
ಮೆರವಣಿಗೆ ಸಾಗುವ ಮಾರ್ಗದಲ್ಲಿ ಎಲ್ಲಿ ನೋಡಿದರೂ ಅಲ್ಲಿ ತಳಿರು ತೋರಣಗಳು, ಕೇಸರಿ ಧ್ವಜಗಳು ಕಣ್ಣಿಗೆ ತಂಪನ್ನೆರೆಯುತ್ತಿತ್ತು. ಭಾರತ ಮಾತಾಕಿ ಜೈ, ವಂದೇ ಮಾತರಂ, ಕಟ್ಟುವೆವು ಕಟ್ಟುವೆವು ರಾಮ ಮಂದಿರ ಕಟ್ಟುವೆವು, ಭಾರತ ಮಾತೆಯ ಸಿಂಧೂರ ಕಾಶ್ಮೀರ ಕಾಶ್ಮೀರ ಎಂಬ ಘೋಷಣೆಗಳು ಹೆಚ್ಚಾಗಿ ಕೇಳಿಸುತ್ತಿದ್ದವು. ಸಾಕಷ್ಟು ಕಡೆ ವೀರ ಸಾವರ್ಕರ್, ಚಂದ್ರಶೇಖರ್ ಆಜಾದ್ ಮುಂತಾದ ಪ್ರಾತಃ ಸ್ಮರಣೀಯ ಕ್ರಾಂತಿಕಾರರ ಭಾಚಿತ್ರಗಳು ಕಾಣಿಸುತ್ತಿದ್ದವು.

ನೆರೆದಿದ್ದ ಭಕ್ತ ಸಮೂಹಕ್ಕೆ ಅಲ್ಲಲ್ಲಿ ನೀರು, ಪಾನಕ, ಲಘು ಉಪಹಾರದ ವ್ಯವಸ್ಥೆಯಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಹಲಾವರು ಮಹಿಳೆಯರು ದೇಶಭಕ್ತಿ ಗೀತೆ - ಭಜನೆಗಳನ್ನು ಹಾಡುತ್ತ ಮೆರವಣಿಗೆಗೆ ಶ್ರದ್ಧೆ ತುಂಬುತ್ತಿದ್ದುದು ಕಂಡು ಬಂತು. ಈ ನಡುವೆ ಕೆಲ ಕಾಲ ಮಳೆ ಬಂದು ಅಡ್ಡಿಪಡಿಸಲೆತ್ನಿಸಿದರೂ ಜನರ ಉತ್ಸಾಹ ನೋಡಿ ನಂತರ ಸುಮ್ಮನಾಯಿತು.
ನಗರದ ಗಾಂಧೀ ಬಜಾರ್ , ಶಿವಪ್ಪನಾಯಕ ವೃತ್ತ, ಗೋಪಿ ವೃತ್ತ, ಶಿವಮೂರ್ತಿ ವೃತ್ತ, ಜೈಲ್ ವೃತ್ತ, ಮಹಾವೀರ್ ವೃತ್ತ ಹಾಗು ಕಾನ್ವೆಂಟ್ ವೃತ್ತಗಳ ಮೂಲಕ ಸಾಗಿದ ಮೆರವಣಿಗೆ ರಾತ್ರಿ ಸುಮಾರು ೧೧ ಗಂಟೆಯ ಸುಮಾರಿಗೆ ಮುಕ್ತಾಯವಾಗಿ ಮೂರ್ತಿಯನ್ನು ತುಂಗಾ ನದಿಯಲ್ಲಿ ವಿಸರ್ಜಿಸಲಾಯಿತು.

ಧಾರ್ಮಿಕ ವಿಷಯ ಅತ್ಯಂತ ಸೂಕ್ಷ್ಮ ಹಾಗು ಅವರವರ ನಂಬಿಕೆಗೆ ಬಿಟ್ಟ ವಿಷಯ. ಬೇರೆಯವರ ಶ್ರದ್ಧಾ-ನಂಬಿಕೆಗಳ ವಿರುಧ್ಧ ದುಷ್ಟ ಕೃತ್ಯಗಳನ್ನು ಎಸಗುವವರ ಪುಂಡರಿಗೆ ಇದನ್ನು ಅರ್ಥ ಮಾಡಿಸಲು ಇಂತಹ ಸಾಮಾಜಿಕ ಜಾಗೃತಿಯ ಕಾರ್ಯಕ್ರಮಗಳು ಅವಶ್ಯವೂ ಹೌದು, ಅನಿವಾರ್ಯವೂ ಹೌದು.
No comments:
Post a Comment