Sep 27, 2010

ಸಾಮರಸ್ಯದ ನವ್ಯ ಯುಗಕೆ ನಿಮಗಿದೋ ಆಮಂತ್ರಣ


ಇದು ಕೆಲವರಿಗೆ ಆಶ್ಚರ್ಯ, ಕೆಲವರಿಗೆ ಪ್ರೇರಣೆ, ಕೆಲವರಿಗೆ ಅಸೂಯೆ, ಕೆಲವರಿಗೆ ಸಂತೋಷ, ಕೆಲವರಿಗೆ ಅನುಕರಣೀಯ, ಕೆಲವರಿಗೆ ಆಜ್ಞೆಯೂ ಸಹ. ಅಸ್ಪೃಶ್ಯತೆ ಯಂತಹ ಅಸ್ಪೃಶ್ಯತೆಯನ್ನು ಪೇಜಾವರ ಶ್ರೀಗಳಂತಹ ಪೇಜಾವರ ಶ್ರೀಗಳು ಮೆಟ್ಟಿ ನಿಲ್ಲಲು ಈ ಪರಿ ಕಂಕಣಬಧ್ಧರಾಗಿ ತಮ್ಮ ಕರ್ತವ್ಯವನ್ನು ಮಾಡುತ್ತಿರುವ ಶ್ರೀಗಳಿಗೆ ವಂದಿಸುವುದು ನಮ್ಮೆಲ್ಲರ ಕರ್ತವ್ಯ. ಉಪೇಕ್ಷಿತ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಸಲುವಾಗಿ, ಅವರಲ್ಲಿ ಕೆಲವರಿಗಿರುವ ಕೀಳರಿಮೆಯನ್ನು ಕಿತ್ತೆಸೆಯಲು 'ವೈಷ್ಣವ ದೀಕ್ಷೆ' ಕೊಡಲು ಸಿದ್ದ ಎಂದು, 'ದಲಿತರು', 'ಮಾದಿಗರು' ಎಂಬುದಾಗಿ ಮೇಲ್ವರ್ಗದವರು ಕರೆಯುವುದಕ್ಕಿಂತ ಹೆಚ್ಚಾಗಿ ಅವರೇ ಕರೆಸಿಕೊಳ್ಳಲು ಹೆಮ್ಮೆ ಪಡುವವರ ಕೇರಿಗಳಲ್ಲಿರುವವರ ಮನೆಗಳಿಗೆ ಭೇಟಿ ನೀಡಿ ಅವರವರ ಕುಲದೈವರ ಪೂಜೆ ಗೈ ಯುವ ಮುಖಾಂತರ ಅತ್ಯಂತ ಪ್ರೇರಣಾದಾಯಿಯಾದ ಕೆಲಸಕ್ಕೆ ನಾಂದಿ ಹಾಡಿದ್ದಾರೆ ಪೇಜಾವರ ಶ್ರೀಗಳು. ಆ ಮೂಲಕ ಉಳಿದೆಲ್ಲ ಮಠಾಧೀಶರಿಗೆ ಹಾಗೂ ಸಾಮರಸ್ಯ ತುಂಬಿದ ಹಿಂದೂ ಸಮಾಜದ ಭವ್ಯ ಕನಸನ್ನು ಕಾಣುತ್ತಿರುವವರಿಗೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ.

ತಮ್ಮ ಸ್ವಾರ್ಥ ರಾಜಕೀಯ ಕಾರಣಗಳಿಗೋಸ್ಕರ ಈ ಕೆಲಸದಲ್ಲೂ ಕೊಂಕನ್ನು ಹುಡುಕುವ ಅಸಾಧಾರಣ ಪ್ರಜೆಗಳು ಅವರವರ ಯೋಗ್ಯತೆಗೆ ತಕ್ಕಂತೆ ನಡೆದುಕೊಳ್ಳುತ್ತಿರುವುದು ಭಾರತದಂತ ಹ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಆಶ್ಚರ್ಯವೇ ಅಲ್ಲ. ಆ ಮೂಲಕ ಉತ್ತಮ ಸಮಾಜದ ನಿರ್ಮಾಣದ ವಿಷಯದಲ್ಲಿ ತಮ್ಮ ಅಭಿಪ್ರಾಯವೇನು ಎಂಬುದನ್ನು ನಿರೂಪಿಸಿದ್ದಾರೆ.

ಅಸ್ಪೃಶ್ಯತೆಯ ವಿರುದ್ಧ ಈ ವರೆಗೆ ಮಾತಾಡಿ ಗೋಳಾಡಿರುವ ಎಷ್ಟು ಜನರು ಅಥವಾ ಎಷ್ಟು ಸಂಘಟನೆಗಳು ತಮ್ಮ ಕಾಳಜಿಯನ್ನು ಕೃತಿ ರೂಪಕ್ಕೆ ತಂದಿದ್ದಾರೆ ? ಸಂಘರ್ಷದ ಮೂಲಕ, ಸೌಹಾರ್ದದ ಮೂಲಕ ಸಂಘಟನೆಯ ಮೂಲಕ ಅಸ್ಪೃಶ್ಯತೆಯನ್ನು ಹೋಗಲಾಡಿಸುತ್ತೇವೆ ಎಂಬ ಕೂಗಿನೊಂದಿಗೆ ಹುಟ್ಟಿದವರು ಬರೀ ಅನ್ಯಾನ್ಯ ಜಾತಿ-ವರ್ಗಗಳ ಜನರ ಮಧ್ಯ ಇರುವ ಅಂತರವನ್ನು ಕಾಪಾಡಿಕೊಳ್ಳುತ್ತ, ತಮ್ಮಗಳ ಸ್ವಾರ್ಥ ರಾಜಕೀಯದ ಬೇಳೆಯನ್ನು ಬೇಯಿಸಿ ಕೊಳ್ಳುತ್ತಿರುವ ಸಮಾಜ ದ್ರೋಹಿಗಳ ಸಂಖ್ಯೆಯೇ ಹೆಚ್ಚು. ಅವರ ಸ್ವಾರ್ಥ ಕ್ಕೋಸ್ಕರ ನಮ್ಮ ಮನದಲ್ಲಿ ದ್ವೇಷ ಬಿತ್ತುವ ಕೆಲಸ ಗಳು ಅವ್ಯಾಹತವಾಗಿ ನಡೆಯುತ್ತಿರುವುದು ನಮಗೆ ಹಾಗು ನಮ್ಮ ಸಮಾಜಕ್ಕೆ ಅತ್ಯಂತ ಕಂಟಕವಾದುದು.

ಪೂಜ್ಯ ಪೇಜಾವರ ಶ್ರೀಗಳ 'ಉತ್ತಮ ಹಿಂದೂ ಸಮಾಜದ' ನಿರ್ಮಾಣದ ಕುರಿತಾದ ಕೆಲಸಗಳಿಗೆ ಮಾದಿಗ ಜನಾಂಗದ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮಿಗಳು ಕೈ ಜೋಡಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಮೈಸೂರಿನಲ್ಲಿ ನಡೆದ ಮಾದಾರ ಚನ್ನಯ್ಯ ಸ್ವಾಮಿಗಳ ಬ್ರಾಹ್ಮಣ ಸಮುದಾಯದವರ ಭೇಟಿ ಮತ್ತಿತರ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ನಡೆಯಲಿರುವ ಒಳ್ಳೆಯ ಕೆಲಸಗಳ ಮುನ್ಸೂಚನೆ ನೀಡುತ್ತದೆ.

ಆಧುನಿಕ ವಿದ್ಯಾಭ್ಯಾಸದ ಕಾರಣದಿಂದ ಹಾಗು ಇನ್ನಿತರ ಕಾರಣಗಳಿಂದ ಅಸ್ಪೃಶ್ಯತೆಯ ವಿಷಯದಲ್ಲಿ ದಶಕಗಳ ಹಿಂದಿನ ಪರಿಸ್ಥಿತಿ ಪ್ರಸ್ತುತ ಇಲ್ಲದಿರುವಾಗ ಇಂದಿನ ಪರಿಸ್ಥಿತಿಯೂ ಸಹ ಉತ್ತಮಗೊಳ್ಳಲು ಸಮಯದ ಅವಶ್ಯಕತೆ ಇದೆ. ಈ ಕಾರಣದಿಂದ ಎಲ್ಲ ವರ್ಗಗಳ ಜನರು ಸಂಘರ್ಷಗಳಿಗೆ ಎಡೆ ಮಾಡಿಕೊಡದೆ ಸ್ವಾರ್ಥ ಸಾಧಕರ ಕೈಗೊಂಬೆಯಾಗದೆ ಸಾವಧಾನದಿಂದ ಕಾಯಬೇಕಾಗಿದೆ. ಅಸ್ಪೃಶ್ಯತೆಯಂತಹ ಸೂಕ್ಷ್ಮ ಸಮಸ್ಯೆಗಳು ಮನೋ ವಿಕಾಸದ ಮೂಲಕ ಮನಃ ಪರಿವರ್ತನೆಯ ಮೂಲಕ ಬಗೆಹರಿಯುವಂತಹವೇ ಹೊರತು ಸಂಘರ್ಷ ಅಥವಾ ಕ್ರಾಂತಿಯ ಮೂಲಕವಲ್ಲ. ಎಲ್ಲ ಉತ್ತಮ ಕೆಲಸಗಳೂ ಸಾಕಾರಗೊಳ್ಳಲು ಸಮಯದ ಅವಶ್ಯಕತೆ ಇದ್ದೇ ಇರುತ್ತದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿದ್ದ ಪರಮ ಪೂಜನೀಯ ಗುರೂಜಿಯವರ ಜನ್ಮ ಶತಾಬ್ದಿ ಯ ನಂತರದಲ್ಲಿ ವೇಗಗೊಂಡಿರುವ ಅಸ್ಪೃಶ್ಯತೆಯ ವಿರುಧ್ಧದ ಕಾರ್ಯಾಚರಣೆಗಳು ಸಮರಸ ಹಿಂದೂ ಸಮಾಜದ ನಿರ್ಮಾಣದ ಸಂಕಲ್ಪದೊಂದಿಗೆ ಯಾವ ಪ್ರಚಾರವೂ ಇಲ್ಲದೆ ನಿರಂತರವಾಗಿ ನಡೆಯುತ್ತಿರುತ್ತಲೇ ಇರುತ್ತದೆ. ಈ ಎಲ್ಲ ಕೆಲಸಗಳಲ್ಲಿ ಉತ್ತಮ ಹಿಂದೂ ಸಮಾಜದ ಅಪೇಕ್ಷೆ ಇರುವ ನಾವುಗಳು ಮನಃ ಪೂರ್ವಕವಾಗಿ ಭಾಗಿಯಾಗಿ ಭವ್ಯ ಸಮರಸ ಹಿಂದೂ ಸಮಾಜದ ನಿರ್ಮಾಣದ ಕಾರ್ಯದಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಇದೆ. 'ಸ್ವಾರ್ಥ ಜಾತಿ ಪಿಪಾಸು'ಗಳ ಕುರಿತು ಸದಾ ಜಾಗೃತರಾಗಿರುವ ಅನಿವಾರ್ಯತೆಯೂ ಅಷ್ಟೇ ಇದೆ.