ನಾವು ನಾಲ್ವರು ಸ್ನೇಹಿತರು ಪ್ಲಾನ್ ಹಾಕಿದ್ದು ಮುಳ್ಳಯ್ಯನಗಿರಿಗೆ ಹೋಗುವ ಎಂದು, ಆದರೆ ಹೊರಡುವ ಹಿಂದಿನ ದಿನ ನಮ್ಮ ಮೈಲ್ಸ್ ನೋಡಿದ್ರೆ ಕುಮಾರಪರ್ವತಕ್ಕೆ ಹೋಗುವ ಅಂತ ಇತ್ತು. ನಾನು ನೋಡಿರಲೂ ಇಲ್ಲ, ಎಲ್ಲಿಗಾದರೂ ಪರವಾಗಿಲ್ಲ ಅಂತ ನಾನಂತೂ ರೆಡಿ ಆದೆ..
25 ರ ಶುಕ್ರವಾರ ರಾತ್ರಿ 1೦ ರ ಸುಮಾರಿಗೆ ಕತ್ರಿಗುಪ್ಪೆಯ ಬಸ್ ಸ್ಟಾಪ್ ಗೆ ಬಂದ್ವಿ. ಬಸ್ ಗೆ ಕಾದು ಕಾದು ಕೊನೆಗೆ ಅಟೋ ಹಿಡಿದು ಮೆಜೆಸ್ಟಿಕ್ ಗೆ ಹೋದರೆ ಮಡಿಕೇರಿಯ ಬಸ್ ಗಳೆಲ್ಲ ಸ್ಯಾಟಲೈಟ್ ಬಸ್ ಸ್ಟ್ಯಾಂಡಿನಿಂದ ಹೊರಡುತ್ತವೆ ಅಂತ ಕೇಳಿದಾಗ 'ಅಯ್ಯೋ' ಅಂತ ಅಂದುಕೊಂಡು, ಚಿಕ್ಕಮಗಳೂರಿನ ಬಸ್ ನೋಡಿ ಮುಳ್ಳಯ್ಯನಗಿರಿಗಾದರೂ ಹೋಗೋಣ ಅಂತ ಯೋಚನೆ ಮಾಡುತ್ತಲೇ ಸ್ಯಾಟಲೈಟ್ ಬಸ್ ಸ್ಟ್ಯಾಂಡಿಗೆ ಹೋಗುವ ಬಸ್ ಹತ್ತಿದೆವು.
ನಮ್ಮ ದುರಾದೃಷ್ಟ, ನಾವು ಹೋಗುವಷ್ಟೊತ್ತಿಗೆ ರಾತ್ರಿ 11.30. ಮಡಿಕೇರಿಯ ಕಡೆಯ ಬಸ್ ಹೋಗಿಯಾಗಿತ್ತು. ಮತ್ತೊಮ್ಮೆ ತಲೆ ಮೇಲೆ ಕೈ ಇಟ್ಟುಕೊಳ್ಳುವ ಸರದಿ ನಮ್ಮದಾಗಿತ್ತು. ಏನು ಮಾಡುವ ಎಂದು ಯೋಚಿಸುತ್ತಲೇ ಕುಶಾಲನಗರಕ್ಕೆ ಹೋಗುವ ಕಡೆಯ ಬಸ್ ಕಂಡ ಕೂಡಲೇ ಹತ್ತಿ ಕೂತು ನಿದ್ದೆಗೆ ಅಣಿಯಾದೆವು.
ಸರಿಯಾಗಿ ಬೆಳಗ್ಗೆ 5 ಗಂಟೆಗೆ ಕುಶಾಲನಗರಕ್ಕೆ ತಲುಪಿದೆವು. ಬಸ್ಸನ್ನು ಇಳಿದರೆ, ಅಬ್ಬಬ್ಬ.., ಹಿಮಾಲಯದ ಚಳಿಯಲ್ಲಿ ಇಳಿದಂತಹ ಅನುಭವ. ಬಹುಶ 7-8 ಉಷ್ಣತೆ ಇದ್ದಿರಬಹುದು. ಆ ಪರಿಯ ಚಳಿಯನ್ನು ನಾವು ಎರಡು ವರ್ಷಗಳ ಹಿಂದೆ ಸ್ಕಂದಗಿರಿಗೆ ಹೋದಾಗ ನೋಡಿದ್ದು...
ಕುಶಾಲನಗರದಿಂದ ನಾವು ಹೋಗಬೇಕಾದ್ದು ಸೋಮವಾರಪೇಟೆಗೆ. ಸಿಕ್ಕವರನ್ನೆಲ್ಲ ಕೇಳುತ್ತ ಸುಮಾರು 6 .3೦ರ ಸುಮಾರಿಗೆ ಬಂದ ಸೋಮವಾರಪೇಟೆಯ ಬಸ್ ಹತ್ತಿ, ಶಯನೋತ್ಸವಕ್ಕೆ ನಾಂದಿ ಹಾಡಿದೆವು.
ಅಲ್ಲಿಂದ ೨ ಕಿಲೋಮೀಟರ್ ನಡೆದು ಜಲಪಾತವನ್ನು ತಲುಪಿದೆವು. ಎರಡೆರಡು ಅಡಿಗಳ ಎತ್ತರದ ಮೆಟ್ಟಿಲುಗಳನ್ನು ಇಳಿದು, ಜಲಪಾತದಲ್ಲಿ ಸ್ನಾನಾದಿಗಳನ್ನು ಮುಗಿಸಿ, ತಿಂಡಿ ತಿನ್ನುವ ತನಕ ಎಲ್ಲ ಸೂಪರ್... ಆದರೆ ವಾಪಸ್ ಹತ್ತುವಾಗ.... ಆ ಎತ್ತೆತ್ತರದ ಮೆಟ್ಟಿಲುಗಳನ್ನು ಹತ್ತಿ ಬರಲು ಪಟ್ಟ ಕಷ್ಟ, ಅಬಾಬಬಬಬ..... ವರ್ಣಿಸಲಸಾಧ್ಯ. ಕುಮಾರ ಪರ್ವತಕ್ಕೆ ಶುರು ಮಾಡುವ ಮುನ್ನವೇ ನಮ್ಮ ಉತ್ಸಾಹ ಮಕಾಡೆ ಮಲಗಿತ್ತು.
ಅಂತು ಇಂತೂ ದೇಹದ ಶಕ್ತಿಯನ್ನೆಲ್ಲ ವ್ಯಯಿಸಿ ಮೇಲೆ ಬಂದು, ಕುಮಾರ ಪರ್ವತಕ್ಕೆ ದಾರಿ ಎಲ್ಲಿಂದ ಎಂದು ಯೋಚಿಸುತ್ತಲೇ 'ಕಂಡ ದಾರಿಯೇ ಇರಬೇಕು' ಎಂಬ ಅನುಮಾನದಿಂದಲೇ ನಡೆಯಲು ಶುರು ಮಾಡಿದೆವು. ನಮ್ಮ ಅದೃಷ್ಟಕ್ಕೆ, ವೆಂಕಟೇಶ್ ಎಂಬುವರು ಸಿಕ್ಕಿ ನಾವು ಹೋಗುತ್ತಿದ್ದ ದಾರಿಯನ್ನು ಖಚಿತ ಪಡಿಸಿದಾಗ ಸ್ವಲ್ಪ ಸಮಾಧಾನ. ಇಲ್ಲದಿದ್ದರೆ ಆ ಸುಸ್ತಿನಲ್ಲಿ ಮತ್ತೆ ಎಲ್ಲಿ ವೃಥಾ ನಡೆಯಬೇಕಾಗುತ್ತದೋ ಎಂದು ಭಯ ಪಟ್ಟಿದ್ದೆವು.
ಬೆಟ್ಟದ ತುದಿ ತಲುಪುವ ಹೊತ್ತಿಗೆ ಸಾಯಂಕಾಲ 5.30 ಆಗಿತ್ತು. ಆ ಸುಸ್ತಿನಲ್ಲಿ ಒಮ್ಮೆ ವಾಪಸ್ ಹೋಗೋಣವೇ ಎಂದು ಯೋಚಿಸಿದ್ದೂ ಉಂಟು. ಆದರೆ ಅದಾಗಲೇ ಬೆಟ್ಟವನ್ನು ಹತ್ತಿ ಇಳಿಯುತ್ತಿದ್ದ ಹೆಣ್ಣು ಮಕ್ಕಳು, 9 ವರ್ಷದ ಹುಡುಗನನ್ನು ನೋಡಿ, ನಮ್ ಬಗ್ಗೆ ನಾವೇ ಛೀ ಎಂದುಕೊಂಡು ಕೆಲಸ ಮುಗಿಸಿದ್ದೆವು.
ಪೂರ್ಣ ಪ್ರಮಾಣದ 'ಸೂರ್ಯಾಸ್ತ'ವನ್ನು ಕಣ್ತುಂಬಿಕೊಂಡು ಮಲಗಲು ಅಣಿಯಾದೆವು.
ಸಿಕ್ಕಾಪಟ್ಟೆ ಚಳಿ ಇರುತ್ತದೆ ಎಂದು 2-3 ಸುತ್ತಿನ ಬಟ್ಟೆಗಳಿಂದ ತಯಾರಾದೆವು. ಯಾವ ಟೆಂಟ್ ಗಳೂ ಇಲ್ಲದೆ ಹೋಗಿದ್ದ ನಮಗೆ ಬಂಡೆಗಳೇ ಹಾಸಿಗೆಗಳಾದವು. 7-8 ಗಂಟೆಯ ಸಮಯದಲ್ಲಿ ಅಷ್ಟೇನೂ ಚಳಿಯಿರಲಿಲ್ಲ. ವರಸದೃಶವಾದ 'ಪುಳಿಯೊಗರೆ'ಯನ್ನು ತಿಂದು ಸ್ವಲ್ಪ ಹೊತ್ತು ಮಲಗಿದೆವು. ಆದರೆ ಆನಂತರ ಶುರುವಾದ ಚಳಿ ನಮ್ಮನ್ನು ಬೆಳಿಗ್ಗೆಯವರೆಗೂ ಪೂರ್ಣ ಎಚ್ಚರವಾಗಿಯೇ ಇರಿಸುವಲ್ಲಿ ಸಫಲವಾಯಿತು! ನಿದ್ದೆ ಬಂದ ಮೇಲೆ ಯಾವ ಚಳಿಯು ಏನೂ ಮಾಡುವುದಿಲ್ಲ ಎಂದು ಅವಾಗವಾಗ ನಿದ್ದೆ ಮಾಡಲು ಸಾಕಷ್ಟು ವಿಫಲ ಪ್ರಯತ್ನ ಮಾಡಿದ್ದುಂಟು.
7.15 ಗೆ ಹೊರಟ ನಾವು ಸುಮಾರು 16-18 ಕಿಲೋಮೀಟರ್ ಗಳ ದೂರವನ್ನು ಕ್ರಮಿಸಬೇಕಾಗಿತ್ತು. ನೀರಿಲ್ಲ, ಹೊಟ್ಟೆಗಿಲ್ಲ. ನಡೆಯುತ್ತಾ ಎಲ್ಲ ಬಗೆಯ ಸುಸ್ತುಗಳನ್ನೂ ಹೊತ್ತು 9 ಕಿಲೋಮೀಟರ್ ಗಳನ್ನು ನಡೆದು, 4 ಬೆಟ್ಟಗಳನ್ನು ದಾಟಿ, 1೦.3೦ಕ್ಕೆ ಭಟ್ಟರ ಮನೆಗೆ ಹೋಗಿ ಊಟ ಮಾಡಿ, ಎಲ್ಲೇ ಮುಂದಿದ್ದ ಅವರ ತೋಟದಲ್ಲಿ 1 ಗಂಟೆಗಳ ಕಾಲ ಮಲಗಿ, 12.30ಗೆ ಪುನಃ ಹೊರಟೆವು. ಅಲ್ಲಿಂದ ಇನ್ನು 6-8 ಕಿಲೋಮೀಟರ್ ಗಳ ದೂರವಿತ್ತು ಕುಕ್ಕೆಸುಬ್ರಮಣ್ಯಕ್ಕೆ.
ಅಲ್ಲಿಂದ ನಡೆದ ನಮಗಾದ ಸುಸ್ತು, ಅನುಭವ,... ಹುಷ್ಶಪಾ.. ಎಷ್ಟು ನಡೆದರೂ ಕುಕ್ಕೆಯನ್ನು ತಲುಪಲೇ ಆಗುತ್ತಿರಲಿಲ್ಲ. ಎಷ್ಟು ನಡೆದು ಯಾರನ್ನು ಕೇಳಿದರೂ ಇನ್ನು 2 ಕಿಲೋಮೀಟರ್ ಇದೆ ಎಂತಲೇ ಹೇಳುತ್ತಿದ್ದರು. ಆ ಕಾಡನ್ನು ದಾಟುವಾಗ ಸಿಗುತ್ತಿದ್ದ ಪ್ರತಿ ಇಳಿಜಾರನ್ನೂ 'ಇದೇ ಕೊನೆಯ ಇಳಿಜಾರು' ಎಂದು ಕೊಳ್ಳುತ್ತಲೇ ಇಳಿಯುತ್ತಿದ್ದೆವು. ಆದರೆ ಕುಕ್ಕೆ ಮಾತ್ರ ಬರುತ್ತಿರಲಿಲ್ಲ.
ದೇವರ ದರ್ಶನಕ್ಕೆ ಪ್ರಯತ್ನಿಸಿದೆವು. ಏನು ವಿಶೇಷವಿತ್ತೋ ಏನೋ, ಅಂದು ಕುಕ್ಕೆ ಅತಿ ಜನಜಂಗುಳಿಯಿಂದ ಕೂಡಿತ್ತು. ಒಂದು ಗಂಟೆ ಕಾದರೂ ದರ್ಶನವಾಗುವ ಸಾಧ್ಯತೆಗಳಿರಲಿಲ್ಲ. ದೂರದಿಂದಲೇ ಕೈ ಮುಗಿದು, 9 ಗಂಟೆಗೆ ಊಟ ಮಾಡಿ, 9.30 ರ ಹೊತ್ತಿಗೆ ಹೊರಟು, 10 ಗಂಟೆಗೆ ಹೊರಡಲಿದ್ದ ಬಸ್ ಹಿಡಿದು ಬೆಂಗಳೂರಿಗೆ ಬಂದಾಗ ಬೆಳಿಗ್ಗೆ 6 ಗಂಟೆ. ಮನೆಗೆ ಬಂದು 'ಇಂದು ಸಿಕ್ ಲೀವ್' ಎಂದು ನಿಶ್ಚಯಿಸಿ ಮಲಗಿದೆವು.
ಎರಡು ದಿನಗಳಲ್ಲಿ ಸರಿಸುಮಾರು 35-40 ಕಿಲೋಮೀಟರ್ ಗಳನ್ನು ಸರಿಯಾಗಿ ಹೊಟ್ಟೆಗಿಲ್ಲದೆ ನಡೆದ ನಮಗೆ ಮತ್ತೊಮ್ಮೆ ಚಾರಣದ ಸಹವಾಸವೇ ಬೇಡ ಎಂಬಷ್ಟರ ಮಟ್ಟಿಗೆ ಸುಸ್ತಾಗಿತ್ತು. ಆದರೂ ಒಂದು ಹೊಸ ಅನುಭವವಾಗಿತ್ತು.
No comments:
Post a Comment