ಸಬ್ ಕೆ ಸಾಥ್ , ಸಬ್ ಕಾ ಸಾಥ್ :

ಶಿಲಾ ಸ್ಮಾರಕದ ಆರ್ಥಿಕ ಬಜೆಟ್ ಕನ್ಯಾಕುಮಾರಿ ಜಿಲ್ಲಾ ಸಮಿತಿಯ 40000 ರುಪಾಯಿಗಳಿಂದ ಹೆಚ್ಚಾಗುತ್ತಾ ಬಂದು 1 ಕೋಟಿ 35 ಲಕ್ಷ ರೂಪಾಯಿಗಳ ಹಂತಕ್ಕೆ ಹೋಗಿ ನಿಂತಿತು . ಈ ದೊಡ್ಡ ಪ್ರಮಾಣದ ಧನರಾಶಿಯನ್ನು ಹೊಂದಿಸುವುದು ಸುಲಭದ ಕೆಲಸವಾಗಿರಲಿಲ್ಲ. 1965ರ ಭಾರತ ಪಾಕಿಸ್ತಾನ ಯುಧ್ಧ ಹಾಗು ರುಪಾಯಿಯ ಅಪಮೌಲ್ಯದ ಕಾರಣದಿಂದಾಗಿ ದೇಶವು ಗಂಭೀರವಾದ ಅರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಎಷ್ಟೋ ಬಾರಿ ಹಣದ ಅಭಾವದಿಂದ ಕೆಲಸಗಾರರಿಗೆ ಅಲ್ಪವೇತನವನ್ನೂ ಕೊಡಲಾಗುತ್ತಿರಲಿಲ್ಲ. ಇದರಿಂದಾಗಿ ಕೆಲಸಗಾರರನ್ನು ಉಳಿಸಿಕೊಳ್ಳಲೂ ಕಷ್ಟವಾಗುತ್ತದೇನೋ ಎಂದು ಕೆಲವೊಮ್ಮೆ ಅನಿಸುತ್ತಿತ್ತು. ಆದರೆ ಏಕನಾಥಜಿಯವರ ನಿಸ್ವಾರ್ಥ ಸಾಧನೆ ಮತ್ತು ಶಿಲಾಸ್ಮಾರಕದಿಂದ ಸ್ಫುರಿಸುತ್ತಿರುವ ಆಧ್ಯಾತ್ಮ ಚೇತನದಿಂದ ಪ್ರೇರಿತರಾಗಿ 'ನಾವು ನಮ್ಮ ಕುಟುಂಬದವರನ್ನು ಊರಿಗೆ ಕಳುಹಿಸಿದ್ದೇವೆ, ಅಲ್ಲಿ ಅವರಿಗೆ ತಕ್ಕ ಮಟ್ಟದ ವ್ಯವಸ್ಥೆ ಮಾಡಬಹುದು. ತಾವು ಇಲ್ಲೀಗ ನಮ್ಮ ಹೊಟ್ಟೆ ತುಂಬುವಷ್ಟರ ಮಟ್ಟಿಗೆ ವ್ಯವಸ್ಥೆ ಮಾಡಿದರೆ ಸಾಕು, ನಾವಿಲ್ಲಿ ಕೆಲಸ ಮಾಡುತ್ತಾ ಇರುತ್ತೇವೆ, ತಮ್ಮ ಬಳಿ ಹಣ ಬಂದ ನಂತರ ಕೊಟ್ಟರೆ ಸಾಕು ' ಎಂದು ಸ್ವತಃ ಕೆಲಸಗಾರೇ ಏಕನಾಥರ ಬಳಿ ತಿಳಿಸಿದ್ದರಂತೆ!

ರಾಜ್ಯ ಹಾಗು ಜಿಲ್ಲಾ ಸಮಿತಿಗಳ ನಿರ್ಮಾಣ ಪ್ರಕ್ರಿಯೆಯಲ್ಲಿ ಏಕನಾಥರು ಭಾರತದ ಬಾಹ್ಯ ವೈವಿಧ್ಯತೆ, ವಿಖಂಡಿತ ರಾಜನೀತಿಯ ಗರ್ಭದಲ್ಲಡಗಿರುವ ಸಾಂಸ್ಕೃತಿಕ ಐಕ್ಯತೆ ಹಾಗು ಧರ್ಮನಿಷ್ಠೆಗಳ ಪ್ರತ್ಯಕ್ಷ ಸಾಕ್ಷಾತ್ಕಾರವನ್ನು ಮಾಡಿದರು. ಧನಸಂಗ್ರಹಕ್ಕಾಗಿ ರಾಜ್ಯ ಸರ್ಕಾರಗಳ ಜೊತೆಯಲ್ಲಿ ಏಕನಾಥರು ಉದ್ಯಮಿಗಳ ಸಹಾಯವನ್ನೂ ಪಡೆದರು. ಮೊಟ್ಟ ಮೊದಲು ಅವರು ಪ್ರಸಿದ್ಧ ಉದ್ಯಮಿಯಾದ ಜುಗಲ್ ಕಿಶೋರರೆದುರು ತಮ್ಮ ಹಸ್ತವನ್ನು ಚಾಚಿ ಅವರಿಂದ 1 ಲಕ್ಷ ರೂಪಾಯಿಗಳ ಬೇಡಿಕೆಯನ್ನಿತ್ತರು. ಏಕನಾಥರಂತಹ ಓರ್ವ ಅಪರಿಚಿತ, ಸಾಧಾರಣ ವ್ಯಕ್ತಿಯು ಈ ಬೃಹತ್ ಯೋಜನೆಯನ್ನು ಪೂರ್ಣಗೊಳಿಸಿಯಾರೇ ಎಂಬ ವಿಶ್ವಾಸ ಆ ಉದ್ಯಮಿಗೆ ಮೂಡಲೇ ಇಲ್ಲ. ಅದರಿಂದಾಗಿ ಏಕನಾಥರು ಬಹಳವಾಗಿ ಕೇಳಿಕೊಂಡ ನಂತರ 50 ಸಾವಿರ ಮಾತ್ರ ಮೊದಲಿಗೆ ಕೊಟ್ಟು ಆ ನಂತರ ಇನ್ನುಳಿದ 50 ಸಾವಿರವನ್ನು ಕೊಟ್ಟಿದ್ದರು.
ಏಕನಾಥರು ಈ ಧನಸಂಗ್ರಹ ಕಾರ್ಯವನ್ನು ಬರೇ ಕೇವಲ ರಾಜ್ಯಗಳಿಗೆ, ಉದ್ಯಮಿಗಳಿಗಷ್ಟೇ ಸೀಮಿತಗೊಳಿಸದೆ ಈ ಸ್ಮಾರಕ ನಿರ್ಮಾಣ ಕಾರ್ಯದಲ್ಲಿ ದೇಶದಲ್ಲಿನ ಜನ-ಮನಗಳನ್ನು ಬೆಸೆಯಲು ಯೋಜನೆ ಹಾಕಿಕೊಂಡಿದ್ದರು. ಇದನ್ನೊಂದು ರಾಷ್ಟ್ರೀಯ ಪ್ರಯತ್ನದ ರೂಪದಲ್ಲಿ ವಿಶ್ವಕ್ಕೆ ಸಾಬೀತು ಪಡಿಸಲು ಬಯಸುತ್ತಿದ್ದರು. ಆದುದರಿಂದ ಜನರ ಬಳಿಗೆ ಹೋಗಿ ಧನ ಸಂಗ್ರಹಿಸುವುದಕ್ಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಶಾಲ ಸ್ವಯಂಸೇವಕ ವರ್ಗವು ತಮ್ಮೆಲ್ಲಾ ಶಕ್ತಿ, ಆಸಕ್ತಿಯೊಂದಿಗೆ ಈ ಅಭಿಯಾನದಲ್ಲಿ ತೊಡಗಿಕೊಂಡಿತು. ಕರ್ನಾಟಕ ಸರ್ಕಾರವು 1, 2 ರೂಪಾಯಿಗಳ ಕೂಪನ್ ಗಳ ಮೂಲಕ ಧನಸಂಗ್ರಹ ಮಾಡಲು ಮಾರ್ಗದರ್ಶನ ಮಾಡಿತ್ತು. 1966ರ ಡಿಸೆಂಬರ್ 25ಕ್ಕೆ ಮೈಸೂರು ರಾಜ್ಯ ಸಮಿತಿಯು ನಾಲ್ಕೂವರೆ ಲಕ್ಷ ರೂಪಾಯಿಗಳ ಚೆಕ್ಕನ್ನು ನೀಡುವುದರ ಮೂಲಕ ಏಕನಾಥರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿತ್ತು. ಈ ಕೂಪನ್ ಗಳನ್ನು ಸ್ಮೃತಿ ಚಿಹ್ನೆಯಾಗಿ ಜಾಗೃತೆಯಿಂದ ಕಾಪಾಡಬೇಕೆಂಬ ಭಾವನೆ ಪ್ರತಿಯೊಬ್ಬರ ಹೃದಯದಲ್ಲಿ ಜಾಗೃತವಾಗುವಷ್ಟು ಆಕರ್ಷಕವಾಗಿ ಅವುಗಳನ್ನು ಏಕನಾಥರು ರೂಪುಗೊಳಿಸಿದ್ದರು. ಸ್ಮಾರಕ ನಿರ್ಮಾಣಕ್ಕಾಗಿ ಸಂಗ್ರಹವಾದ 1 ಕೋಟಿ 35 ಲಕ್ಷದ ಒಟ್ಟು ಮೊತ್ತದ ಧನರಾಶಿಯಲ್ಲಿ 85 ಲಕ್ಷ ರೂಪಾಯಿಗಳು ಈ ಕೂಪನ್ ಗಳಿಂದಲೇ ಸಂಗ್ರಹ ವಾದದ್ದು! ಇಡೀ ದೇಶದಲ್ಲಿನ 30 ಲಕ್ಷ ಜನ ಈ ಕಾರ್ಯದಲ್ಲಿ ಆರ್ಥಿಕ ಸಹಾಯದಲ್ಲಿ ತೊಡಗಿದ್ದರು.
ವಿರೋಧಗಳಿಗೆ ಸೋಲು :

1967ರಲ್ಲಿ ಕಾಂಗ್ರೆಸ್ಸನ್ನು ಸೋಲಿಸಿ ದ್ರಾ.ಮು.ಕ ಪಕ್ಷವು ಅಧಿಕಾರಕ್ಕೆ ಬಂದಿತು. ಈ ಪಕ್ಷದ ಮೊದಲ ಮುಖ್ಯಮಂತ್ರಿ ಅಣ್ಣಾದೊರೈರವರ ಮೃತ್ಯುವಿನ ನಂತರ ಕರುಣಾನಿಧಿಯವರು ಮುಖ್ಯಮಂತ್ರಿಗಳಾದರು ಹಾಗೂ ಈ ಕಾರಣದಿಂದಾಗಿ 1970ರ ಸೆ.3 ರಂದು ಶಿಲಾಸ್ಮಾರಕದ ಔಪಚಾರಿಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರೇ ಅಧ್ಯಕ್ಷತೆ ವಹಿಸಿದ್ದರು. ಸ್ಮಾರಕ ನಿರ್ಮಾಣ ಕಾರ್ಯ ಮುಗಿದ ನಂತರ ಅವರದನ್ನು ನೋಡಲೆಂದು ಬಂದಾಗ ಮೂರ್ತಿಯನ್ನು ನೋಡಿದೊಡನೆ ಗದ್ಗದಿತರಾಗಿ 'ನನ್ನ ರಾಜ್ಯದಲ್ಲಿ ಈ ಶಿಲ್ಪಕಲೆಯ ಇಂತಹ ಭವ್ಯ ಕೃತಿಯು ನಿರ್ಮಿಸಲ್ಪಟ್ಟಿರುವುದು ನನಗೆ ತಿಳಿದೇ ಇರಲಿಲ್ಲ' ಎಂದು ನುಡಿದರು. ಕಾರ್ಯಕ್ರಮದಲ್ಲಿ 'ನಾನು ಈ ವೇದಿಕೆಯಿಂದಲೇ ಹೇಳ ಬಯಸುವುದೇನೆಂದರೆ ನಾನು, ನಮ್ಮ ಪಕ್ಷ ಹಾಗು ನನ್ನ ಸರ್ಕಾರವು ಸ್ವಾಮೀಜಿಯವರ ಜೀವನಾದರ್ಶಗಳಿಗೆ ಪೂರ್ಣ ರೀತಿಯಿಂದ ಸಮರ್ಪಿತವಾಗಿದೆ' ಎಂದೂ ನುಡಿದಿದ್ದರು.
(ಹಿಂದಿನ ಭಾಗ)