Apr 30, 2010

ಭಾರತ ದರ್ಶನ ತೋರಿದ ವಿದ್ಯಾನಂದ ಶೆಣೈ


ಒಮ್ಮೆ ಒಬ್ಬ ಹಿರಿಯ ಕಾಂಗ್ರೆಸ್ ಕಾರ್ಯಕರ್ತರ ಜತೆ ಮಾತಾಡುವಾಗ ಸಹಜವಾಗಿ ಆರ್ಎಸ್ಎಸ್ ನ ಬಗ್ಗೆ ಮಾತು ಹೊರಳಿತು. ಆಗ ಅವರು 'ನಾನು ನಿಮ್ಮ ಆರ್ಎಸ್ಎಸ್ ನ ಅಷ್ಟು ಒಪ್ಪಲ್ಲ. ಆದರೆ ನಿಮ್ಮ ವಿದ್ಯಾನಂದ ಶೆಣೈರವರ ಭಾರತ ದರ್ಶನ ಮಾತ್ರ ಇಷ್ಟ ಆಗುತ್ತೆ. ಕಷ್ಟ ಪಟ್ರು ಇಷ್ಟ ಪಡದೆ ಇರಲು ಆಗೋದಿಲ್ಲ. ಹಾಗಿದೆ ಅವರ ಮಾತು. ಅದ್ಭುತ ಮಾತುಗಾರ!' ಅಂತ ಹೇಳಿದ್ದು ನೆನಪಿಗೆ ಬಂತು. ಇದನ್ನ ನೆನಪಿಸಿ ಕೊಳ್ಳುವುದಕ್ಕೆ ಕಾರಣವಿದೆ. ಇದೆ ಸಮಯದಲ್ಲೇ ಈಗ್ಗೆ 3 ವರ್ಷಗಳ ಹಿಂದೆ 2007ರಲ್ಲಿ ವಿದ್ಯಾನಂದ ಶೆಣೈ ರವರು ಇಹ ಲೋಕತ್ಯಜಿಸಿದ್ದರು.

ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತಿದ್ದಂತಹ ಅವರ ವಾಗ್ಝರಿ ಈಗ ಬರೇ ಸಿಡಿಗಳಲ್ಲಿ, ಕ್ಯಾಸೆಟ್ ಗಳಲ್ಲಿ ಕೇಳುವಂತಹುದಾಗಿದೆ. ನನ್ನಂತಹ ಅದೆಷ್ಟೋ ಜನರಿಗೆ ಈಗಲೂ ಅವರ ಇಲ್ಲದಿರುವಿಕೆಯನ್ನು ನಂಬಲು ಸಾಧ್ಯವಾಗುವುದಿಲ್ಲ. ಮೊನ್ನೆ ಅವರ ಭಾರತ ದರ್ಶನದ ಸಿಡಿಯನ್ನು ಕೇಳುತ್ತಿದ್ದಾಗ, ಮನಸ್ಸು ತಾನೇ ತಾನಾಗಿ ಭಾವಯುಕ್ತ ವಾಯಿತು. ಅವರ ಭಾರತ ದರ್ಶನದ ಧ್ವನಿಸುರುಳಿಗಳು ತಲುಪದಿರುವ ಮನೆ-ಮನಗಳಿಲ್ಲ. ಆ ಪರಿಯಲ್ಲಿ ಅವರ ಮಾತು ಎಲ್ಲರ ಮನಸ್ಸನ್ನು ಆವರಿಸಿತ್ತು.

ಕೆಲ ವರ್ಷಗಳ ಹಿಂದೆ ನಮ್ಮೂರಿನಲ್ಲೂ ಕಾರ್ಯಕ್ರಮ ಆಯೋಜನೆಯಾಗಿತ್ತು. 2 ದಿನಗಳ ಕಾರ್ಯಕ್ರಮ. ಅದು ವಿದ್ಯಾನಂದರ 1100ನೇ ಕಾರ್ಯಕ್ರಮ ಇದ್ದಿರಬಹುದು! ಕಾರ್ಯಕ್ರಮಕ್ಕೊಸ್ಕರ ಸುತ್ತ ಮುತ್ತಲಿನ ಸುಮಾರು 8-10 ಹಳ್ಳಿಗಳಿಂದ ಎತ್ತಿನ ಗಾಡಿಗಳಲ್ಲಿ, ಲಾರಿಗಳಲ್ಲಿ, ಸೈಕಲ್ ಗಳಲ್ಲಿ ಬಸ್ಸಿನಲ್ಲಿ ಬಂದಿದ್ದರು. ನಡೆದುಕೊಂಡೇ ಬಂದವರೂ ಹಲವರು. ಅತ್ಯಂತ ಅದ್ಭುತವಾಗಿ ನಡೆದ ಕಾರ್ಯಕ್ರಮ, ನೆರೆದಿದ್ದವರಲ್ಲಿ ಅದೆಂತಹ ಸಂಚಲನವನ್ನು ಉಂಟುಮಾಡಿತ್ತು ಎಂದರೆ ಪ್ರತಿಯೊಬ್ಬರೂ 'ಪ್ರತಿ ತಿಂಗಳೂ ಇದೆ ಕಾರ್ಯಕ್ರಮವನ್ನು ಮಾಡೋಣ' ಎಂಬ ಕೋರಿಕೆಯನ್ನು ಇಟ್ಟಿದ್ದರು!

ಅವರ ಸ್ಮರಣೆಯ ನಿಮಿತ್ತ ಅವರಿಗೊಂದು 'ಅಕ್ಷರ'ನಮನ.


ಪೂರಕ ಲೇಖನಗಳು : ಅಸಾಮಾನ್ಯ ರಾಷ್ಟ್ರಭಕ್ತ ವಿದ್ಯಾನ೦ದ ಶೆಣೈ

ದಟ್ಸ್ ಕನ್ನಡದಲ್ಲಿ ನನ್ನ ಅಂಕಣಕ್ಕೆ ಇಲ್ಲಿ ಕ್ಲಿಕ್ಕಿಸಿ


"ವಂದೇ ಭಾರತಮಾತರಂ "

No comments:

Post a Comment