Mar 27, 2012

‘ಒಂಟಿ ಭಾವ’ದ ಕೈಗೆ ಸಿಕ್ಕಿ ನರಳಿದ್ದು...

ನಾನು ಕಳೆದ ಬಾರಿ ಜಪಾನ್ ಗೆ ಬಂದಾಗ ನನ್ನ ಸಹೋದ್ಯೋಗಿಯೊಬ್ಬರ ಜೊತೆ ಇದ್ದಿದ್ದಕ್ಕೆ ನನಗೆ ಊಟದ ವಿಷಯದಲ್ಲೂ, ಭಾಷೆಯ ವಿಷಯದಲ್ಲೂ ಯಾವುದೇ ಸಮಸ್ಯೆಗಳೂ ಇರಲಿಲ್ಲ. 45 ದಿನಗಳು ಹೇಗೆ ಕಳೆದ ಹೋದವು ಎಂಬುದೇ ತಿಳಿಯಲಿಲ್ಲ. ಅದೇ ಕಾರಣಕ್ಕೆ ನಾನು ವಾಪಾಸ್ ಭಾರತಕ್ಕೆ ಬಂದಮೇಲೆ ಮುಂದಿನ ಜಪಾನ್ ಅವಕಾಶಕ್ಕೆ ಅತ್ಯಂತ ಸಡಗರದಿಂದಲೇ ಸಮ್ಮತಿ ಸೂಚಿಸಿದ್ದೆ.

ಆದರೆ ಈ ಸಲ ಜಪಾನ್ ನ ‘ನರಿತ ಏರ್ಪೋರ್ಟ್’ ಗೆ ಬರುವಾಗಿನ ತನಕ ಸಹಜವಾಗಿಯೇ ಇದ್ದೆ. ಎಲ್ಲ ಪರೀಕ್ಷೆಗಳನ್ನು ಮುಗಿಸಿಕೊಂಡು 'ನರಿತ ಎಕ್ಸ್ ಪ್ರೆಸ್' ನ ಟಿಕೆಟ್ ತೆಗೆದುಕೊಂಡು ರೈಲುಹತ್ತಿ ಕೂತ ತಕ್ಷಣಕ್ಕೆ ಮನಸ್ಸಿನಲ್ಲಿ ಏನೋ ತಳಮಳ, ದುಃಖ. ಮನೆಗೆ ಹೋದಮೇಲೆ ಹೇಗೋ ಏನೋ, ನಾಳೆಯಿಂದ ನಾನು ಒಬ್ಬನೇ ನನ್ನ ರೂಮಿನಲ್ಲಿ ಇರಬೇಕು, ನಾನೇ ಅಡಿಗೆ ಮಾಡಿಕೊಳ್ಳಬೇಕು, ಅದೂ ಪೂರ್ಣ ಸಸ್ಯಾಹಾರದ ಅಡಿಗೆ..! ಬಟ್ಟೆ ಒಗೆದುಕೊಳ್ಳುವುದು, ಭಾಷೆಯ ಗಂಧವಿಲ್ಲದೆ ಅಡಿಗೆಗೆ ಬೇಕಾದ ಸಾಮಾನುಗಳನ್ನು ಕೊಂಡುಕೊಳ್ಳುವುದು, ಯಾವ ಪುರುಷಾರ್ಥಕ್ಕಾಗಿ ನಾನು ಇಲ್ಲಿಗೆ ಬಂದೆ, ಏನಾದರು ಸಮಸ್ಯೆಯಾದರೆ, ಆರೋಗ್ಯದ ವ್ಯತ್ಯಯವಾದರೆ ಯಾರು ಗತಿ, ಎಂಬೆಲ್ಲ ಯೋಚನೆಗಳು ಬಂದು ಕಣ್ಣುಗಳು ತನಗೆ ತಾವೇ ಒದ್ದೆಯಾದವು ! ಹಣವಾದರೆ ಸ್ವಲ್ಪ ತಡವಾಗಿಯಾದರೂ ನಮ್ಮ ದೇಶದಲ್ಲೇ ಸಂಪಾದಿಸಬಹುದು. ನೆಮ್ಮದಿಯಿಂದ ಅಪ್ಪ-ಅಮ್ಮ ಹತ್ತಿರ, ಅಕ್ಕನ ಹತ್ತಿರ ಇರುವುದರ ಮುಂದೆ ಇಲ್ಲಿನ ಸಂಪಾದನೆ ಯಾವ ಲೆಕ್ಕ ಎಂದು ನನ್ನನ್ನು ನೋಡಿ ನಾನೇ ಅಸಹ್ಯ ಪಟ್ಟುಕೊಂಡೆ.

ಯೋಕೋಹಾಮಕ್ಕೆ ತಲುಪಿ ಅಲ್ಲಿಂದ ಕಾರನ್ನು ಹಿಡಿದು , ಚಾಲಕನಿಗೆ ಜಪಾನೀಸ್ ಭಾಷೆಯ ವಿಳಾಸವನ್ನು ಕೊಟ್ಟು ನಾನಿರಬೇಕಾದ ಅಪಾರ್ಟ್ಮೆಂಟ್ ತಲುಪಿದರೆ ಹೇಗೆ ಒಳಗೆ ಹೊಕಬೇಕೆಂಬುದೇ ತಿಳಿಯಲಿಲ್ಲ. ಅಲ್ಲೇ ಬರುತ್ತಿದ್ದ ಒಬ್ಬರಿಗೆ ಕೇಳಿದರೆ, ಅವರಿಗೆ ಆಂಗ್ಲ ಭಾಷೆ ಅರ್ಥವಾಗದೆ ಅವರು ತಮ್ಮನ್ನು ತಾವೇ ಬೈದುಕೊಂಡು ಹೋದಂತಿತ್ತು. ತಲೆಯಲ್ಲಿರುವ ಬುದ್ಧಿಯನ್ನು ಹಾಗು-ಹೀಗೂ ಬಳಸಿ ನನ್ನ ಮನೆಯ ಸಂಖ್ಯೆಯನ್ನು ಹಿಡಿದು ಹೊರಟು ತಲುಪಿ ಬಾಗಿಲು ತೆಗೆದರೆ ನಾಲ್ಕು ಹೆಜ್ಜೆಗೇ ಮನೆ ಮುಗಿದಿತ್ತು..! ಅಡಿಗೆ ಮನೆಯಿಂದಲೇ ಶುರು, ಕೊಠಡಿಗೇ ಕೊನೆ...!

ಒಳಗೆ ಬಂದು ಅಡಿಗೆ ಮಾಡಲು ಏನೇನಿದೆ ಎಂಬುದನ್ನು ನೋಡಿ ' ನಾಲ್ಕು ಸಾಮಾನಿನಲ್ಲಿ 3 ತಿಂಗಳುಗಳ ಕಾಲ ಅಡಿಗೆ ಹೇಗೆ ಮಾಡಿಕೊಳ್ಳುವುದು' ಎಂಬೆಲ್ಲ ಯೋಚನೆ ಬಂದು ಮಂಚದ ಮೇಲೆ ಬಂದು ಮಲಗಿದವನೇ 2 ಗಂಟೆಗಳ ಕಾಲ ಸುಮ್ಮನೆ 'ಒಂಟಿ ಭಾವದಲ್ಲಿ' ನರಳಲು ಶುರು ಮಾಡಿದೆ. ನನ್ನ ಸಹೋದ್ಯೋಗಿಯೊಬ್ಬ ಇದ್ದ ಕಾರಣಕ್ಕೆ 2 ದಿನಗಳ ವರೆಗೆ ಕೊಂಚ ಸಹಜವಾಗಿದ್ದ ನಾನು ಅವನು ವಾಪಸ್ ಭಾರತಕ್ಕೆ ಹೊರಟು ನಿಂತದನ್ನು ನೋಡಿ, ಅವನು ಪಡುತ್ತಿದ್ದ ಖುಷಿಯನ್ನು ನೋಡಿ, ನಾನು ಮತ್ತೂ ಭಾವನಾ ಜೀವಿಯಾದೆ. ಅಂದಿನಿಂದಲೇ ಹೊರಡುವ ದಿನವನ್ನು ನೋಡಲು ಶುರುವಿಟ್ಟುಕೊಂಡೆ..!

ಸುಮಾರು ಒಂದು ವಾರಗಳ ಕಾಲದ ತನಕ ಹೊರಡುವುದರ ಬಗ್ಗೆ ಯೋಚಿಸಿ, ಯೋಚಿಸಿ, ಲ್ಯಾಪ್ ಟಾಪ್ ಹಾಗು ಅಂತರ್ಜಾಲದ ಕಾರಣದಿಂದ ಅಮ್ಮ, ಅಪ್ಪ, ಅಕ್ಕ, ಸ್ನೇಹಿತರು ಎಂಬೆಲ್ಲರ ಜೊತೆ ಮಾತಾಡಿ ಸಮಾಧಾನವಾಗಲು ನನಗೆ ಕೊಂಚ ಸಮಯವೇ ಹಿಡಿದಿತ್ತು.

ಆದರೆ ಒಂದು ಸಮಾಧಾನ ವಿಷಯವೆಂದರೆ 'ಅನುಭವ'. ಒಬ್ಬನೇ ಬಂದಾಗ, ಇದ್ದಾಗ ಹಾಗು ಬಂಧುಗಳ ಜೊತೆಯಲ್ಲಿದ್ದರೆ ಹೇಗೆ ಎಂಬನುಭವ ಸಿಕ್ಕಿದ್ದು.

No comments:

Post a Comment