Feb 4, 2010

'ಪದ್ಮಶ್ರೀ' ರಾಜಕೀಯ...!


ಒಮ್ಮೊಮ್ಮೆ ಸ್ವಾರ್ಥ ಯಾವ ಮಟ್ಟ ತಲುಪುತ್ತದೆ ಎಂದರೆ ಸ್ವತಃ ತಮ್ಮ ಹೆತ್ತವರ ಪ್ರಾಣ ತೆಗೆಯಲು ಬಂದವರಿಗೂ ನಾವು ನಮ್ಮ ಸ್ವಂತ ಲಾಭಕ್ಕೋಸ್ಕರ ಮನೆ ತುಂಬಿಸಿಕೊಳ್ಳುತ್ತೇವೆ. ಓಲೈಕೆ ರಾಜಕೀಯದ ಅಗ್ರಗಣ್ಯ, ಕೇಂದ್ರದ ಯುಪಿಎ ಸರ್ಕಾರ ಒಬ್ಬ ಮಾಜಿ(?) ಭಯೋತ್ಪಾದಕನನ್ನು 'ಶರಣಾದವ' ಎಂಬ ಕಾರಣಕ್ಕೆ 'ಸಾಚಾತನ'ದ ಪಟ್ಟದ ಜತೆಗೆ 'ಪದ್ಮಶ್ರೀ' ಪಟ್ಟಕ್ಕೂ ಆಯ್ಕೆ ಮಾಡಿರುವುದು ತಮಾಷೆ ಮಾಡಲೂ ಅಸಹ್ಯಕರವಾಗಿದೆ.

ಕೇವಲ ಹೆಸರೇ ಯೋಗ್ಯತೆಯಾಗಿರುವ 'ಗುಲಾಂ ಮೊಹಮ್ಮದ್ ಮೀರ್ ಯಾನೆ ಮಾಮಾ ಖಾನ್' ನನ್ನು 'ಪದ್ಮಶ್ರೀ' ಗೆ ಆಯ್ಕೆ ಮಾಡಿರುವುದು ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕೀಯಕ್ಕೆ ಹಿಡಿದ 'ದಿವ್ಯ' ನಿದರ್ಶನವಾಗಿದೆ.

ಇನ್ನು ಇತ್ಯರ್ಥವಾಗದ ಕೊಲೆ-ಸುಲಿಗೆ ಯಂತಹ ಕ್ರಿಮಿನಲ್ ಮೊಕದ್ದಮೆ ಗಳಿರುವ ಮಾಜಿ ಭಯೋತ್ಪಾದಕ, 'ಅಲ್ಪಸಂಖ್ಯಾತ ನಾಯಕ' ನ 'ಸಾಮಾಜಿಕ ಸೇವೆ' ಗೆ 'ಪದ್ಮಶ್ರೀ' ಯ ಬಾಗಿಲು ತೆರೆದಿದ್ದು ಕೇಂದ್ರ ಸರ್ಕಾರದ ಸಾಧನೆಯೇ ಸರಿ! ಈವರೆಗೆ 'ಪದ್ಮಶ್ರೀ' ಪಡೆದಿರುವ ಎಲ್ಲ ಗಣ್ಯರಿಗೂ 'ನಗಣ್ಯ' ಪಟ್ಟ ಕೊಟ್ಟಿದ್ದು ಕೇಂದ್ರದ ಸಾಧನೆಯೇ ಸರಿ!

ಇಷ್ಟೆಲ್ಲಾ ನಡೆಯುತ್ತಿದ್ದರೂ, 'ರಾಮಮಂದಿರ ನಿರ್ಮಾಣ' ಎಂಬ ಖಾತರಿ ಯೋಜನೆಯ ರೂವಾರಿ, 'ವಿರೋಧ ಪಕ್ಷ' ಎಂಬ ಸುಪ್ಪತ್ತಿಗೆಯಲ್ಲಿ ಕುಳಿತು ತಮ್ಮ ಪಕ್ಷದ ಸಮಸ್ಯೆಗಳನ್ನೇ ಮೈಮೇಲೆ ಎಳೆದುಕೊಂಡು ನರಳುತ್ತಿರುವವರಿಗೆ ಅತೃಪ್ತರ ಮನ ಒಲಿಸುವುದೇ 'ಸಾಮಾಜಿಕ ಕೆಲಸ' ವಾಗಿಬಿಟ್ಟಿದೆ.

ಕೇಂದ್ರ ಈ ನಿರ್ಧಾರಕ್ಕೆ ಜಮ್ಮು -ಕಾಶ್ಮೀರ ಮುಖ್ಯಮಂತ್ರಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ, ಸಂತೋಷಕ್ಕೋ, ದುಃಖಕ್ಕೋ ಗೊತ್ತಿಲ್ಲ. ಅಂತು ಇಂತೂ 'ಪದ್ಮಶ್ರೀ' ಯ ಘನತೆಗೆ 'ಇತಿಶ್ರೀ'...!

ಪತ್ರಿಕಾ ವರದಿ

No comments:

Post a Comment