Sep 30, 2009

ಭಯೋತ್ಪಾದನೆ ವಿರುದ್ಧ ಯಾರ ಹೋರಾಟ ಅತಿಮುಖ್ಯ?

ಭಯೋತ್ಪಾದನೆಯಂಥ ಬೃಹತ್ ಸಮಸ್ಯೆಗಳನ್ನ ಎದುರಿಸುತ್ತಿರುವ, ಭಯೋತ್ಪಾದನೆಯ ಕಾರಣದಿಂದ ಪ್ರತಿದಿನವೂ ಮಾನವಬಲಿ ಕೊಡುತ್ತಿರುವ, ಹೀಗಾಗಿಯೂ ಸ್ವಾರ್ಥಕ್ಕೋಸ್ಕರ ಭಯೋತ್ಪಾದನೆಯ ವಿರುದ್ಧವೇ ಮೌನ ತಳೆದಿರುವ ಹಲವಾರು ರಾಜಕೀಯ ನಾಯಕರನ್ನು ಹೊಂದಿರುವ ಏಕೈಕ ರಾಷ್ಟ್ರ ಭಾರತ!

ಈಗ್ಗೆ ಕೆಲ ದಿನಗಳ ಹಿಂದೆ, ಅಮೆರಿಕದ ತಪಾಸಣಾ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಹಿಂದಿ ಚಿತ್ರರಂಗದ ಮೇರು ನಟ ಶಾರುಖ್ ಖಾನ್‌ರವರ ಜತೆ ನಡೆದುಕೊಂಡ ರೀತಿ ಎಂಥಹವನಿಗೂ ರೋಷ ಉಕ್ಕಿಸುವಂಥದ್ದು. ಹೀಗೆಯೇ ನಮ್ಮ ಹೆಮ್ಮೆಯ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರವರ ವಿಷಯದಲ್ಲಿ ಹೆಚ್ಚು ಕಮ್ಮಿ ಹೀಗೆಯೇ ನಡೆದುಕೊಂಡಿದ್ದರು ಅಮೆರಿಕದ ತಪಾಸಣಾ ಅಧಿಕಾರಿಗಳು. ಆದರೆ ಕಲಾಂರವರ ಸೌಜನ್ಯತೆಯಿಂದ ಶಾರುಖ್‌ ರೋಷಾವೇಷದಿಂದ ಶಾರುಖ್ ಮಾತ್ರ ತುಂಬ ಸುದ್ದಿಯಾದರು, ಅದು ಬಿಡಿ!

ಇವರೆಲ್ಲ ಪ್ರಸಿದ್ಧ ವ್ಯಕ್ತಿಗಳಾದ ಕಾರಣಕ್ಕೆ ಸಾಕಷ್ಟು ಮಂದಿಗೆ ಈ ಎಲ್ಲ ವಿಷಯ ತಿಳಿಯಿತು. ಹೀಗೆಯೇ ಬಹುತೇಕ ಎಲ್ಲ ಮುಸ್ಲಿಮರಿಗೂ ಇದೇ ರೀತಿಯ ಮರ್ಯಾದೆಯೇ ಸಿಕ್ಕುತ್ತದೆ ಎಂಬುದನ್ನು ಊಹಿಸುವುದಕ್ಕೆ ಬಹಳ ಬುದ್ಧಿ ಏನೂ ಬೇಕಾಗೋದಿಲ್ಲ! ಈ ಎಲ್ಲದಕ್ಕೂ ಕಾರಣ, ಎಲ್ಲರಿಗೂ ತಿಳಿದಿರುವಂತೆ, ಭಯೋತ್ಪಾದನೆಯಲ್ಲಿ ತೊಡಗಿರುವವರಲ್ಲಿ ಶೇ.90% ರಷ್ಟು ಮಂದಿ ಇಸ್ಲಾಂ ಧರ್ಮಕ್ಕೆ ಸೇರಿದುದು!

ಹಾಗಾದರೆ ಭಯೋತ್ಪಾದನೆಯ ವಿರುದ್ಧ ಯಾರು ಹೆಚ್ಚು ಹೋರಾಡಬೇಕು?
ಎಲ್ಲರೂ ಒಟ್ಟಾಗಿ ಹೋರಾಡಬೇಕು ಎಂಬುದು ಖಂಡಿತ ಒಪ್ಪಿಕೊಳ್ಳುವ ಮಾತೇ. ಆದರೆ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲಿನ ಭಯೋತ್ಪಾದನೆ ಕುರಿತಾದ ಭಯ ಯಾವ ರೀತಿ ಅಭಿವ್ಯಕ್ತವಾಗುತ್ತದೆ?
ಕೆಲ ದಿನಗಳ ಹಿಂದೆ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಓದುಗರ ಪತ್ರದಲ್ಲಿ ಈ ಕೆಳಕಂಡಂತೆ ಇತ್ತು.

ಗೌರವಾನ್ವಿತ ಪ್ರಧಾನಮಂತ್ರಿಯವರಲ್ಲಿ ನನ್ನದೊಂದು ಬಿನ್ನಹ.
ದಯವಿಟ್ಟು ಭಯೋತ್ಪಾದನೆ ವಿರುದ್ಧ ಅತ್ಯುಗ್ರವಾಗಿ ಹೋರಾಡಿ ಸಮಸ್ಯೆಯನ್ನು ಬುಡ ಸಮೇತ ಕಿತ್ತುಹಾಕಿ. ದಾರಿ ತಪ್ಪುತ್ತಿರುವ ಮುಸ್ಲಿಮರನ್ನು ಕಂಡುಹಿಡಿದು ಸರಿಯಾದ ಮಾರ್ಗದರ್ಶನದ ಮೂಲಕ ಅವರೆಲ್ಲರಿಗೂ ಉತ್ತಮ ಜೀವನ ರೂಪಿಸಿಕೊಳ್ಳಲು ಅವಕಾಶ ಕೊಡಿ ಹಾಗೂ ದಾರಿ ತಪ್ಪಿಸುತ್ತಿರುವ, ಇಸ್ಲಾಂ ಧರ್ಮಕ್ಕೆ ಮಸಿ ಬಳಿಯುತ್ತಿರುವ ವ್ಯಕ್ತಿ ಹಾಗೂ ಸಂಘಟನೆಗಳನ್ನು ಪತ್ತೆ ಹಚ್ಚಿ ಅವರನ್ನು ನೇಣಿಗೆ ಹಾಕಿ. ನಮ್ಮನ್ನು ಹಾಗೂ ಇಸ್ಲಾಮನ್ನು ಸಮಾಜ ಅನುಮಾನದಿಂದ ನೋಡುವುದರಿಂದ ತಪ್ಪಿಸಿ.

ಇಂತಿ,
ಅಬ್ದುಲ್ ಖಲೀಲ್, ಕುಮಾರಸ್ವಾಮಿ ಲೇ ಔಟ್

ಇದರಿಂದ ಗೊತ್ತಾಗುತ್ತದೆ ಭಯೋತ್ಪಾದನೆ ಎಂಬುದು ಯಾವ ಧರ್ಮಕ್ಕೆ ಹೆಚ್ಚಾಗಿ ಮಾರಕ ಹಾಗೂ ನಿಜವಾದ ಮುಸ್ಲಿಮರಿಗೆ ಯಾವ ರೀತಿಯ ಮುಜುಗರವನ್ನುಂಟುಮಾಡುತ್ತಿದೆ ಎಂದು.

ಕೆಲ ವರ್ಷಗಳ ಹಿಂದೆ ಹಿರಿಯರೊಬ್ಬರು ಹೇಳಿದ್ದರು, ಮುಸ್ಲಿಮರಲ್ಲಿ ಹೆಚ್ಚಿರುವ ಅಶಿಕ್ಷತೆ ಅವರನ್ನು ಭಯೋತ್ಪಾದನೆಗೆ ಆಕರ್ಷಿಸುವಂತೆ ಮಾಡುತ್ತದೆ ಎಂದು. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರೇ ಭಯೋತ್ಪಾದನೆಯಲ್ಲಿ ತೊಡಗಿರುವುದು ಕಾಣಬರುತ್ತಿದೆ!

ಹಾಗಾದರೆ ಏನು ಮಾಡಬಹುದು?

ಪ್ರತಿಯೊಬ್ಬ ಭಾರತೀಯನಲ್ಲೂ ದೇಶದ ಕುರಿತಾದ ನಿಷ್ಠೆಯನ್ನು ಬೆಳೆಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪ್ರತಿಯೊಂದು ಮದರಸಾದಿಂದ ಹಾಗೂ ಪ್ರತಿಯೊಂದು ಶಾಲಾ-ಕಾಲೇಜಿನಿಂದ ಹೊರಬರುವ ಪ್ರತಿಯೊಬ್ಬ ವ್ಯಕ್ತಿಯೂ ಈ ದೇಶದ ಪರವಾಗಿ ಪ್ರಾಣಾರ್ಪಣೆಗೈಯಲು ತಯಾರಿರುವ ರೀತಿಯಲ್ಲಿ ಅವರನ್ನು ಶಿಕ್ಷಿತರನ್ನಾಗಿಸಬೇಕು. ಧಾರ್ಮಿಕ ದ್ವೇಷವನ್ನು ಬೋಧಿಸುತ್ತಿರುವ ಮದರಸಾಗಳನ್ನು, ಶಿಕ್ಷಣಸಂಸ್ಥೆಗಳನ್ನು ಮುಚ್ಚಬೇಕು. ಪ್ರತಿಯೊಬ್ಬರ ಹೃದಯದಲ್ಲೂ ಭಾರತ ಪೂಜನೀಯವಾಗಬೇಕು. ಭಯೋತ್ಪಾದನೆಯಡಿಯಲ್ಲಿ ಬಂಧಿಸಲಾದವರಲ್ಲಿ ಆರೋಪ ಸಾಬೀತಾದ ಪ್ರತಿಯೊಬ್ಬರಿಗೂ ಮರುಕ್ಷಣವೇ ಮರಣದಂಡನೆ ವಿಧಿಸಬೇಕು. ಇಲ್ಲವಾದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಮೂಲಕವೇ ಅವರನ್ನು ನೇಣಿಗೇರಿಸಬೇಕು.ಪ್ರತಿಯೊಬ್ಬನೂ ಅನ್ಯ ಧರ್ಮದವರ ಪೂಜನೀಯವಾದವುಗಳನ್ನು ಗೌರವಿಸಬೇಕು ಹಾಗೂ ಸಾಧ್ಯವಾದರೆ ತಾನೂ ಪೂಜಿಸಬೇಕು. ಈ ನಿಟ್ಟಿನಲ್ಲಿ ಗೋವಧೆಯ ವಿರುದ್ಧದ ಕಾನೂನಿನ ಜಾರಿಗೋಸ್ಕರ ಭಾರತೀಯ ಮುಸ್ಲಿಮ್ ಮಂಚ್ ನಡೆಸುತ್ತಿರುವ ಕಾರ್ಯಾಚರಣೆ ನಿಜಕ್ಕೂ ಶ್ಲಾಘನೀಯ. ಭಯೋತ್ಪಾದನೆಯ ವಿರುದ್ಧ ಇಡೀ ಇಸ್ಲಾಂ ಧರ್ಮ ಎದ್ದು ನಿಲ್ಲಲಿ. ಭಾಯೋತ್ಪಾದನೆಯ ಹುಟ್ಟಡಗಿಸುವಲ್ಲಿ ಪ್ರತಿಯೊಬ್ಬ ಮುಸ್ಲಿಮನೂ ವೀರ ಸೇನಾನಿಯಂತೆ ತನ್ನ ಕೊಡುಗೆಯನ್ನು ನೀಡಲಿ.

Sep 19, 2009

ಉನ್ನತ ಶಿಕ್ಷಣ ಸಚಿವರ ಶ್ಲಾಘನೀಯ ಯೋಜನೆ

ಉನ್ನತ ಶಿಕ್ಷಣ ಸಚಿವರಾದಂತಹ ಅರವಿಂದ ಲಿಂಬಾವಳಿಯವರು ಶಿಕ್ಷಕರ ವರ್ಗಾವಣೆಯ ವಿಷಯದಲ್ಲಿ ತೆಗೆದುಕೊಂಡಿರುವ ಯೋಜನೆಯ ನಿರ್ಧಾರದ ಬಗ್ಗೆ ಮೊನ್ನೆ ಭೇಟಿಯಾದ ಹಿರಿಯರೊಬ್ಬರು ತಿಳಿಸಿದಾಗ ಆಶ್ಚರ್ಯ ಹಾಗೂ ಸಂತೋಷ ಎರಡೂ ಒಟ್ಟಿಗೆ ಅಟ್ಟಿಸಿಕೊಂಡು ಬಂದವು!

ಮಾನ್ಯ ಸಚಿವರು ಶಿಕ್ಷಕರ ವರ್ಗಾವಣೆಯಲ್ಲಿ ನಡೆಯುವ ಅಕ್ರಮ, ಅವ್ಯವಹಾರಗಳನ್ನು ತಡೆಯುವ ನಿಟ್ಟಿನಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಅವಶ್ಯವಿರುವ ಶಿಕ್ಷಕರನ್ನು ಸಂದರ್ಶನ ಮಾಡಿ, ಅವರು ಇಚ್ಚಿಸಿದ ಸ್ಥಳಗಳಲ್ಲಿ ವರ್ಗಾವಣೆ ಮಾಡುವುದು ಮತ್ತು ನಿಜವಾಗಿಯೂ ಶಿಕ್ಷಕರ ಕೊರತೆಯಿದ್ದರೆ ತಕ್ಷಣವೇ ಕೆಲಸ ಆಗುವಂತೆ ಮಾಡುವತ್ತ ಸಾಗಿರುವುದು ಖಂಡಿತ ಅತ್ಯಂತ ಶ್ಲಾಘನೀಯವಾದುದು.

ಈವರೆಗೆ ತಮ್ಮ ಪ್ರಭಾವದಿಂದ ಹಾಗೂ ತಮ್ಮ ಹಣಬಲದಿಂದ ವರ್ಗಾವಣೆಯನ್ನು ಮಾಡಿಸಿಕೊಳ್ಳುತ್ತಿದ್ದ ಪ್ರಭಾವಿಗಳು ಹಾಗೂ ಶ್ರೀಮಂತರ ನಡುವೆ, ವರ್ಗಾವಣೆಗೋಸ್ಕರ ವಿಧಾನಸೌಧಕ್ಕೆ ಅಲೆಯುವ, ಹೊಟ್ಟೆಬಾಕ ದಲ್ಲಾಳಿಗಳ ಜೇಬು ತುಂಬಿಸುವ ಮಧ್ಯಮ ವರ್ಗದವರ ನಾಯಿಪಾಡಿಗಿನ್ನು ಬಿಡುಗಡೆಯ ಸೂಚನೆ.

ಹಾಗೆಯೇ ತಮ್ಮ ಅಸಹಾಯಕತೆಯನ್ನು ವಿದ್ಯಾರ್ಥಿಗಳ ಮೇಲೆ ಪ್ರದರ್ಶಿಸುವ ಹಾಗೂ ಉದಾಸೀನತೆಯಿಂದ ಕೆಲಸ ನಿರ್ವಹಿಸುವ ಶಿಕ್ಷಕರ ಕಿರಿಕಿರಿಯ ಕಾಟ ವಿದ್ಯಾರ್ಥಿಗಳಿಗೂ ತಪ್ಪುತ್ತದೆ. ಹಾಗೂ ಫಲಾನುಭವಿ ಶಿಕ್ಷಕರಿಂದ ಇನ್ನೂ ಹೆಚ್ಚಿನ ಪ್ರಾಮಾಣಿಕ ಕರ್ತವ್ಯವನ್ನು ಅಪೇಕ್ಷಿಸಬಹುದು.

ಸಚಿವರ ಈ ಉತ್ತಮ ಯೋಜನೆಯ ಅನುಷ್ಠಾನದ ಹಿಂದೆ ಇನ್ನೂ ಹೆಚ್ಚಿನ ಪ್ರಾಮಾಣಿಕತೆಯನ್ನು ಅಪೇಕ್ಷಿಸುತ್ತ ಈ ಯೋಜನೆಯು ಧೀರ್ಘಕಾಲ ದೊರಕುವಂತಾಗಲಿ ಎಂದು ಹಾರೈಸುತ್ತೇನೆ.