Jul 18, 2009

ಎಂ.ಪಿ.ಪ್ರಕಾಶ್ ರವರ ವಿಭಿನ್ನತೆಯೇ ಅವರ ವಿಶೇಷತೆ

ಕಳೆದ ಭಾನುವಾರದ ಪತ್ರಿಕೆಗಳನ್ನ ಓದಿಮುಗಿಸಿದಾಗ (ಪೂರ್ತಿ ಏನಲ್ಲ!) ಒಂದು ತರಹದ ವಿಶೇಷ ಅನುಭವವಿತ್ತು. ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಖುಷಿಯಡಗಿತ್ತು. ಇ ಅವ್ಯಕ್ತ ಖುಷಿಗೆ ಕಾರಣವೇನು ಎಂದು ಮನಸ್ಸನ್ನು ತಡಕಾಡಿದಾಗ ಸಿಕ್ಕ ಉತ್ತರ, ಮಾಜಿ ಉಪಮುಖ್ಯಮಂತ್ರಿಯವರಾದ ಎಂ.ಪಿ.ಪ್ರಕಾಶ್ ರವರ ೭೦ನೇ ವರ್ಷದ ಜನ್ಮದಿನೋತ್ಸವದ ಆಚರಣೆಯ ಸ್ಥಳ ಹಾಗು ರೀತಿ!

ಸಾಮಾನ್ಯವಾಗಿ ರಾಜಕೀಯ ಪ್ರವೃತ್ತಿಯಲ್ಲಿ ಇರುವವರು ಮಾಡುವ ಕೆಲವೇ ಕೆಲವು ಒಳ್ಳೆಯ ಕೆಲಸಗಳನ್ನೂ ಸ್ವಾರ್ಥ ಪ್ರಚಾರಕ್ಕೊಸ್ಕರವೇ ಮಾಡುತ್ತಾರೆ ಎಂಬ ಧೃಢ ವಿಶ್ವಾಸ ಜನತೆಯಲ್ಲಿದೆ! ಎಂ.ಪಿ.ಪ್ರಕಾಶ್ ರದ್ದು ಹಾಗಾಗಿರದಿದ್ದಲ್ಲಿ ತುಂಬಾ ಒಳ್ಳೆಯದು.

ಆದರೆ, ಒಂದು ವೇಳೆ ಪ್ರಕಾಶ್ ರದ್ದು ಡೋನ್ಗಿತನದ ಆಚರಣೆಯೇ ಆಗಿದ್ದರೂ ಕಾರಾಗೃಹದ ಕೈದಿಯ ಸ್ಥಾನದಲ್ಲಿ ಇರುವವರಿಗೆ ಅದರ ಉದ್ದೇಶದ ಅಗತ್ಯವಿಲ್ಲ. ಅವರಿಗೆ ದೊರಕಿದ ವಿಶೇಷ ವಾತಾವರಣ, ಸಂಗೀತದ ಕಾರ್ಯಕ್ರಮ ಮತ್ತು ಭೂರಿ ಭೋಜನ ಖಂಡಿತ ಅವರಿಗೆಲ್ಲ ಸಂತೋಷವನ್ನುಂಟುಮಾಡಿರುವುದರಲ್ಲಿ ಯಾವ ಅನುಮಾನವೂ ಇಲ್ಲ. ಈ ಎಲ್ಲಕ್ಕೂ ಕಾರಣಕರ್ತರಾದ ಪ್ರಕಾಶ್ ರವರಿಗೆ ನನ್ನ ಕೃತಜ್ಞತೆಗಳು.

ಈ ಘಟನೆಗಳು ಪ್ರಕಾಶ್ ರವರ ಸಹೋದ್ಯೋಗಿಗಳಿಗೆ ಅಸೂಯೆಯನ್ನು ಉಂಟುಮಾಡಿರಲೂ ಸಾಕು. ಸ್ವಾರ್ಥ ಲೋಕದಲ್ಲೇ ದಿನವೆಲ್ಲ ಕಳೆಯುವ ರಾಜಕೀಯ ವ್ಯಕ್ತಿಗಳಲ್ಲಿ ಪ್ರಕಾಶ್ ರವರು ವಿಭಿನ್ನ, ವಿಶೇಷ!

ಪ್ರಕಾಶ್ ರವರ ಈ ಸೃಜನಶೀಲ ವ್ಯಕ್ತಿತ್ವದ ಹಿಂದೆ ಇನ್ನು ಹೆಚ್ಚಿನ ಪ್ರಾಮಾಣಿಕತೆ ಅರಳಲಿ. ಅವರ ವೈಚಾರಿಕತೆ ಹಾಗು ಬದ್ಧತೆಗಳು ಸಮಾಜಕ್ಕೆ ಅರ್ಪಿತವಾಗಲಿ.

ಅಂದ ಹಾಗೆ, ಪ್ರಕಾಶ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು.

Jul 15, 2009

ಸಂಸ್ಕೃತದ ಜ್ಞಾನ ಎಲ್ಲ ವರ್ಗಗಳಿಗೂ ಲಭಿಸುವಂತಾಗಲಿ

ಬೆಂಗಳೂರಿನಲ್ಲಿ ನಡೆದ ೫ನೆ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ 'ಸಂಸ್ಕೃತ ವಿವಿ ಬೇಡ' ಎನ್ನುವ ಕುರಿತಾದ ಕಾಮಿಡಿಗಳನ್ನು ಮಾಡಲಿಕ್ಕೆ ಮೀಸಲಾದಂತಿತ್ತು!

ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಏನು ಮಾಡಬೇಕು ಎಂದು ಚಿಂತಿಸುವುದನ್ನು ಬಿಟ್ಟು ನಕಾರಾತ್ಮಕ ಧೋರಣೆಯಡಿ ಸಂಸ್ಕೃತ ವಿವಿ ಬೇಡ ಅಂತ ಹೇಳಲಿಕ್ಕೆಂದು ಕೆಲ ಸಾಹಿತಿಗಳ ನಡುವೆ ಸ್ಪರ್ಧೆ ಏರ್ಪಟ್ಟಿರುವುದು ಸಾಹಿತಿಗಳ ಬೌದ್ಧಿಕ ಡೋಂಗಿತನದ ಪರಮಾವಧಿಯಾಗಿದೆ.

ಕಿ.ರಂ.ನಾಗರಾಜ್ ರವರು ತಮ್ಮನ್ನು ತಾವು ಏನೆಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ತಿಳಿಯಲಾಗಲಿಲ್ಲ. ಅವರೇ ಹೇಳಿದ ಹಾಗೆ ಭಾಷೆಯನ್ನು ತಿಳಿಯಲು ಪಂಡಿತರ ಅವಶ್ಯವಿರುವಂತಹ, ಸೀಮಿತ ವಲಯ ಮಾತ್ರ ಓದುತ್ತಿರುವಂತಹ ಅತ್ಯಂತ ಪ್ರಾಚೀನ ಭಾಷೆಯಾದ ಸಂಸ್ಕೃತವನ್ನು ಬರೇ ಉಳಿಸುವುದಕ್ಕಷ್ಟೇ ಅಲ್ಲದೆ ಸಮಾಜದ ಎಲ್ಲ ವಲಯ ಹಾಗು ವರ್ಗಗಳಿಗೂ ತಲುಪುವಂತೆ ಬೆಳೆಸಲು ಒಂದು ವಿಶ್ವವಿದ್ಯಾಲಯ ಅತ್ಯಂತ ಪುಉರಕ ಎಂದು ಒಬ್ಬ ಸಾಹಿತಿಗೆ ಅನಿಸದಿರುವುದೇ ಆಶ್ಚರ್ಯ! ಅಂಥಾದರಲ್ಲಿ ತಮ್ಮ ಅಸಮ್ಮತಿಯನ್ನು ಒಂದು ವೇದಿಕೆಯ ಮೇಲೆ ಹರಿಯಬಿಟ್ಟಿರುವುದು ಅವರಿಗೆ ಶೋಭೆಯೇ?

ನಮ್ಮ ದೇಶಕ್ಕೆ ಸಾಂಸ್ಕೃತಿಕ ಹಾಗು ಭಾಷಾ ಕ್ಷೇತ್ರದಲ್ಲಿ ಜಗತ್ತಿನಲ್ಲೇ ವಿಶೇಷ ಸ್ಥಾನವಿರುವುದರ ಹಿಂದೆ ಸಂಸ್ಕೃತದ ಪಾತ್ರ ಅತ್ಯಂತ ಹಿರಿದು ಎಂಬುದನ್ನು ಯಾರಾದರೂ ಅಲ್ಲಗೆಳೆಯಲು ಸಾಧ್ಯವೇ?

ನಾನು ಮತ್ತೂರಿನವ (ಸಂಸ್ಕೃತ ಗ್ರಾಮ ಎಂಬ ಹೆಸರೂ ಇದೆ) ಎಂದರೆ 'ನಿಮಗೆ ಸಂಸ್ಕೃತ ಬರುತ್ತೆ ಅಲ್ವಾ?' ಎಂದು ಕೇಳದವರೇ ಇಲ್ಲ! ಕೇಳಿ ಅವ್ಯಕ್ತ ಹೆಮ್ಮೆಯನ್ನು ಅನುಭವಿಸಿದವರೇ ಇಲ್ಲ! ಈ ಹೆಮ್ಮೆ ನನಗೆ ಸಂಸ್ಕೃತ ಬರುತ್ತೋ ಬರಲ್ವೋ ಎಂಬುದಕ್ಕಲ್ಲ. ಸಂಸ್ಕೃತಕ್ಕೆ ವಿಶೇಷ ಸ್ಥಾನ ನೀಡಿ, ಶಾಲಾ ಪಠ್ಯವನ್ನಾಗಿ ಮಾಡಿ, ಹೆಚ್ಚಾಗಿ ಬಳಸುವ ಗ್ರಾಮ ನಮ್ಮ ಭಾರತದಲ್ಲಿದೆ ಎಂಬ ಹೆಮ್ಮೆ ಅದು!

ಸಂಸ್ಕೃತ ವಿವಿಯ ಕಾರಣದಿಂದ ಆ ಭಾಷೆಯಲ್ಲಿ ಅನನ್ಯ ಜ್ಞಾನ ಭಂಡಾರ ಶ್ರೀಯುತ ನಾಗರಾಜ್ ರ ಸಮೇತ ಸಮಾಜದ ಎಲ್ಲ ವಲಯ ಹಾಗು ವರ್ಗಗಳಿಗೂ ಲಭಿಸುವಂತಾಗಲಿ.