ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿತ್ತು. ಆದರೆ ಈಗ ? ಆಗ ಕಸವೂ ಮಣ್ಣಾಗುತ್ತಿತ್ತು . ಆದರೆ ಈಗ ಮಣ್ಣೂ ಕಸವಾಗುತ್ತದೆ. ಈ ರೀತಿಯ 'ಅಭಿವೃದ್ಧಿ'ಗಳನ್ನು ನೋಡಿ ಒಬ್ಬರು ಹಿರಿಯರು ಹತಾಶೆಯಿಂದ ಹೇಳಿದ್ದು ನಗೆಯನ್ನು ತರಿಸುವಂತಿತ್ತು. 'ಇಷ್ಟು ದಿನ ಮಣ್ಣಿನ ರಸ್ತೆಯಲ್ಲಿ ಒಮ್ಮೊಮ್ಮೆ ಕಸಗಳು ಕಾಣಿಸುತ್ತಿತ್ತು. ಆದರೆ ಇನ್ಮೇಲೆ ಕಸಗಳು ಮಾತ್ರವೇ ಕಾಣಿಸುತ್ತೆ' ಅಂತ.

ಈ ವಿಷಯವನ್ನು ಸಮರ್ಥನೆ ಮಾಡಿಕೊಳ್ಳಲು 'ಮಳೆಗಾಲದಲ್ಲಿ ಕೊಚ್ಚೆಯಾಗುವುದಿಲ್ಲ' ಎಂಬ ಅವಿವೇಕದ ಕಾರಣವನ್ನು ಕೊಡುವ ಸಂಭವವಿದೆ. ವರ್ಷದ ಕೆಲವು ದಿನಗಳ ಕಾಲ ಬರುವ ಮಳೆ ಉಂಟುಮಾಡುವ 'ಪ್ರಾಣ ಹಾನಿ'ಯಲ್ಲದ ಕೆಸರಿನ ಕಾರಣ ಕೊಟ್ಟು ಪ್ರತಿದಿನ ಓಡಾಡುವ ರಸ್ತೆಯನ್ನೇ ಹಾಳು ಮಾಡಿದರೆ ಹೇಗೆ? ಮಳೆಯ ನೀರಿನಿಂದ ಈ ರಸ್ತೆಗಳ ಮೇಲೆ ಉಂಟಾಗುವ ಪಾಚಿಗಳು ನಡೆಯುವವರಿಗೂ, ವಾಹನ ಸವಾರರಿಗೂ ಎಂತಹ ಜಾರಿಕೆಯನ್ನುಂಟು ಮಾಡುತ್ತವೆ ಎಂದು ಬಿದ್ದವರಿಗೇ ಗೊತ್ತಿರುತ್ತದೆ. ಬೇಸಿಗೆ ಕಾಲದಲ್ಲಂತೂ ತೆಗೆದುಕೊಂಡ ಸೂರ್ಯನ ಶಾಖವನ್ನು ಹಾಗೆಯೇ ಉಗುಳುವ ಈ ನಮ್ಮ ಹೊಸ ರಸ್ತೆಗಳ ಮೇಲೆ ಬರಿಗಾಲಿನಲ್ಲಿ ರಸ್ತೆಗಿಳಿದರೆ ಕಾಲು ಬೆಂದು ಹೋಗುವುದು ನಿಶ್ಚಯ.

'ಅಭಿವೃದ್ಧಿ' ಎಂಬುದಕ್ಕೆ ಸರಿಯಾದ ವ್ಯಾಖ್ಯಾನ ನೀಡುವ ಅವಶ್ಯಕತೆ ಇದೆ. ಇಲ್ಲದಿದ್ದರೆ ಮೂಲ ಸೌಕರ್ಯದ ಪೂರೈಕೆಯನ್ನು ಬಿಟ್ಟು ಬರೇ ಬೃಹತ್ ಕಟ್ಟಡಗಳು, ರಸ್ತೆಗಳು, ಮಾಲ್ ಗಳಿಂದ ಹಳ್ಳಿಗಳನ್ನು, ಗ್ರಾಮಗಳನ್ನು ತುಂಬಿಸುವುದೇ 'ಅಭಿವೃದ್ಧಿ' ಎಂಬ ತಪ್ಪು ಕಲ್ಪನೆ ಬಂದು ಎಲ್ಲೆಡೆಯಲ್ಲೂ 'ವ್ಯಾಪಾರಿ ಭಾವದ ಮನೋವೈಕಲ್ಯ' ಆಕ್ರಮಣ ಮಾಡೀತು. ಇರುವುದನ್ನು ಹಾಳುಮಾಡಿ ಹೊಸದನ್ನು ಮಾಡುವುದೆಲ್ಲವೂ 'ಅಭಿವೃದ್ಧಿ' ಎಂಬ 'ಗುಮ್ಮ' ಎಲ್ಲರ ಮನಸ್ಸಿನಲ್ಲಿ ಆವರಿಸಿದರೆ ಆಗುವ ಅನಾಹುತಗಳನ್ನು ಸರಿಮಾಡಲು ಯಾರಿಂದಲೂ ಸಾಧ್ಯವಿಲ್ಲ.

ಈ ನನ್ನ ತರ್ಕವನ್ನ ಓದಿದವರು ನನ್ನನ್ನು ದೂಷಣೆ ಮಾಡಬಹುದು, ಯಾವ ಕಾಲದಲ್ಲಿ ಇದ್ದೇನೆ ನಾನು?, ಕಾಲಕ್ಕೆ ತಕ್ಕಂತೆ ಬದಲಾಗಬೇಕು ಅಂತೆಲ್ಲ ಮಾತಾಡಬಹುದು. ಆದರೆ ಕಾಲಕ್ಕೆ ತಕ್ಕಂತೆ ಬದಲಾಗೋದು ಅಂದ್ರೆ ಬದಲಾವಣೆಗಳನ್ನು ತರುತ್ತಿರುವುದು ಎಂದಲ್ಲ. ಅವ್ಯವಸ್ಥೆಗಳನ್ನು ವ್ಯವಸ್ಥೆ ಗೊಳಿಸುವ ದಿಕ್ಕಿನಲ್ಲಿ, ಅನಾನುಕೂಲವಾಗಿರುವುದನ್ನು ಅನುಕೂಲವಾಗಿಸುವ ದಿಕ್ಕಿನಲ್ಲಿ ಮಾಡಬೇಕಾದ ಬದಲಾವಣೆಗಳು, ಅಭಿವೃದ್ಧಿ ಎಂದು ಕರೆಸಿಕೊಳ್ಳುತ್ತದೆ. ಹಿಂದಿನ ಕಾಲದಲ್ಲಿ ಬಲಗೈ ನಲ್ಲಿ ಊಟ ಮಾಡುತ್ತಿದ್ದರು ಎಂದು ಈಗ ಕಾಲ ಬದಲಾಗಿದೆ, ಎಡಗೈ ನಲ್ಲಿ ಊಟ ಮಾಡಲು ಪ್ರಾರಂಭಿಸೋಣ ಎಂದರೆ ಆಗುತ್ತದೆಯೇ?

ರೈತರು ಬೆಳೆದ ಬೆಳೆಗಳಿಗೆ ಒಳ್ಳೆಯ ಬೆಲೆ ಕೊಟ್ಟು ಒಳ್ಳೆಯ ಮಾರುಕಟ್ಟೆ ಒದಗಿಸಲಿ, ಫಲವತ್ತಾದ ಭೂಮಿಯನ್ನು 'ಅಭಿವೃದ್ಧಿ' ಗಾಗಿ ಎಂದು ಕಸಿಯುವುದನ್ನು ನಿಲ್ಲಿಸಲಿ, ಕೃಷಿ ವಿಧಾನದ ಔನ್ನತ್ಯಕ್ಕೆ ಒತ್ತು ನೀಡಲಿ, ಕೃಷಿಯಲ್ಲಿ ಸಾಧನೆಗೈದ ರೈತರಿಗೆ ಪ್ರಶಸ್ತಿಗಳನ್ನ, ಪ್ರೋತ್ಸಾಹಗಳನ್ನ ನೀಡಲಿ. ಅದನ್ನು ಬಿಟ್ಟು ಅಭಿವೃದ್ಧಿ ಅನ್ನೋ ಹೆಸರಿನಲ್ಲಿ, ಅಧಿಕಾರವಿದೆ, ನನ್ನ ಬಳಿ ಸಾಧ್ಯವಿದೆ, ನಾನು ಏನಾದರೂ ಮಾಡಬೇಕು ಎಂಬ ಅಹಂಕಾರದಲ್ಲಿ ಇರೋದನ್ನೆಲ್ಲ ಬದಲಾಯಿಸೋದು ಹುಂಬತನವಾಗುವುದು. ಈ ಕುರಿತು ನಮ್ಮೆಲ್ಲರ ಮನದಲ್ಲಿ ಚಿಂತನೆ ಮೊಳಗಲಿ ಎಂಬುದೇ ನನ್ನ ಉದ್ದೇಶ.

ಇದು ನನ್ನ ದುಃಖ ಭಾವನೆಯ ಅಭಿವ್ಯಕ್ತಿಯಷ್ಟೇ...

Jun 11, 2010

ಜನತೆಯಿಂದ ಕಿತ್ತುಕೊಳ್ಳದಿರಲಿ...


ಸಾಕಷ್ಟು ದೊಡ್ಡದಾಗಿಯೇ 'ಹೂಡಿಕೆದಾರರ ಸಮಾವೇಶ'ವನ್ನು ನಮ್ಮ ಕರ್ನಾಟಕ ಘನ ಸರಕಾರ ನಡೆಸಿ ಹಲವಾರು ಜನರ ಬಳಿ ಸೈ ಎನಿಸಿಕೊಂಡಿದೆ. ಯಥಾ ಪ್ರಕಾರ ಕೆಲವರು ವಿರೋಧಿಸಿದ್ದುದು ಸಹಜವೇ. ನಡೆದ ಸಮಾವೇಶದ ಹಿಂದೆ ಸ್ವಾರ್ಥದ ಜತೆಗೆ ರಾಜ್ಯದ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವ 'ರಾಜ್ಯಾಭಿಮಾನ'ವನ್ನು ಹೊತ್ತ ಸಚಿವರು ಹಾಗು ಮುಖ್ಯಮಂತ್ರಿಗಳ ಸಾಕಷ್ಟು ಪರಿಶ್ರಮ ಇದೆ ಎಂಬುದು ಅಷ್ಟೇ ಸತ್ಯ. ಈ ಕಾರಣಕ್ಕೆ ಮುಖ್ಯಮಂತ್ರಿಗಳು ಹಾಗು ಸಚಿವರಾದ ಮುರುಗೇಶ್ ನಿರಾಣಿಯವರು ಅಭಿನಂದನಾರ್ಹರು. ರಾಜ್ಯಕ್ಕೆ ಕೈಗಾರಿಕೆಗಳು ಬರುವುದರಿಂದ ಸಾಕಷ್ಟು ಅನುಕೂಲವಾಗುವುದರಲ್ಲಿ ಸಂದೇಹವಿಲ್ಲ.


ಆದರೆ, ಪ್ರಸ್ತುತ ರಾಜ್ಯದ ಜನತೆಗೆ ಸಿಗುತ್ತಿರುವ ನೀರು ಕುಡಿಯಲಿಕ್ಕೆ ಸಾಕಾದರೆ ಹೆಚ್ಚು. ವಿದ್ಯುತನ್ನಂತೂ ಕೇಳಲೇಬೇಡಿ. ಉತ್ತರ ಕರ್ನಾಟಕದಲ್ಲಂತೂ ನೀರಿಗೇ ಹಾಹಾಕಾರದಂತಹ ಪರಿಸ್ಥಿತಿ. ಇಂತಹ ಸಮಯದಲ್ಲಿ ಬಂಡವಾಳ ಹರಿದು ಬರುತ್ತದೆ ಎಂಬ ಭರಾಟೆಯಲ್ಲಿ ರಾಜ್ಯದ ಜನತೆಗೆ ಸಿಗ್ಗುತಿರುವ ಅಲ್ಪದರಲ್ಲೇ ಕಿತ್ತುಕೊಂಡು ಹೂಡಿಕೆದಾರರ ಪೂರೈಕೆಯನ್ನು ನಿಗಿಸುವ ವಿವೇಕರಹಿತ ಹಾಗು ಅಮಾನವೀಯ ನಿರ್ಧಾರಕ್ಕೆ ಮಾತ್ರ ರಾಜ್ಯ ಸರ್ಕಾರ ಮುಂದಾಗದಿರಲಿ ಎಂಬುದೇ ಜನತೆಯ ನಿರೀಕ್ಷೆ ಹಾಗು ಕೋರಿಕೆ. ಈಗಾಗಲೇ ನೈಸ್ ಯೋಜನೆಯಲ್ಲಿ ತಪ್ಪೆಸಗಿರುವ ರಾಜ್ಯ ಸರ್ಕಾರ ಮತ್ತೊಮ್ಮೆ ಈ ವಿಷಯದಲ್ಲೂ ಫಲವತ್ತಾದ ಕೃಷಿ ಭೂಮಿಯನ್ನೇನಾದರೂ ಮಾರಿದರೆ ರಾಜ್ಯದ ಜನತೆಗೆ ಮೋಸ ಮಾಡಿದಂತೆ. ಹಾಗಾಗದಿರಲಿ ಎಂಬುದು ನಮ್ಮ ಆಗ್ರಹ.

ಈ ಎಲ್ಲ ಕಾರಣಕ್ಕೋಸ್ಕರ, ರಾಜ್ಯದ ಸಾಮರ್ಥ್ಯಕ್ಕೆ ಅನುಗುಣವಾಗಿಯೇ ಸರಕಾರ ಹೂಡಿಕೆದಾರರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಿ, ರಾಜ್ಯದ ಅಭಿವೃದ್ಧಿ ಸಕಾರಾತ್ಮಕ ರೀತಿಯಲ್ಲಿ ಮುಂದುವರೆಯಲಿ.

--


Apr 30, 2010

ಭಾರತ ದರ್ಶನ ತೋರಿದ ವಿದ್ಯಾನಂದ ಶೆಣೈ


ಒಮ್ಮೆ ಒಬ್ಬ ಹಿರಿಯ ಕಾಂಗ್ರೆಸ್ ಕಾರ್ಯಕರ್ತರ ಜತೆ ಮಾತಾಡುವಾಗ ಸಹಜವಾಗಿ ಆರ್ಎಸ್ಎಸ್ ನ ಬಗ್ಗೆ ಮಾತು ಹೊರಳಿತು. ಆಗ ಅವರು 'ನಾನು ನಿಮ್ಮ ಆರ್ಎಸ್ಎಸ್ ನ ಅಷ್ಟು ಒಪ್ಪಲ್ಲ. ಆದರೆ ನಿಮ್ಮ ವಿದ್ಯಾನಂದ ಶೆಣೈರವರ ಭಾರತ ದರ್ಶನ ಮಾತ್ರ ಇಷ್ಟ ಆಗುತ್ತೆ. ಕಷ್ಟ ಪಟ್ರು ಇಷ್ಟ ಪಡದೆ ಇರಲು ಆಗೋದಿಲ್ಲ. ಹಾಗಿದೆ ಅವರ ಮಾತು. ಅದ್ಭುತ ಮಾತುಗಾರ!' ಅಂತ ಹೇಳಿದ್ದು ನೆನಪಿಗೆ ಬಂತು. ಇದನ್ನ ನೆನಪಿಸಿ ಕೊಳ್ಳುವುದಕ್ಕೆ ಕಾರಣವಿದೆ. ಇದೆ ಸಮಯದಲ್ಲೇ ಈಗ್ಗೆ 3 ವರ್ಷಗಳ ಹಿಂದೆ 2007ರಲ್ಲಿ ವಿದ್ಯಾನಂದ ಶೆಣೈ ರವರು ಇಹ ಲೋಕತ್ಯಜಿಸಿದ್ದರು.

ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತಿದ್ದಂತಹ ಅವರ ವಾಗ್ಝರಿ ಈಗ ಬರೇ ಸಿಡಿಗಳಲ್ಲಿ, ಕ್ಯಾಸೆಟ್ ಗಳಲ್ಲಿ ಕೇಳುವಂತಹುದಾಗಿದೆ. ನನ್ನಂತಹ ಅದೆಷ್ಟೋ ಜನರಿಗೆ ಈಗಲೂ ಅವರ ಇಲ್ಲದಿರುವಿಕೆಯನ್ನು ನಂಬಲು ಸಾಧ್ಯವಾಗುವುದಿಲ್ಲ. ಮೊನ್ನೆ ಅವರ ಭಾರತ ದರ್ಶನದ ಸಿಡಿಯನ್ನು ಕೇಳುತ್ತಿದ್ದಾಗ, ಮನಸ್ಸು ತಾನೇ ತಾನಾಗಿ ಭಾವಯುಕ್ತ ವಾಯಿತು. ಅವರ ಭಾರತ ದರ್ಶನದ ಧ್ವನಿಸುರುಳಿಗಳು ತಲುಪದಿರುವ ಮನೆ-ಮನಗಳಿಲ್ಲ. ಆ ಪರಿಯಲ್ಲಿ ಅವರ ಮಾತು ಎಲ್ಲರ ಮನಸ್ಸನ್ನು ಆವರಿಸಿತ್ತು.

ಕೆಲ ವರ್ಷಗಳ ಹಿಂದೆ ನಮ್ಮೂರಿನಲ್ಲೂ ಕಾರ್ಯಕ್ರಮ ಆಯೋಜನೆಯಾಗಿತ್ತು. 2 ದಿನಗಳ ಕಾರ್ಯಕ್ರಮ. ಅದು ವಿದ್ಯಾನಂದರ 1100ನೇ ಕಾರ್ಯಕ್ರಮ ಇದ್ದಿರಬಹುದು! ಕಾರ್ಯಕ್ರಮಕ್ಕೊಸ್ಕರ ಸುತ್ತ ಮುತ್ತಲಿನ ಸುಮಾರು 8-10 ಹಳ್ಳಿಗಳಿಂದ ಎತ್ತಿನ ಗಾಡಿಗಳಲ್ಲಿ, ಲಾರಿಗಳಲ್ಲಿ, ಸೈಕಲ್ ಗಳಲ್ಲಿ ಬಸ್ಸಿನಲ್ಲಿ ಬಂದಿದ್ದರು. ನಡೆದುಕೊಂಡೇ ಬಂದವರೂ ಹಲವರು. ಅತ್ಯಂತ ಅದ್ಭುತವಾಗಿ ನಡೆದ ಕಾರ್ಯಕ್ರಮ, ನೆರೆದಿದ್ದವರಲ್ಲಿ ಅದೆಂತಹ ಸಂಚಲನವನ್ನು ಉಂಟುಮಾಡಿತ್ತು ಎಂದರೆ ಪ್ರತಿಯೊಬ್ಬರೂ 'ಪ್ರತಿ ತಿಂಗಳೂ ಇದೆ ಕಾರ್ಯಕ್ರಮವನ್ನು ಮಾಡೋಣ' ಎಂಬ ಕೋರಿಕೆಯನ್ನು ಇಟ್ಟಿದ್ದರು!

ಅವರ ಸ್ಮರಣೆಯ ನಿಮಿತ್ತ ಅವರಿಗೊಂದು 'ಅಕ್ಷರ'ನಮನ.


ಪೂರಕ ಲೇಖನಗಳು : ಅಸಾಮಾನ್ಯ ರಾಷ್ಟ್ರಭಕ್ತ ವಿದ್ಯಾನ೦ದ ಶೆಣೈ

ದಟ್ಸ್ ಕನ್ನಡದಲ್ಲಿ ನನ್ನ ಅಂಕಣಕ್ಕೆ ಇಲ್ಲಿ ಕ್ಲಿಕ್ಕಿಸಿ


"ವಂದೇ ಭಾರತಮಾತರಂ "

Mar 12, 2010

ಇವರು 'ಸ್ವಾರ್ಥ'ರೋಗ ಪೀಡಿತರು


ಕೆಲ ದಿನಗಳ ಹಿಂದೆಯಷ್ಟೇ 'ಗೋ ಹತ್ಯೆ ನಿಷೇಧ ಕಾಯಿದೆಯ' ವಿರೋಧ ಮಾಡಲು ಕೆಲ ವಿಕೃತ ಮನಸ್ಸಿನ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದಲ್ಲೇ ಗೋವಿನ ಮಾಂಸ ಭಕ್ಷಣೆ ಮಾಡುವ ಮೂಲಕ ರಾಜ್ಯವ್ಯಾಪಿ ಪ್ರಸಿಧ್ಧಿಯಾದರು.

ಈ ವಿಷಯವಾಗಿ ಹಲವಾರು ಬುಧ್ಧಿಜೀವಿಗಳು, ಸಂಘಟನೆಗಳು ಕಾಯಿದೆಯ ವಿರುಧ್ಧ ಪ್ರತಿಭಟಿಸುತ್ತಲೇ ಬಂದಿದ್ದಾರೆ. 'ಅಲ್ಪಸಂಖ್ಯಾತರ ಹಾಗು ದಲಿತರ ಆಹಾರ ಸ್ವಾತಂತ್ರ್ಯ' ಕ್ಕೆ ಧಕ್ಕೆ ಬರುತ್ತದೆ ಎಂದು ಬೊಂಬಡಿ ಬಜಾಯಿಸುತ್ತಿದ್ದಾರೆ. ಆದರೆ ಇದೇ ಗೋಹತ್ಯೆ ನಿಷೇಧದ ಕಾನೂನಿನ ಜಾರಿಗೋಸ್ಕರ ಪೂಜ್ಯ ರಾಘವೇಶ್ವರ ಭಾರತಿ ಸ್ವಾಮಿಗಳ ಜತೆ ಕೈ ಜೋಡಿಸಿ ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಿರುವ ಸುಮಾರು ಮೂರು ಲಕ್ಷಕ್ಕೂ ಅಧಿಕ ಮುಸ್ಲಿಮರು ಮನುಷ್ಯರಲ್ಲವೇ? ಅವರ 'ಆಹಾರ ಸ್ವಾತಂತ್ರ್ಯ' ಹರಣವಾಗುವುದಿಲ್ಲವೇ?

ಮುಸ್ಲಿಂ ರಾಷ್ಟ್ರೀಯ ಮಂಚ್ ಎಂಬ ಸಂಘಟನೆ ಹಲವಾರು ತಿಂಗಳುಗಳಿಂದ ಗೋಹತ್ಯೆ ಯನ್ನು ನಿಷೇಧಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಡುತ್ತಲೇ ಬಂದಿದೆ. ಕೃಷಿ ಅಭಿವೃದ್ಧಿಗೆ ಮಾರಕವಾದ ಗೋಹತ್ಯೆಯನ್ನು ಖಂಡಿತವಾಗಿ ನಿಷೇಧಿಸಬೇಕು ಎಂದು ಮುಸ್ಲಿಂ ಜಾಗರಣ ಮಚ್ ನ ಕೆ.ಎಂ. ಅನೀಸ್ ಉಲ್ ಹಕ್ ರವರು ಸಾರ್ವಜನಿಕ ವೇದಿಕೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಒಳ್ಳೆಯ ಕೆಲಸಕ್ಕೋಸ್ಕರ ಎಲ್ಲ ಮುಸ್ಲಿಮರೂ ಕೈ ಜೋಡಿಸಬೇಕು ಎಂದು ಕರೆ ಕೊಟ್ಟಿದ್ದಾರೆ.

ಆದರೆ ಕೆಲ ಸ್ವಾರ್ಥರೋಗ ಪೀಡಿತ ರಾಜಕಾರಣಿಗಳು ಹಾಗು ಬುದ್ಧಿಜೀವಿಗಳಿಂದ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ತಮ್ಮ 'ಬಿಜೆಪಿ ವಿರೋಧಿ' ನಿಲುವಿನಡಿಯಲ್ಲಿ ಮುಸ್ಲಿಮರನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಈ ಮೂಲಕ ತಮ್ಮ ರಾಜಕೀಯ ಸ್ವಾರ್ಥದ ಬೇಳೆಯನ್ನು ಬೇಯಿಸಿಕೊಳ್ಳಲಾಗುತ್ತಿದೆ.

ಆದರೆ ಇವುಗಳ ಹಿಂದಿನ ದುರುದ್ದೇಶಗಳನ್ನು ಅರ್ಥ ಮಾಡಿಕೊಂಡಿರುವ ಸಜ್ಜನ ಮುಸ್ಲಿಮರು 'ಗೋಹತ್ಯೆ ನಿಷೇಧ ಕಾನೂನಿನ' ಜಾರಿಗೊಸ್ಕರ ಒತ್ತಾಯಿಸುತ್ತಿದ್ದಾರೆ. ತಮ್ಮ ಧರ್ಮದವರ ಜಾಗೃತಿಗೋಸ್ಕರ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರದ ಒಳಿತಿಗೋಸ್ಕರ, ದುಷ್ಟ ರಾಜಕಾರಣಿಗಳ ಓಲೈಕೆಗೆ ಕಿವಿಗೊಡದೆ ಮುನ್ನಡೆಯುತ್ತಿರುವ ಮುಸ್ಲಿಂ ರಾಷ್ಟ್ರೀಯ ಮಂಚ್ ನ ಎಲ್ಲ ಕಾರ್ಯಕರ್ತರೂ ಅಭಿನಂದನಾರ್ಹರು.

ನಿಷ್ಕ್ರಿಯರಾಗಿರುವ ಎಲ್ಲ ಸಜ್ಜನರೂ ಸಕ್ರಿಯರಾಗಿರಬೇಕು. ರಾಷ್ಟ್ರೀಯತೆಯ ಪ್ರವಾಹದಲ್ಲಿ ಒಂದಾಗಬೇಕು.

---

Feb 4, 2010

'ಪದ್ಮಶ್ರೀ' ರಾಜಕೀಯ...!


ಒಮ್ಮೊಮ್ಮೆ ಸ್ವಾರ್ಥ ಯಾವ ಮಟ್ಟ ತಲುಪುತ್ತದೆ ಎಂದರೆ ಸ್ವತಃ ತಮ್ಮ ಹೆತ್ತವರ ಪ್ರಾಣ ತೆಗೆಯಲು ಬಂದವರಿಗೂ ನಾವು ನಮ್ಮ ಸ್ವಂತ ಲಾಭಕ್ಕೋಸ್ಕರ ಮನೆ ತುಂಬಿಸಿಕೊಳ್ಳುತ್ತೇವೆ. ಓಲೈಕೆ ರಾಜಕೀಯದ ಅಗ್ರಗಣ್ಯ, ಕೇಂದ್ರದ ಯುಪಿಎ ಸರ್ಕಾರ ಒಬ್ಬ ಮಾಜಿ(?) ಭಯೋತ್ಪಾದಕನನ್ನು 'ಶರಣಾದವ' ಎಂಬ ಕಾರಣಕ್ಕೆ 'ಸಾಚಾತನ'ದ ಪಟ್ಟದ ಜತೆಗೆ 'ಪದ್ಮಶ್ರೀ' ಪಟ್ಟಕ್ಕೂ ಆಯ್ಕೆ ಮಾಡಿರುವುದು ತಮಾಷೆ ಮಾಡಲೂ ಅಸಹ್ಯಕರವಾಗಿದೆ.

ಕೇವಲ ಹೆಸರೇ ಯೋಗ್ಯತೆಯಾಗಿರುವ 'ಗುಲಾಂ ಮೊಹಮ್ಮದ್ ಮೀರ್ ಯಾನೆ ಮಾಮಾ ಖಾನ್' ನನ್ನು 'ಪದ್ಮಶ್ರೀ' ಗೆ ಆಯ್ಕೆ ಮಾಡಿರುವುದು ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕೀಯಕ್ಕೆ ಹಿಡಿದ 'ದಿವ್ಯ' ನಿದರ್ಶನವಾಗಿದೆ.

ಇನ್ನು ಇತ್ಯರ್ಥವಾಗದ ಕೊಲೆ-ಸುಲಿಗೆ ಯಂತಹ ಕ್ರಿಮಿನಲ್ ಮೊಕದ್ದಮೆ ಗಳಿರುವ ಮಾಜಿ ಭಯೋತ್ಪಾದಕ, 'ಅಲ್ಪಸಂಖ್ಯಾತ ನಾಯಕ' ನ 'ಸಾಮಾಜಿಕ ಸೇವೆ' ಗೆ 'ಪದ್ಮಶ್ರೀ' ಯ ಬಾಗಿಲು ತೆರೆದಿದ್ದು ಕೇಂದ್ರ ಸರ್ಕಾರದ ಸಾಧನೆಯೇ ಸರಿ! ಈವರೆಗೆ 'ಪದ್ಮಶ್ರೀ' ಪಡೆದಿರುವ ಎಲ್ಲ ಗಣ್ಯರಿಗೂ 'ನಗಣ್ಯ' ಪಟ್ಟ ಕೊಟ್ಟಿದ್ದು ಕೇಂದ್ರದ ಸಾಧನೆಯೇ ಸರಿ!

ಇಷ್ಟೆಲ್ಲಾ ನಡೆಯುತ್ತಿದ್ದರೂ, 'ರಾಮಮಂದಿರ ನಿರ್ಮಾಣ' ಎಂಬ ಖಾತರಿ ಯೋಜನೆಯ ರೂವಾರಿ, 'ವಿರೋಧ ಪಕ್ಷ' ಎಂಬ ಸುಪ್ಪತ್ತಿಗೆಯಲ್ಲಿ ಕುಳಿತು ತಮ್ಮ ಪಕ್ಷದ ಸಮಸ್ಯೆಗಳನ್ನೇ ಮೈಮೇಲೆ ಎಳೆದುಕೊಂಡು ನರಳುತ್ತಿರುವವರಿಗೆ ಅತೃಪ್ತರ ಮನ ಒಲಿಸುವುದೇ 'ಸಾಮಾಜಿಕ ಕೆಲಸ' ವಾಗಿಬಿಟ್ಟಿದೆ.

ಕೇಂದ್ರ ಈ ನಿರ್ಧಾರಕ್ಕೆ ಜಮ್ಮು -ಕಾಶ್ಮೀರ ಮುಖ್ಯಮಂತ್ರಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ, ಸಂತೋಷಕ್ಕೋ, ದುಃಖಕ್ಕೋ ಗೊತ್ತಿಲ್ಲ. ಅಂತು ಇಂತೂ 'ಪದ್ಮಶ್ರೀ' ಯ ಘನತೆಗೆ 'ಇತಿಶ್ರೀ'...!

ಪತ್ರಿಕಾ ವರದಿ

Jan 19, 2010

'ವನವಾಸಿ ಬಂಧು'ಗಳ ಕಲ್ಯಾಣ : ನಮ್ಮದೇ ಕರ್ತವ್ಯ


ಸಾಕಷ್ಟು ಆಧುನಿಕ ವ್ಯವಸ್ಥೆಗಳನ್ನು ಹಾಗು ಆಧುನಿಕ ಸವಲತ್ತುಗಳನ್ನು ಅನುಭವಿಸುತ್ತಿರುವ ನಾವೆಷ್ಟೋ ಮಂದಿ ಸಮಾಜಕ್ಕೆ ಏನಾದರೂ ಮಾಡುವುದಿರಲಿ ಅದರ ಬಗೆಗೆ ಯೋಚನೆ ಕೂಡ ಮಾಡುವುದಿಲ್ಲ. ಆದರೆ ಯಾವುದೇ ಮೂಲಭೂತ ಸೌಕರ್ಯಗಳ ವಾಸನೆಯೂ ಇಲ್ಲದೆ, ಅಕ್ಷರಶಃ ಕಾಡುಗಳಲ್ಲಿ, ಜೀವನ ಸಾಗಿಸುತ್ತಿರುವ ಸರಿಸುಮಾರು 10 ಕೋಟಿ ಜನ ನಮ್ಮ ಭಾರತೀಯರಿದ್ದಾರೆ ಎನ್ನುವುದು ನಂಬಲಸಾಧ್ಯವಾದರೂ ಸತ್ಯ!

'ವನವಾಸಿ ಬಂಧು'ಗಳು ಎಂದು ಗುರುತಿಸಬಹುದಾದ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರಲು ಅಹರ್ನಿಶಿ ಕೆಲಸ ಮಾಡುತ್ತಿರುವ 'ವನವಾಸಿ ಕಲ್ಯಾಣ' ಎಂಬ ಸಾಮಾಜಿಕ ಸಂಸ್ಥೆ ಸದ್ದಿಲ್ಲದೇ ವನವಾಸಿ ಬಂಧುಗಳ ಏಳಿಗೆಗೋಸ್ಕರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಈ ಸಾಮಾಜಿಕ ಸಂಸ್ಥೆ ಬೆಂಗಳೂರಿನ ರಾಜಾಜಿನಗರದಲ್ಲಿದೆ.

ವನವಾಸಿ ಬಂಧುಗಳ ಶಿಕ್ಷಣಕ್ಕಾಗಿ ಶಾಲೆಗಳು, ವಿದ್ಯಾರ್ಥಿ ನಿಲಯಗಳು, ತರಬೇತಿ ಕೇಂದ್ರಗಳು, ವೈದ್ಯಕೀಯ ಚಿಕಿತ್ಸಾ ಶಿಬಿರಗಳು ಹಾಗು ಇನ್ನು ಹಲವಾರು ಚಟುವಟಿಕೆಗಳಲ್ಲಿ ಮಗ್ನವಾಗಿದೆ. ಆದರೆ ಇವುಗಳನ್ನೆಲ್ಲ ಯಾವುದೇ ಪತ್ರಿಕೆಗಳ ಮುಂದಾಗಲೀ ಅಥವಾ ಟಿವಿ ಚಾನೆಲ್ ಗಳ ಮುಂದಾಗಲೀ ಹೇಳಿಕೊಂಡಿಲ್ಲ. ಕಾರಣ ಇವೆಲ್ಲವುಗಳ ಹಿಂದಿನ ಉದ್ದೇಶ ಪವಿತ್ರ ದೇಶಭಕ್ತಿಯೇ ಹೊರತು ಪ್ರಸಿದ್ಧಿಯಾಗಲೀ ಪ್ರಚಾರವಾಗಲೀ ಅಲ್ಲ.

ಈ ಎಲ್ಲ ಪವಿತ್ರ ಕಾರ್ಯಗಳಿಗೋಸ್ಕರ ಮಹಿಳೆಯರ ಸಹಿತ ಸಾವಿರಾರು ಮಂದಿ ಪೂರ್ಣಾವಧಿ ಕಾರ್ಯಕರ್ತರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ವನವಾಸಿ ಬಂಧುಗಳ ಶ್ರೇಯೋಭಿವೃದ್ಧಿಯಲ್ಲಿ ತಮ್ಮ ಜೀವನವನ್ನು ಜೋಡಿಸಿಕೊಂಡಿದ್ದಾರೆ.

ನಮ್ಮಲ್ಲೂ ಅನೇಕ ಮಂದಿಗೆ 'ನಮ್ಮ ದೇಶಕ್ಕೆ ಏನಾದರು ಮಾಡಬೇಕು' ಎಂಬ ಹಂಬಲ ಇರುತ್ತೆ. ಆದರೆ ಅದಕ್ಕೆ ಬೇಕಾದ ಸರಿಯಾದ ಪ್ರೇರಣೆ ಸಿಕ್ಕಿರುವುದಿಲ್ಲ. ಅದಕ್ಕೆ ಬೇಕಾದ 'ಸಾಧನ' ಸಿಕ್ಕಿರುವುದಿಲ್ಲ. ಈ ಕಾರಣಗಳಿಗೆ ಕೆಲವು ಉತ್ತಮ ಕಾರ್ಯಕ್ರಮಗಳು, ಕೆಲವು ಮಾಹಿತಿಗಳು ಪ್ರೇರಕಶಕ್ತಿಯಾಗಿ ಕೆಲಸ ಮಾಡಬಲ್ಲವು. ಬರುವ ಶನಿವಾರ 23ರಂದು ಸಂಜೆ 6 ಗಂಟೆಗೆ 'ವನವಾಸಿ ಕಲ್ಯಾಣ'ದ ಸಂಸ್ಥಾಪನಾ ದಿನದ ಪ್ರಯುಕ್ತ ಒಂದು ಸಣ್ಣ ಕಾರ್ಯಕ್ರಮ ಯೋಜನೆಯಾಗಿದೆ. ನಿಮಗೆ ಆದರದ ಸ್ವಾಗತ.

ಸ್ಥಳ: 'ಶಾಸ್ವತಿ' ಸಭಾಂಗಣ
ಎನ್ ಎಂ ಕೆ ಆರ್ ವಿ ಮಹಿಳಾ ಕಾಲೇಜ್
ಜಯನಗರ ಮೂರನೆ ಬ್ಲಾಕ್
ಬೆಂಗಳೂರು
ಸಮಯ : ಸಂಜೆ 6 ಗಂಟೆಗೆ

'ವನವಾಸಿ ಕಲ್ಯಾಣ'ಸಂಸ್ಥೆಯ ಬಗ್ಗೆ ತಿಳಿದುಕೊಳ್ಳಲು ಭೇಟಿ ಕೊಡಿ ಅಂತರ್ಜಾಲ ವಿಳಾಸ 'ವನವಾಸಿ ಕಲ್ಯಾಣ'ದ ಅಂತರ್ಜಾಲ ವಿಳಾಸ