Sep 29, 2013

ಆಸ್ಪತ್ರೆಗಳ 'ಸುಲಿಗೆ'ಗಳಿಗೆ ಕಡಿವಾಣ ಬೇಕು..

ಇತ್ತೀಚೆಗಷ್ಟೇ ಬೆಂಗಳೂರಿನ ಕೆ.ಆರ್.ಆಸ್ಪತ್ರೆಯ ಸುಲಿಗೆಯ ಬಗ್ಗೆ ಅದೂ ಪೋಲಿಸ್ ಇಲಾಖೆಗೆ ಸೇರಿದ ವ್ಯಕ್ತಿಯ ವಿಷಯದಲ್ಲಿ ನಡೆದಿರುವ ಅವ್ಯವಹಾರ ಬರೀ ಒಂದು ಉದಾಹರಣೆಯಷ್ಟೇ. ಇಂತಹ ಸುಲಿಗೆಗಳನ್ನು ಮಾಡುವ ಲೆಕ್ಕವಿಲ್ಲದ ಆಸ್ಪತ್ರೆಗಳು ಬೆಂಗಳೂರಿನಲ್ಲಷ್ಟೇ ಅಲ್ಲ. ರಾಜ್ಯಾದ್ಯಂತ ಇದೆ. ರೋಗಿಗಳ ದೌರ್ಬಲ್ಯವನ್ನು, ಅಸಹಾಯಕತೆಯನ್ನು, ನಂಬಿಕೆಯನ್ನು 'ಅತಿ' ಸಂಪಾದನೆಯ ಮೂಲವನ್ನಾಗಿ ಮಾಡಿಕೊಂಡಿರುವ ಸಾಕಷ್ಟು ಆಸ್ಪತ್ರೆಗಳಿಗೆ ಅಂಕುಶ ಬೇಕಾಗಿದೆ. ಯಾವುದೇ ಸಮಸ್ಯೆಗೆ ಯಾರಾದಾರೂ ಚಿಕಿತ್ಸೆಗಾಗಿ ದಾಖಲಾದರೆ ಆದಷ್ಟು ಹೆಚ್ಚು ದಿನ ರೋಗಿಯನ್ನು ಉಳಿಸಿಕೊಳ್ಳುವ, ಅಗತ್ಯವಿಲ್ಲದ ಅಥವಾ ಅನಿವಾರ್ಯವಲ್ಲದ ಔಷಧಿಗಳನ್ನು ಗೀಚಿಕೊಡುವ ಕೆಲವರಾದರೂ ಇದ್ದೇ ಇದ್ದಾರೆ. ಸಾವಿರ ರೂಪಾಯಿಗಳ ಜಾಗದಲ್ಲಿ ಎರಡು ಸಾವಿರ ಖರ್ಚಾದರೆ ಕೆಲ 'ವಿಶೇಷ' ಸವಲತ್ತುಗಳ ಕಾರಣ ಕೊಡಬಹುದು. ಆದರೆ ಅದೇ ಒಂದು ಸಾವಿರದ ಜಾಗದಲ್ಲಿ ಹತ್ತು, ಹದಿನೈದು ಸಾವಿರ ಖರ್ಚಾಗುವಂತಾದರೆ ಅದು ವೈದ್ಯಕೀಯ ಕ್ಷೇತ್ರದಲ್ಲಿನ 'ಹೊಟ್ಟೆಬಾಕತನ'ವನ್ನು ತೋರಿಸುತ್ತದೆ.


ಲೆಕ್ಕಕ್ಕೂ ಸಿಗದ ಆರೋಗ್ಯ ವಿಮಾ ಸಂಸ್ಥೆಗಳೂ ಸಹ ತಮ್ಮದೇ ಆದ ವೈದ್ಯರ ತಂಡವನ್ನು ರಚಿಸಿಟ್ಟುಕೊಂಡಿರುತ್ತವೆ. ಯಾವುದೇ ಚಿಕಿತ್ಸೆಗೆ ಅವರದ್ದೇ ವೈದ್ಯರ ತಂಡ ಇಷ್ಟೇ ಮೊತ್ತವನ್ನ ನಿಯಮಿತಗೊಳಿಸಿ ಖಾತರಿಗೊಳಿಸುತ್ತದೆ. ಆ ಮೊತ್ತವನ್ನು ಮಾತ್ರ ಆಸ್ಪತ್ರೆಗೆ ರೋಗಿಯ ಪರವಾಗಿ ನೀಡುತ್ತದೆ. ಉಳಿದ ಹಣವನ್ನು ಚಿಕಿತ್ಸೆ ಪಡೆದವರೇ ನೀಡಬೇಕು. ಅಂದರೆ ವಿಮಾ ಸಂಸ್ಥೆಗಳಿಗೂ ಗೊತ್ತಿದೆ ಆಸ್ಪತ್ರೆಗಳ ಸುಲಿಗೆಗಳಿಗೆ ಬಗ್ಗೆ. ಆ ಕಾರಣಕ್ಕೇನೆ ಅವರದ್ದೇ ಆದ ವೈದ್ಯರ ತಂಡ ಇರುತ್ತದೆ.

ಈ ಎಲ್ಲ ಸುಲಿಗೆಗಳ ಕಡಿವಾಣಕ್ಕೆ ಸರ್ಕಾರದ ಕಡೆಯಿಂದ ಅಥವಾ ಸರ್ಕಾರೀ ನಿಯಂತ್ರಿತ ಖಾಸಗಿ ವೈದ್ಯರ ತಂಡದ ಅವಶ್ಯಕತೆ ಇದೆ. ತಾವು ಪಡೆದ ವೈದ್ಯಕೀಯ ಸೌಲಭ್ಯಗಳು ಮತ್ತು ಅವುಗಳ ಪಾವತಿಗಳ ಬಗ್ಗೆ ಖಾತರಿ ಮಾಡಿಕೊಳ್ಳುವ ಸೌಲಭ್ಯ ಎಲ್ಲ ಸಾರ್ವಜನಿಕರಿಗೆ ಸಿಗುವಂತಾಗಬೇಕು. ಆಗಲೇ ಉತ್ತಮ ಚಿಕಿತ್ಸೆಗೆ ಅನುಗುಣವಾದ ಪಾವತಿ ಮಾಡಿದ ಸಾರ್ಥಕತೆ ಪ್ರತಿ ವ್ಯಕ್ತಿಗೆ ಸಿಗುತ್ತದೆ. ಆ ಮೂಲಕ ವೈದ್ಯಕೀಯ ವ್ಯವಸ್ಥೆ ಹಾಗೂ ಸಾರ್ವಜನಿಕರ ನಡುವೆ ಉತ್ತಮ ಸಂಬಂಧ ಹಾಗೂ  ನಂಬಿಕೆ ಏರ್ಪಡಿಸುವ ಕೆಲಸ ಆಗಬೇಕಿದೆ.


1 comment:

  1. ಮೋಸ ಹೋಗುವವರು ಇರುವುದರಿಂದಲೇ ಮೋಸ ಮಾಡುವವರೂ ಬೆಳೆದರು. ಸರ್ಕಾರಗಳ ಜವಬ್ದಾರಿಯುತ ನಿರ್ವಹಣೆಯೊಂದರಿಂದಲೇ ಇಂತಹ ಸವಾಲು ಮತ್ತು ತೊಂದರೆಗಳನ್ನು ನಿವಾರಿಸುವುದು ಸಾಧ್ಯ. ಸರ್ಕಾರೀ ಸ್ವಾಮ್ಯದ ಆಸ್ಪತ್ರೆಗಳನ್ನು ಉತ್ತಮ ದರ್ಜೆಗೇರಿಸಿ, ವೈದರಿಗೆ ಬೇಕಾದ(ಸರ್ಕಾರದ ಮಿತಿಯಲ್ಲಿರುವ) ಸವಲತ್ತುಗಳನ್ನು ಒದಗಿಸುವಲ್ಲಿ ಸರ್ಕಾರ ಸಫಲವಾದರೆ ವೈದ್ಯರನ್ನು ಆಕರ್ಷಿಸುವುದು ದೊಡ್ಡ ಸವಾಲೇನಲ್ಲ.
    ಇನ್ನು ಸರ್ಕಾರಗಳ ಆಯ್ಕೆ ನಮ್ಮ ಕೈಯಲ್ಲಿದೆ. ಜನ ಸಾಮನ್ಯರು ಜಾಗೃತರಾದರೆ ದೇಶ ಜಾಗೃತವಾದಂತೆ.

    ReplyDelete